ADVERTISEMENT

VaraMahalakshmi Festival 2022| ಶ್ರೀಲಕ್ಷ್ಮೀ: ವರಗಳ ತಾಯಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಆಗಸ್ಟ್ 2022, 2:48 IST
Last Updated 5 ಆಗಸ್ಟ್ 2022, 2:48 IST
ಶ್ರೀವರಮಹಾಲಕ್ಷ್ಮೀವ್ರತ
ಶ್ರೀವರಮಹಾಲಕ್ಷ್ಮೀವ್ರತ   

ಮಹಾಭಾರತದ ಒಂದು ಮಾತು ಹಣದ ಮಹಿಮೆಯನ್ನು ಸೊಗಸಾಗಿ ಹೇಳುತ್ತದೆ:

ಯಸ್ಯಾರ್ಥಾಸ್ತಸ್ಯ ಮಿತ್ರಾಣಿ ಯಸ್ಯಾರ್ಥಾಸ್ತಸ್ಯ ಬಾಂಧವಾಃ|

ಯಸ್ಯಾರ್ಥಾಃ ಸ ಪುಮಾನ್‌ ಲೋಕೇ ಯಸ್ಯಾರ್ಥಾಃ ಸ ಚ ಪಂಡಿತಃ ||

ADVERTISEMENT

‘ಯಾರ ಬಳಿ ಹಣ ಇರುತ್ತದೆಯೋ ಅವನಿಗೆ ಸ್ನೇಹಿತರೂ ಇರುತ್ತಾರೆ; ಅವನಿಗೆ ಬಂಧುಗಳೂ ಇರುತ್ತಾರೆ. ಅಷ್ಟೇಕೆ, ಲೋಕದಲ್ಲಿ ಅವನು ಗಂಡಸು ಎನಿಸಿಕೊಳ್ಳುತ್ತಾನೆ; ಕೊನೆಗೆ ವಿದ್ವಾಂಸನೂ ಅವನೇ’. ಇದು ಈ ಶ್ಲೋಕದ ತಾತ್ಪರ್ಯ. ನಮ್ಮೆಲ್ಲರ ಮಾನಸಿಕತೆಯನ್ನೂ ಪರಿಸ್ಥಿತಿಯನ್ನೂ ಇದು ಚೆನ್ನಾಗಿ ನಿರೂಪಿಸಿದೆ.

ಹಣಕ್ಕೆ ನಾವು ನಮ್ಮ ಬದುಕಿನಲ್ಲಿ ತುಂಬ ಮಹತ್ವವನ್ನು ಕೊಡುತ್ತಿರುವುದರಲ್ಲಿ ಸಂದೇಹವೇ ಇಲ್ಲ. ದುಡ್ಡು, ಎಂದರೆ ಸಂಪತ್ತು, ಅದೊಂದಿದ್ದರೆ ಸಾಕು, ಜೀವನದಲ್ಲಿ ಇನ್ನೊಂದು ಬೇಕಿಲ್ಲ; ಏಕೆಂದರೆ ಹಣವನ್ನು ಜಗತ್ತಿನ ಉಳಿದೆಲ್ಲವೂ ಆಶ್ರಯಿಸುತ್ತವೆ ಎಂಬ ನಂಬಿಕೆ ನಮ್ಮದು. ಹಾಗಾದರೆ ಈ ಸಂಪತ್ತಿನ ಮೂಲ ಯಾವುದು? ಶ್ರೀ, ಎಂದರೆ ಲಕ್ಷ್ಮಿಯನ್ನು ಸಂಪತ್ತಿನ ಒಡತಿಯಾಗಿ ನಮ್ಮ ಸಂಸ್ಕೃತಿ ಕಾಣಿಸಿದೆ.

ಆದರೆ ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ನಮ್ಮ ಪಾಲಿಗೆ ಸಂಪತ್ತು ಎಂದರೆ ದುಡ್ಡು, ಐಶ್ವರ್ಯ. ಆದರೆ ‘ಶ್ರೀ’ ಎಂಬದಕ್ಕೂ ‘ಲಕ್ಷ್ಮೀ’ ಎಂಬುದಕ್ಕೂ ನಮ್ಮ ಸಂಸ್ಕೃತಿಯಲ್ಲಿ ವಿಶಾಲವಾದ ಅರ್ಥವಿದೆ. ಲಕ್ಷ್ಮಿಯನ್ನು ಶ್ರೀಲಕ್ಷ್ಮೀ ಎಂದೂ ಕರೆಯಲಾಗಿದೆ.

ಸತ್‌, ಚಿತ್‌ ಮತ್ತು ಆನಂದಗಳ ಸ್ವರೂಪವೇ ‘ಶ್ರೀ’ ಎಂದು ಶಾಸ್ತ್ರಗಳು ಘೋಷಿಸಿವೆ. ‘ಲಕ್ಷ್ಮೀ’ ಎಂದರೆ ಎಲ್ಲವನ್ನೂ ಸದಾ ನೋಡುತ್ತಿರುವವಳು ಎಂದು ಅರ್ಥಮಾಡಬಹುದು. ಈ ಎರಡು ನೆಲೆಗಳಲ್ಲಿ ಶ್ರೀಲಕ್ಷ್ಮಿಯ ತತ್ತ್ವವನ್ನು ಅನುಸಂಧಾನ ಮಾಡಬೇಕಿದೆ. ನಮ್ಮ ಇರವನ್ನೂ ಅರಿವನ್ನೂ ನಲಿವನ್ನೂ ಪ್ರತಿನಿಧಿಸುವ ತತ್ತ್ವವೇ ಶ್ರೀತತ್ತ್ವ. ನಾವು ಈ ಮೂರನ್ನೂ ಕೇವಲ ಹಣದಲ್ಲಿ ಮಾತ್ರವೇ ನೋಡುತ್ತಿದ್ದೇವೆ; ಆದರೆ ವಾಸ್ತವವಾಗಿ ನಮ್ಮ ಬದುಕಿನಲ್ಲಿ ಹಣದ ಪಾತ್ರ ತುಂಬ ಕಡಿಮೆ. ಕೇವಲ ಹಣ ಇದ್ದ ಮಾತ್ರಕ್ಕೆ ನಮ್ಮ ಅಸ್ತಿತ್ವಕ್ಕೆ ಬೆಲೆ ಒದಗದು, ನಮಗೆ ಬೇಕಾದ ಜ್ಞಾನ ದಕ್ಕದು, ನೆಮ್ಮದಿಯೂ ಸಿಗದು. ಹಣ ಇಲ್ಲದಿದ್ದರೂ ನಮಗೆ ಆನಂದ ದೊರೆಯಬಹುದು, ಬದುಕಿಗೆ ಬೇಕಾದ ತಿಳಿವಳಿಕೆಯೂ ದಕ್ಕಬಹುದು, ನಮ್ಮ ನೆಲೆಯನ್ನೂ ಸ್ಥಾಪಿಸಿಕೊಳ್ಳಬಹುದು.

ಹೀಗೆ ನಮ್ಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೂ ಸಂತೋಷಿಸುವುದಕ್ಕೂ ಏನೆಲ್ಲ ವಿವರಗಳು ನಮಗೆ ಒದಗುತ್ತವೆಯೋ ಅವೆಲ್ಲವೂ ‘ಶ್ರೀ’. ನಮ್ಮ ಬದುಕನ್ನು ಪೂರ್ಣವಾಗಿ ನೋಡಬಲ್ಲಂಥ, ಕಾಪಾಡಬಲ್ಲಂಥ ಶಕ್ತಿಗಳೆಲ್ಲವೂ ‘ಲಕ್ಷ್ಮೀ’. ತ್ರಿಮೂರ್ತಿಗಳಲ್ಲಿ ಶ್ರೀಮಹಾವಿಷ್ಣುವು ‘ಸ್ಥಿತಿ’ಯನ್ನು ಪ್ರತಿನಿಧಿಸುತ್ತಾನೆ; ಎಂದರೆ ಈ ಕ್ಷಣದಲ್ಲಿ ನಮ್ಮನ್ನು ಕಾಪಾಡುವವನು ಅವನು. ವಿಷ್ಣುವಿನ ಮಡದಿಯೇ ಶ್ರೀಮಹಾಲಕ್ಷ್ಮೀ. ಆದುದರಿಂದ ಶ್ರೀಲಕ್ಷ್ಮೀ ಎಂದರೆ ಕೇವಲ ದುಡ್ಡು ಮಾತ್ರವೇ ಅಲ್ಲ; ಬದುಕನ್ನು ಎತ್ತಿನಿಲ್ಲಿಸಬಲ್ಲ, ಕಾಪಾಡಬಲ್ಲ ವಿವರಗಳೆಲ್ಲವೂ ಶ್ರೀಲಕ್ಷ್ಮಿಯನ್ನೇ ಪ್ರತಿನಿಧಿಸುತ್ತವೆ. ಲಕ್ಷ್ಮಿಯ ಬೇರೆ ಬೇರೆ ಸ್ವರೂಪಗಳಾದ ವಿದ್ಯಾಲಕ್ಷ್ಮೀ, ಧನಲಕ್ಷ್ಮೀ, ಸಂತಾನಲಕ್ಷ್ಮೀ, ಕೀರ್ತಿಲಕ್ಷ್ಮೀ, ಶೌರ್ಯಲಕ್ಷ್ಮೀ, ಸೌಮ್ಯಲಕ್ಷ್ಮೀ, ಮೋಕ್ಷಲಕ್ಷ್ಮೀ ಮುಂತಾದ ತತ್ತ್ವಗಳು ಜೀವನದ ಸಮಗ್ರತೆಯನ್ನೇ ಸೂಚಿಸುತ್ತವೆ.

ರಾಮಾಯಣದಲ್ಲಿ ಶ್ರೀರಾಮನನ್ನು ‘ಲಕ್ಷ್ಮೀವಾನ್‌’ ಎಂದು ಒಕ್ಕಣಿಸಲಾಗಿದೆ. ಸೀತೆಯು ಲಕ್ಷ್ಮಿಯ ಸ್ವರೂಪ ಎಂಬುದು ಇದರ ಒಂದು ಅರ್ಥ. ಶ್ರೀರಾಮನು ಧರ್ಮಸಂಪನ್ನ ಎಂಬುದು ವಿಶಾಲಾರ್ಥ. ಅವನ ಧರ್ಮಮಾರ್ಗವೇ ಅವನ ದಿಟವಾದ ಸಂಪತ್ತು, ಕೀರ್ತಿ, ವೈಭವ, ಆನಂದಗಳು ಎಂಬುದನ್ನೂ ಇದು ಧ್ವನಿಸುತ್ತದೆ.

ಲಕ್ಷ್ಮಿ ಹೇಗೆ ಹುಟ್ಟಿದಳು ಎಂಬುದಕ್ಕೂ ಸ್ವಾರಸ್ಯಕರ ಹಿನ್ನೆಲೆಯುಂಟು. ಕ್ಷೀರಸಾಗರದ ಮಥನದ ಸಂದರ್ಭದಲ್ಲಿ ಕಾಣಿಸಿಕೊಂಡವಳು ಅವಳು; ಬಳಿಕ ವಿಷ್ಣುವಿನ ವಕ್ಷಃಸ್ಥಳದಲ್ಲಿ ನೆಲೆಗೊಂಡಳು; ಸಂಪತ್ತಿಗೆ ಒಡತಿ ಎನಿಸಿಕೊಂಡಳು. ಶ್ರೀಲಕ್ಷ್ಮಿಗೂ ಮೊದಲು ಜ್ಯೇಷ್ಠಾಲಕ್ಷ್ಮಿಯೂ ಕಾಣಿಸಿಕೊಂಡಳು; ಅವಳು ಅಳು, ದುಃಖ, ಕಷ್ಟಗಳಿಗೆ ಒಡತಿ. ಅವಳಿಗೂ ಒಂದು ನೆಲೆ ಬೇಕಾಯಿತು. ಆದರೆ ಇರುವುದು ಎಲ್ಲಿ? ದೇವತೆಗಳು ಅವಳ ನೆಲೆಯನ್ನು ಸೂಚಿಸಿದರು: ಎಲ್ಲಿ ಸೋಮಾರಿತನ, ಜಗಳ, ಕೊಳಕುತನ, ರೋಗ, ಅನಾಚಾರಗಳು ಇರುತ್ತವೋ ಅಲ್ಲಿ ಜ್ಯೇಷ್ಠಾಲಕ್ಷ್ಮಿ ಇರಬಹುದೆಂದು ಅವಕಾಶವನ್ನು ಕಲ್ಪಿಸಿದರು. ಜ್ಯೇಷ್ಠಾಲಕ್ಷ್ಮೀ ಇರುವ ಕಡೆ ಲಕ್ಷ್ಮೀ ಇರುವುದಿಲ್ಲ; ಲಕ್ಷ್ಮೀ ಇರುವ ಕಡೆ ಜ್ಯೇಷ್ಠಾಲಕ್ಷ್ಮಿಗೆ ತಾಣ ಸಿಗುವುದಿಲ್ಲ. ಇದು ಒಪ್ಪಂದ. ಇದರ ತಾತ್ಪರ್ಯ: ನಮ್ಮ ಮನೆಯಲ್ಲೂ ಮನದಲ್ಲೂ ಯಾವ ಲಕ್ಷ್ಮಿಯು ನೆಲೆಸಬೇಕು ಎಂಬುದು ನಮ್ಮ ಆಯ್ಕೆಯನ್ನೇ ಅವಲಂಬಿಸಿದೆ. ನಮ್ಮಲ್ಲೂ ಕೊಳಕುತನ, ಸೋಮಾರಿತನ ಮುಂತಾದವು ತುಂಬಿದ್ದರೆ ಜ್ಯೇಷ್ಠಾಲಕ್ಷ್ಮಿಯೇ ನಮ್ಮನ್ನು ಆಶ್ರಯಿಸುತ್ತಾಳೆ. ನಮ್ಮ ಅಂತರಂಗದಲ್ಲಿ ಒಳಿತು, ಉಲ್ಲಾಸ, ಸಂತಸಗಳು ತುಂಬಿದ್ದರೆ ಆಗ ಶ್ರೀಮಹಾಲಕ್ಷ್ಮಿಯೇ ನಮ್ಮಲ್ಲಿ ನೆಲೆಗೊಳ್ಳುತ್ತಾಳೆ.

ಮತ್ತೊಮ್ಮೆ ಶ್ರೀವರಮಹಾಲಕ್ಷ್ಮೀವ್ರತ ಬಂದಿದೆ. ಈ ಹಬ್ಬದ ಸಾರ್ಥಕತೆ ನಮ್ಮ ಭಾವ–ಬುದ್ಧಿಗಳನ್ನೇ ಆಶ್ರಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.