ADVERTISEMENT

ವಾರ ಭವಿಷ್ಯ: 11-7-2021ರಿಂದ 17-7-2021ರವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 10 ಜುಲೈ 2021, 19:30 IST
Last Updated 10 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

****

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ADVERTISEMENT

ಸಾರ್ವಜನಿಕ ಕೆಲಸಗಳಲ್ಲಿ ಹೆಚ್ಚು ತೊಡಗಿಕೊಂಡು ಸ್ವಂತ ಕೆಲಸಗಳ ಬಗ್ಗೆ ಸರಿಯಾಗಿ ಗಮನಹರಿಸದೆ ಇರುವ ಸಾಧ್ಯತೆಗಳಿವೆ, ಇದರಿಂದ ಮನೆಯವರ ಅವಕೃಪೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಇರುತ್ತದೆ. ಬಹಳ ದಿನಗಳಿಂದ ವಾಪಸ್‌ ಬರದೇ ಇದ್ದ ಹಣ ಈಗ ಬಂದು ಸಂತಸವಾಗುತ್ತದೆ. ಮಕ್ಕಳ ಮೇಲೆ ಪ್ರೀತಿ-ವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಸ್ವಲ್ಪ ಅಡಚಣೆಗಳು ಎದುರಾಗುತ್ತವೆ. ಅತಿಯಾದ ಖರ್ಚಿನಿಂದ ಆರ್ಥಿಕ ಸಮತೋಲನ ಏರುಪೇರಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಆದಾಯವನ್ನು ನಿರೀಕ್ಷಿಸಬಹುದು. ವ್ಯವಹಾರದಲ್ಲಿ ನಿಮ್ಮ ಮೇಲೆ ನಂಬಿಕೆ ಇಟ್ಟು ಕೆಲವರು ಧನ ಹೂಡಿಕೆ ಮಾಡುವರು, ಇದರಿಂದ ವ್ಯವಹಾರಕ್ಕೆ ಬೇಕಾದ ಮೂಲಧನ ನಿಮಗೆ ದೊರೆಯುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಆಸ್ತಿ ವಿಚಾರಗಳ ಬಗ್ಗೆ ಇದ್ದ ಗೊಂದಲಗಳನ್ನು ಬಂಧುಗಳನ್ನೆಲ್ಲಾ ಸೇರಿಸಿ ಬಗೆಹರಿಸುವಿರಿ. ರಾಸಾಯನಿಕ ಪದಾರ್ಥಗಳನ್ನು ಉತ್ಪಾದಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ಕುಟುಂಬದ ವ್ಯವಹಾರದಲ್ಲಿ ವಿರೋಧಾಭಾಸಗಳು ಬರಬಹುದು, ಆದರೆ ನಿಮ್ಮ ನಿಲುವನ್ನು ಸರಿಯಾಗಿ ಪ್ರತಿಪಾದಿಸಿದಲ್ಲಿ ನಿಮಗೆ ಜಯವಿರುತ್ತದೆ. ಅನಾವಶ್ಯಕವಾದ ಕೆಲಸಕಾರ್ಯಗಳಲ್ಲಿ ತೊಡಗುವುದು ಬೇಡ, ನಿಮ್ಮ ಯೋಜಿತ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಹಣದ ಹರಿವು ನಿಮ್ಮ ಅಗತ್ಯತೆಯನ್ನು ಪೂರೈಸುತ್ತದೆ. ಭೂ ಸಂಬಂಧಿ ವ್ಯವಹಾರಗಳನ್ನು ಮಾಡುವವರೆಗೆ ಆದಾಯ ಹೆಚ್ಚುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮುನ್ನಡೆ ಇರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಸರ್ಕಾರಿ ನೌಕರರಿಗೆ ಬಿಡುವಿಲ್ಲದಷ್ಟು ಕೆಲಸವಿರುತ್ತದೆ, ಹೆಚ್ಚಿನ ವರಮಾನವನ್ನು ನಿರೀಕ್ಷಿಸಬಹುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಣದ ಹರಿವು ಸಾಮಾನ್ಯವಾಗಿರುತ್ತದೆ. ಕಚೇರಿ ಕೆಲಸದ ಮೇಲೆ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಜನಪ್ರತಿನಿಧಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಮಾನಸಿಕ ಗೊಂದಲ ಮತ್ತು ದುಗುಡದಿಂದ ಕೆಲಸಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ದೈವ ಚಿಂತನೆ ಧ್ಯಾನ ಇತ್ಯಾದಿಗಳಿಗೆ ಹೆಚ್ಚು ಗಮನ ಕೊಡುವಿರಿ. ವೃತ್ತಿ ಬದಲಾವಣೆಯ ಬಗ್ಗೆ ಈಗ ಆತುರ ಬೇಡ. ಸಂಗಾತಿಯ ಕೋಪಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿದಲ್ಲಿ ಅವರಿಂದ ಧನಸಹಾಯ ಸಿಗುವ ಸಾಧ್ಯತೆಯಿದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಮಕ್ಕಳ ವಿವಾಹ ಚಿಂತೆ ನಿಮ್ಮನ್ನು ಕಾಡಬಹುದು. ಈ ವಿಚಾರದಲ್ಲಿ ಬಂಧುಗಳ ಸಹಕಾರ ದೊರೆಯುತ್ತದೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಸ್ವಲ್ಪಮಟ್ಟಿನ ಕಿರಿಕಿರಿಯಾದರೂ ಸಹೋದ್ಯೋಗಿಗಳ ಸಕಾಲಿಕ ನೆರವಿನಿಂದ ಪರಿಸ್ಥಿತಿ ಸುಧಾರಿಸುತ್ತದೆ. ಯಾವುದೇ ವಿಚಾರದಲ್ಲಿ ಸಹನೆಯನ್ನು ಕಳೆದುಕೊಳ್ಳದಿರುವುದು ಬಹಳ ಉತ್ತಮ. ಪಾಲುದಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಹಣ ಹೂಡದಿರುವುದು ಬಹಳ ಉತ್ತಮ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ, ಆದ್ದರಿಂದ ಇರುವ ಹಣವನ್ನು ಜೋಪಾನವಾಗಿ ಖರ್ಚು ಮಾಡಿ. ಕೈಗೊಂಡ ಕಾರ್ಯಗಳಲ್ಲಿ ನಿಧಾನವಾದ ಯಶಸ್ಸು ಇರುತ್ತದೆ. ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿರಿ, ಅಗತ್ಯವಿದ್ದಲ್ಲಿ ಚಿಕಿತ್ಸೆ ತೆಗೆದುಕೊಳ್ಳಿರಿ.

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಹಠ ಹಿಡಿದು ಮಾಡಿದ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಇರುತ್ತದೆ. ಹಣ್ಣು ತರಕಾರಿಯನ್ನು ಮಾರಾಟ ಮಾಡುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಉದ್ಯಮಗಳಿಗೆ ಇದ್ದ ಕಾರ್ಮಿಕರ ಸಮಸ್ಯೆ ದೂರವಾಗುತ್ತದೆ. ನಿಗದಿತ ಉತ್ಪಾದನೆಯನ್ನು ಮಾಡಿ ಗುರಿಯನ್ನು ಮುಟ್ಟಬಹುದು. ದಿನಸಿ ಸಗಟು ವ್ಯಾಪಾರಸ್ಥರಿಗೆ ಭರ್ಜರಿಯ ವ್ಯಾಪಾರವಿರಲಿದೆ. ಗಣಿಗಾರಿಕೆಯನ್ನು ನಡೆಸುವವರೆಗೆ ಹೆಚ್ಚಿನ ಆದಾಯ ಬರಲಿದ್ದು ಇನ್ನೂ ಗಣಿಗಾರಿಕೆ ನಡೆಸಲು ಆದೇಶ ಸಿಗಬಹುದು. ವಿವಾಹ ಆಕಾಂಕ್ಷಿಗಳಿಗೆ ಸಂಬಂಧಗಳು ಒದಗಿಬರುವ ಸಂದರ್ಭವಿದೆ. ನಿಮ್ಮ ಶತ್ರುಗಳನ್ನು ಅವರದೇ ಆದ ತಂತ್ರಗಾರಿಕೆಯನ್ನು ಬಳಸಿ ಮಟ್ಟ ಹಾಕಬಹುದು. ಕಂಪ್ಯೂಟರ್ ತಂತ್ರಜ್ಞರು ಹೆಚ್ಚಿನ ಆದಾಯವನ್ನು ನಿರೀಕ್ಷಿಸಬಹುದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಬಹಳ ದಿನದಿಂದ ವಿಳಂಬವಾಗುತ್ತಿದ್ದ ಕೆಲಸವೊಂದು ಈಗ ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭವಾಗುತ್ತದೆ. ನಿಮ್ಮ ಬಂಧುಗಳಿಂದಲೇ ನೀವು ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ, ಬಂಧುಗಳೊಡನೆ ಮಾಡುವ ವ್ಯವಹಾರಗಳಲ್ಲಿ ಎಚ್ಚರವಾಗಿರಿ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ನೀವು ಆರಂಭಿಸಿದ ಸಣ್ಣ ವ್ಯವಹಾರಗಳು ಈಗ ಗಳಿಕೆಯತ್ತ ಸಾಗುತ್ತವೆ. ವಾಹನ ಮಾರಾಟಗಾರರಿಗೆ ವ್ಯವಹಾರ ನಿಧಾನವಾದರೂ ನಿಲ್ಲುವುದಿಲ್ಲ. ಆಭರಣದ ವ್ಯಾಪಾರಿಗಳಿಗೆ ವ್ಯಾಪಾರ ನಡೆದು ಲಾಭದಲ್ಲಿ ಏರಿಕೆಯಾಗುತ್ತದೆ. ಕೆಲವರಿಗೆ ಮಕ್ಕಳೊಡನೆ ಸಂಬಂಧಗಳು ಕಡಿಮೆಯಾಗಬಹುದು. ಮಕ್ಕಳ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ತೆರೆಯಲ್ಪಡುತ್ತವೆ. ಸಮೂಹದಲ್ಲಿ ಮಾತನಾಡುವಾಗ ಎಚ್ಚರವಿರಲಿ, ನಿಮ್ಮ ಮಾತುಗಳಿಂದಲೇ ನೀವು ಸಿಕ್ಕಿ ಬೀಳುವ ಸಾಧ್ಯತೆ ಇದೆ. ಗುಟ್ಟಾಗಿ ಖರೀದಿ ಮಾಡಿಕೊಂಡಿದ್ದ ಆಸ್ತಿಯ ವಿವರಗಳು ನಿಮ್ಮ ಸಂಗಾತಿಗೆ ತಿಳಿಯಬಹುದು. ನಿಮ್ಮ ಮಾತುಗಳಿಂದ ಜನರನ್ನು ಮರುಳು ಮಾಡಿ ನಿಮ್ಮ ಕೆಲಸವನ್ನು ಸಾಧಿಸುವಿರಿ. ಮಕ್ಕಳ ಪ್ರಗತಿಯ ವಿಷಯದಲ್ಲಿ ಶುಭವಾರ್ತೆಗಳನ್ನು ಕೇಳಬಹುದು. ಸಂತಾನಕ್ಕಾಗಿ ಆಶಿಸುತ್ತಿರುವವರಿಗೆ ಶುಭಸುದ್ದಿ ದೊರೆಯುತ್ತದೆ. ಅನಿರೀಕ್ಷಿತವಾಗಿ ಬಂದಿದ್ದ ಆಪಾದನೆಯೊಂದು ಮಂಜಿನಂತೆ ಕರಗುತ್ತದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ಕಲಾವಿದರಿಗೆ ಉತ್ತಮ ವೇದಿಕೆ ದೊರೆತು ಮುಂದಿನ ಹೆಜ್ಜೆಗೆ ಅನುಕೂಲವಾಗುತ್ತದೆ. ಕೆಲವು ಹಿರಿಯ ಕಲಾವಿದರ ಸಹಾಯವೂ ನಿಮಗೆ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಯು ತಕ್ಕಮಟ್ಟಿಗೆ ಇರುತ್ತದೆ. ಮಕ್ಕಳಿಂದ ನಿಮಗೆ ಸಂತೋಷವಿರುತ್ತದೆ. ಆಸ್ತಿ ಖರೀದಿಯ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ತಕ್ಕ ಏರ್ಪಾಡನ್ನು ಮಾಡಿಕೊಳ್ಳುವಿರಿ. ಅನೇಕ ದಿನಗಳಿಂದ ಗುಪ್ತವಾಗಿಯೇ ಕಾಯ್ದುಕೊಂಡಿದ್ದ ವಿಚಾರವೊಂದು ಬಯಲಾಗಿ ಬೇಸರವಾಗುತ್ತದೆ. ನಿಮ್ಮನ್ನು ಪದೇಪದೇ ಕೆಣಕುತ್ತಿದ್ದ ವೈರಿಗಳನ್ನು ಪರಾಕ್ರಮದಿಂದ ಎದುರಿಸಿ ಮಟ್ಟ ಹಾಕುವಿರಿ. ಸರ್ಕಾರಿ ಮಟ್ಟದ ಕೆಲಸಗಳು ಸ್ವಲ್ಪ ಮಂದಗತಿಯಲ್ಲಿ ನಡೆಯುತ್ತವೆ. ವಾಹನ ಚಾಲನೆ ವೇಳೆ ಎಚ್ಚರವಹಿಸುವುದು ಒಳ್ಳೆಯದು.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )

ಹಿರಿಯರಿಂದ ಸಲಹೆ ಸೂಚನೆಗಳು ನಿಮಗೆ ದೊರೆತು ಮುಂಬರುವ ಅಡ್ಡಿಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಆಸ್ತಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಎಚ್ಚರವಹಿಸಿರಿ. ನೀವು ಇಷ್ಟಪಡುವ ಒಡವೆಗಳನ್ನು ಈಗ ಕೊಳ್ಳಬಹುದು. ಉದ್ಯೋಗದಲ್ಲಿ ನಿಮ್ಮ ಶ್ರದ್ಧೆ ಹಾಗೂ ಉತ್ಸಾಹಕ್ಕೆ ಮೇಲಧಿಕಾರಿಯ ಪ್ರೋತ್ಸಾಹ ದೊರೆತು ಉತ್ತಮ ಹೆಸರು ಗಳಿಸುವಿರಿ. ರಾಜಕಾರಣಿಗಳಿಗೆ ಇಬ್ಬಂದಿತನ ಕಾಡುತ್ತದೆ, ಒಂದು ನಿರ್ಧಾರಕ್ಕೆ ಬರುವಷ್ಟರಲ್ಲಿ ಪಾಪಪ್ರಜ್ಞೆ ಕಾಡುತ್ತದೆ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯುವುದು ಒಳ್ಳೆಯದು. ಪಾಲುದಾರಿಕೆ ವ್ಯವಹಾರಗಳಲ್ಲಿ ಮಹಿಳಾ ಪಾಲುದಾರರೊಬ್ಬರು ನಿಮ್ಮ ವಿರುದ್ದ ತಿರುಗಿಬೀಳುವರು, ತಾಳ್ಮೆಯಿಂದ ಎದುರಿಸುವುದು ಬಹಳ ಉತ್ತಮ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಸಹೋದರರಿಂದ ನಿಮಗೆ ಸಹಾಯಹಸ್ತ ದೊರೆಯುತ್ತದೆ. ನಿಂತಿದ್ದ ಗೃಹನಿರ್ಮಾಣ ಕಾರ್ಯಗಳನ್ನು ಮುಂದುವರೆಸಬಹುದು. ಕೆಲವು ಮಹಿಳೆಯರ ಆಕಾಂಕ್ಷೆಗಳು ಈಡೇರುವ ಸಾಧ್ಯತೆ ಇದೆ. ಬಂಧುಬಾಂಧವರೊಡನೆ ಸಂಬಂಧ ಗಟ್ಟಿಗೊಳ್ಳುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳು ಮಂದಗತಿಯಲ್ಲಿ ಇರುತ್ತವೆ. ನಿಮ್ಮ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ಜೊತೆಗೆ ಸಹಾಯಕರು ದೊರೆಯುವರು. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಕೆಲವು ಅಧಿಕಾರಿಗಳಿಗೆ ಸ್ಥಳ ಬದಲಾವಣೆಯ ಸಾಧ್ಯತೆಗಳಿವೆ. ಬರಹಗಾರರ ಕೆಲವು ಬರಹಗಳು ಜನರ ಮೆಚ್ಚುಗೆಗೆ ಪಾತ್ರವಾಗಿ ಮುದ್ರಣಗೊಳ್ಳುತ್ತವೆ. ಪಿತ್ರಾರ್ಜಿತ ಆಸ್ತಿಯ ಬಗ್ಗೆ ತಕರಾರುಗಳು ಉದ್ಭವವಾಗಬಹುದು.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಬಹುದಿನಗಳಿಂದ ಇದ್ದ ಕೆಲಸದ ಒತ್ತಡ ಈಗ ಕಡಿಮೆಯಾಗಿ ಮನಸ್ಸಿಗೆ ನಿರಾಳವೆನಿಸುತ್ತದೆ. ರೈತಾಪಿ ವರ್ಗದವರಿಗೆ ಬರಬೇಕಾಗಿದ್ದ ಸಹಾಯಧನ ಈಗ ಬಂದು ಅವರ ಅವಶ್ಯಕತೆಯನ್ನು ತೀರಿಸುತ್ತದೆ. ಧಾರ್ಮಿಕ ವಿಚಾರಗಳತ್ತ ಹೆಚ್ಚು ಆಸಕ್ತಿ ಮೂಡುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಬಹಳ ಉತ್ತಮ, ಇಲ್ಲವಾದಲ್ಲಿ ಶಿಸ್ತುಕ್ರಮಕ್ಕೆ ಗುರಿಯಾಗಬೇಕಾದೀತು. ದೂರ ಪ್ರಯಾಣಗಳಿದ್ದಲ್ಲಿ ಸ್ವಲ್ಪ ದಿನಗಳ ಕಾಲ ಮುಂದೂಡುವುದು ಒಳ್ಳೆಯದು. ನಿಮ್ಮ ಖರ್ಚಿಗೆ ತಕ್ಕಷ್ಟು ಆದಾಯವಿರುತ್ತದೆ. ಹರಿತವಾದ ಆಯುಧಗಳನ್ನು ಬಳಸುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಅವರ ಅಧ್ಯಯನದಲ್ಲಿ ಯಶಸ್ಸನ್ನು ಕಾಣಬಹುದು. ಬಾಯಿಮಾತಿನ ಒಪ್ಪಂದಗಳಿಗೆ ಮಾನ್ಯತೆ ದೊರೆಯುವುದಿಲ್ಲ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಹಿರಿಯರು ತಾವಾಡುವ ಮಾತಿನಿಂದ ಮುಜುಗರದ ಸನ್ನಿವೇಶಗಳನ್ನು ತಂದುಕೊಳ್ಳುವರು. ವಾಹನಗಳನ್ನು ದುರಸ್ತಿ ಮಾಡುವವರಿಗೆ ಸ್ವಲ್ಪ ಆದಾಯ ವೃದ್ಧಿಸುತ್ತದೆ. ವಿದೇಶಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಮೋಸದ ಅನುಭವ ಆಗಬಹುದು. ಎಚ್ಚರಿಕೆಯ ನಡೆಯಿಂದ ಈ ಮೋಸವನ್ನು ಪತ್ತೆ ಹಚ್ಚಿ ಸರಿಪಡಿಸಿಕೊಳ್ಳಬಹುದು. ಬೇರೆಯವರ ಹಣಕಾಸಿನ ವ್ಯಾಜ್ಯದಲ್ಲಿ ತಲೆ ಹಾಕುವುದು ಬೇಡ. ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯಚಿಂತೆಗಳು ಹೆಚ್ಚಾಗಬಹುದು. ಮಕ್ಕಳು ಹೆಚ್ಚಿನ ಹಣಕ್ಕಾಗಿ ಒತ್ತಾಯ ಮಾಡಬಹುದು. ಲೇವಾದೇವಿ ವ್ಯವಹಾರದಲ್ಲಿ ಯಶಸ್ಸು ಇರುವುದಿಲ್ಲ. ಬೆಂಕಿಯೊಡನೆ ಕೆಲಸ ಮಾಡುವವರು ಕಣ್ಣಿನ ಬಗ್ಗೆ ಎಚ್ಚರಿಕೆಯನ್ನು ವಹಿಸಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.