ADVERTISEMENT

ವಾರ ಭವಿಷ್ಯ: 8-8-2021ರಿಂದ 14-8-2021ರವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 7 ಆಗಸ್ಟ್ 2021, 19:30 IST
Last Updated 7 ಆಗಸ್ಟ್ 2021, 19:30 IST
   

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

****

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ವ್ಯವಹಾರದಲ್ಲಿ ಸ್ವಲ್ಪ ಯಶಸ್ಸನ್ನು ಕಾಣುವಿರಿ. ಸಂಗ್ರಹಿಸಿಟ್ಟಿದ್ದ ವಸ್ತುಗಳನ್ನು ಮಾರಾಟ ಮಾಡಿ ಲಾಭ ಗಳಿಸುವಿರಿ. ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿ ಹಿರಿಯರು ಪರಿಹಾರ ಸೂಚಿಸುವರು. ವೃತ್ತಿಯಲ್ಲಿ ಹಿನ್ನಡೆ ಉಂಟಾಗಿ ಮನಸ್ಸಿಗೆ ಖಿನ್ನತೆ ಉಂಟಾಗುವ ಸಾಧ್ಯತೆಗಳಿವೆ. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ವ್ಯವಹಾರದಲ್ಲಿ ಹಿನ್ನಡೆಯನ್ನು ಕಂಡರೂ ಸ್ನೇಹಿತರ ಸಹಕಾರದಿಂದ ಮತ್ತೆ ಸರಿದಾರಿಗೆ ತರುವಿರಿ. ಮೂಳೆನೋವು ಬಾಧಿಸಬಹುದು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ತಂದೆಯ ಜೊತೆ ಮಾತುಕತೆ ನಡೆಸುವಿರಿ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ನೀರಾವರಿ ಜಮೀನನ್ನು ಖರೀದಿ ಮಾಡಲು ಸಿದ್ಧತೆ ನಡೆಸುವಿರಿ. ಕಟ್ಟಡಗಳನ್ನು ನಿರ್ಮಾಣ ಮಾಡಿ ಮಾರುವವರಿಗೆ ವ್ಯವಹಾರ ಕುದುರುತ್ತದೆ. ಲೇವಾದೇವಿ ವ್ಯವಹಾರದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಕೆಲವೊಂದು ಕೆಲಸಗಳು ಪೂರ್ಣಗೊಳ್ಳದೆ ಒತ್ತಡಕ್ಕೆ ಸಿಲುಕುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಕೋಪದಿಂದ ಮಾತನಾಡಿ ಹಿನ್ನಡೆಯನ್ನು ಕಾಣುವಿರಿ. ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ಕೆಲವೊಂದು ರಾಜಕೀಯ ಮುಖಂಡರುಗಳಿಗೆ ಚಟುವಟಿಕೆ ಹೆಚ್ಚುತ್ತದೆ. ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣವನ್ನು ಹೊಂದಿಸಬೇಕಾದೀತು. ನಿರೀಕ್ಷಿತ ಮಟ್ಟದಷ್ಟು ಹಣದ ಒಳಹರಿವು ಇರುವುದಿಲ್ಲ.

ADVERTISEMENT

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಬಂಧುಗಳ ಆರೋಗ್ಯದ ಬಗ್ಗೆ ಶುಭ ಸಮಾಚಾರ ಕೇಳುವಿರಿ. ಚಿನ್ನ, ಬೆಳ್ಳಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಏಳಿಗೆ ಇದೆ. ಮಿತ್ರನೊಡನೆ ಕಾವೇರಿದ ಮಾತುಗಳು ಆಗಬಹುದು. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ನಿಮ್ಮ ವೈಯಕ್ತಿಕ ಸರ್ಕಾರಿ ಕೆಲಸಗಳಲ್ಲಿ ಪ್ರಗತಿಯನ್ನು ಕಾಣಬಹುದು. ಹಣದ ವ್ಯವಹಾರಗಳಲ್ಲಿ ಮೂಡಿದ್ದ ಅನುಮಾನಗಳು ಪರಿಹಾರವಾಗುತ್ತವೆ. ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ಹಿಡಿದ ಕೆಲಸಗಳನ್ನು ಸಾಧಿಸುವಿರಿ. ಕೃಷಿಗಾಗಿ ಹಣ ಖರ್ಚು ಮಾಡುವಿರಿ. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಲಾಭ ಬರುತ್ತದೆ. ಅನಿರೀಕ್ಷಿತವಾಗಿ ದೈವ ಪೂಜೆಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಕಾಲುನೋವು ಹೆಚ್ಚು ಬಾಧಿಸಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ನಿಮ್ಮ ಹೊಸ ಯೋಜನೆಗಳ ಬಗ್ಗೆ ಬಂದ ಸಲಹೆಗಳನ್ನು ನಿರಾಕರಿಸದಿರಿ. ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ವಿದೇಶಕ್ಕೆ ಕಚ್ಚಾ ಮಾಲು ಪೂರೈಸುವ ಕಂಪನಿಗಳಿಗೆ ವ್ಯವಹಾರ ಜಾಸ್ತಿಯಾಗಿ ಹೊಸ ಪೂರೈಕೆಯ ಆದೇಶಗಳು ಸಹ ದೊರೆಯುತ್ತವೆ. ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುವವರಿಗೆ ವ್ಯವಹಾರ ಚೇತರಿಸಿಕೊಳ್ಳುತ್ತದೆ. ಶತ್ರುಗಳನ್ನು ಸ್ನೇಹ ಮತ್ತು ಸಂಯಮದಿಂದ ಎದುರಿಸಿರಿ, ಇದು ನಿಮಗೆ ಒಳಿತನ್ನು ತರುತ್ತದೆ. ವರ್ಣಚಿತ್ರಗಳನ್ನು ಬಿಡಿಸುವ ಮಹಿಳೆಯರ ಚಿತ್ರಗಳು ಮಾರಾಟವಾಗುವ ಎಲ್ಲ ಲಕ್ಷಣಗಳಿವೆ. ಔಷಧಿ ವ್ಯಾಪಾರಿಗಳಿಗೆ ವ್ಯಾಪಾರ ವ್ಯವಹಾರಗಳು ವಿಸ್ತರಣೆಯಾಗಿ ಹೆಚ್ಚು ಲಾಭ ಬರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

ಸಿಂಹ ರಾಶಿ (ಮಖಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕೃಷಿ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಮೀನುಗಾರರಿಗೆ ಆದಾಯದಲ್ಲಿ ಅನಿಶ್ಚಿತತೆ ಇರುತ್ತದೆ. ಜಲಸಾರಿಗೆ ಉದ್ಯಮಿಗಳ ಆದಾಯಕ್ಕೆ ಕೊರತೆ ಇರುವುದಿಲ್ಲ. ಸ್ಥಿರಾಸ್ತಿ ಕೊಳ್ಳುವಾಗ ಅಕ್ಕಪಕ್ಕದವರ ಕಿರಿಕಿರಿ ಎದುರಿಸಬೇಕಾದೀತು. ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವ ಮನೋಭಾವದಿಂದ ಹಿಡಿದ ಕೆಲಸಗಳಲ್ಲಿ ಸಾಧನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಮಂದಗತಿಯ ಯಶಸ್ಸು ಇರುತ್ತದೆ. ಸಮಯೋಚಿತ ನಿರ್ಧಾರಗಳಿಂದಾಗಿ ಪಾಲುದಾರರಲ್ಲಿ ಹೊಸ ನಂಬಿಕೆ ಮೂಡುತ್ತದೆ. ವಿವಾಹ ಆಕಾಂಕ್ಷಿಗಳಿಗೆ ಸಂಗಾತಿ ಒದಗುವ ಸಾಧ್ಯತೆ ಇದೆ. ತಂದೆಯ ಆರೋಗ್ಯದಲ್ಲಿ ಅಲ್ಪ ವ್ಯತ್ಯಾಸವನ್ನು ಕಾಣಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹಧನ ಸಿಗುವ ಸಾಧ್ಯತೆ ಇದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ವಿರೋಧಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಮಗೆ ಉತ್ತಮ. ಸ್ತ್ರೀಯರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅಹಂಕಾರ ಬಿಟ್ಟು ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ. ವ್ಯವಹಾರಗಳು ಸುಗಮವಾಗಿ ಮುಂದುವರೆಯುತ್ತವೆ. ಕುಟುಂಬದವರೆಲ್ಲರ ಒಪ್ಪಿಗೆಯಂತೆ ಕೆಲಸ ಕಾರ್ಯಗಳನ್ನು ಮಾಡುವುದು ಉತ್ತಮ. ಬಡ್ಡಿ ವ್ಯವಹಾರ ಮಾಡುವುದು ಅಷ್ಟು ಒಳಿತಲ್ಲ. ಕೆಲವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಹಣದ ಒಳಹರಿವು ಕಡಿಮೆಯಿದ್ದು, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ದಿನಸಿ ವ್ಯಾಪಾರಿಗಳಿಗೆ ವ್ಯಾಪಾರ ವಿಸ್ತರಣೆಯಾಗುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗದೆ ಸ್ವಲ್ಪ ಏರುಪೇರಾಗಬಹುದು. ಸಂಗಾತಿಯ ಕೆಲವು ವರ್ತನೆಗಳು ಮುಜುಗರವನ್ನು ತರಬಹುದು. ಕಟ್ಟಡ ನಿರ್ಮಾಣಕಾರರು ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಆರ್ಥಿಕ ಬಲವರ್ಧನೆಗಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳುವಿರಿ. ಆದರೂ ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಕೃಷಿಕರು ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಮಾರುವವರಿಗೆ ವ್ಯಾಪಾರ ಹೆಚ್ಚುತ್ತದೆ. ಉದ್ಯೋಗದಲ್ಲಿದ್ದ ಒತ್ತಡ ಕಡಿಮೆಯಾಗುತ್ತದೆ. ಕುಕ್ಕುಟೋದ್ಯಮ ಮಾಡುತ್ತಿರುವವರಿಗೆ ನಿಧಾನವಾಗಿ ಏಳಿಗೆ ಇರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗುವ ಬಗ್ಗೆ ಸೂಚನೆ ದೊರೆಯುತ್ತದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಶ್ರಮ ವಹಿಸಬೇಕು. ಆರ್ಥಿಕ ಪರಿಸ್ಥಿತಿಯು ಮಂದಗತಿಯಲ್ಲಿ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯದಿದ್ದರೂ ಅಲ್ಪ ಯಶಸ್ಸು ಇದ್ದೇ ಇರುತ್ತದೆ. ತಾಳ್ಮೆಯ ನಡೆಯಿಂದ ಕೆಲವು ಕೆಲಸಗಳನ್ನು ಸುಲಭ ಮಾಡಿಕೊಳ್ಳುವಿರಿ. ಕೆಲವು ರಾಜಕೀಯ ಮುಖಂಡರ ಮಾತುಗಳಿಗೆ ಬೆಲೆ ಬರುವ ಸಾಧ್ಯತೆ ಇದೆ. ಸ್ವಯಂ ಉದ್ಯೋಗ ಮಾಡುತ್ತಿರುವವರಿಗೆ ಉದ್ಯೋಗದಲ್ಲಿ ಅಭಿವೃದ್ಧಿ ಇದೆ. ತಂದೆಯ ಒತ್ತಾಸೆಯಿಂದ ಅವರ ಸ್ನೇಹಿತರುಗಳು ಪಾಲುದಾರಿಕೆಯ ವ್ಯವಹಾರದಲ್ಲಿ ನಿಮಗೆ ಅವಕಾಶ ಕೊಡುವರು. ಬಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿರಿ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಕೃಷಿರಂಗದಲ್ಲಿ ತೊಡಗಿಸಿಕೊಂಡಿರುವವರಿಗೆ ಕೆಲಸಕಾರ್ಯಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಕೆಲಸಗಳಿಂದ ಹೆಚ್ಚು ಹಣ ಖರ್ಚು ಆಗಬಹುದು. ಉನ್ನತ ಶಿಕ್ಷಣವನ್ನು ಮಾಡಬೇಕೆಂದಿರುವವರಿಗೆ ತಕ್ಕ ಅನುಕೂಲಗಳು ಒದಗುತ್ತವೆ. ತಂದೆಯ ಮೇಲೆ ವಿನಾಕಾರಣ ಮುನಿಸನ್ನು ತೋರುವಿರಿ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಅಪನಂಬಿಕೆ ಬಂದರೂ ನಂತರ ಎಲ್ಲವೂ ಸರಿಯಾಗುತ್ತದೆ. ಹುದ್ದೆಯಲ್ಲಿನ ಜವಾಬ್ದಾರಿ ಹೆಚ್ಚಾಗಿ ಒತ್ತಡವನ್ನು ಅನುಭವಿಸುವಿರಿ. ಸಂಘ-ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಅಭಿವೃದ್ಧಿ ಇರುತ್ತದೆ. ಆದಾಯ ಹೆಚ್ಚಿಸಿಕೊಳ್ಳುವ ಮೂಲವೊಂದನ್ನು ಸಾಧಿಸುವಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ತುಂಬಾ ಶ್ರಮವಹಿಸಿ ಮಾಡಿದ್ದ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ಬಹಳ ದಿನಗಳ ಪ್ರಯತ್ನದಿಂದ ನಿಂತಿದ್ದ ವ್ಯವಹಾರಗಳನ್ನು ಪುನರಾರಂಭ ಮಾಡುವಿರಿ. ಮಿಶ್ರಲೋಹಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭವಿದೆ. ಸಂಸ್ಥೆಗಳಿಂದ ಸಾಲ ಪಡೆಯುವ ವಿಚಾರದಲ್ಲಿ ಅಧಿಕಾರಿಗಳಿಂದ ವಂಚನೆಗೆ ಒಳಗಾಗುವ ಸಾಧ್ಯತೆಯಿದೆ, ಈ ಬಗ್ಗೆ ಎಚ್ಚರವಿರಲಿ. ನಿಮ್ಮ ಮಿತ್ರರೊಂದಿಗೆ ಕೆಲವೊಂದು ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವ ಯೋಗವಿದೆ. ದಿನಸಿ ಸಗಟು ವ್ಯಾಪಾರಿಗಳಿಗೆ ಉತ್ತಮ ಲಾಭವಿರುತ್ತದೆ. ಆರ್ಥಿಕ ಪರಿಸ್ಥಿತಿಯು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಸಂಗಾತಿಗೆ ಬಡ್ತಿ ದೊರೆತು ಸಂಪಾದನೆಯಲ್ಲಿ ಏರಿಕೆಯನ್ನು ಕಾಣಬಹುದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಣಕಾಸು ಸಂಸ್ಥೆಗಳ ಸಹಾಯದಿಂದ ಸ್ವಂತ ಉದ್ದಿಮೆಯನ್ನು ಆರಂಭಿಸಲು ತಯಾರಿ ಮಾಡುವಿರಿ. ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹಧನ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿಯು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಬಂಧುಗಳ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ವಿದೇಶದಲ್ಲಿ ವಾಸಿಸುತ್ತಿರುವವರು ಸ್ಥಿರಾಸ್ತಿಯ ಬಗ್ಗೆ ಚಿಂತನೆ ಮಾಡಬಹುದು. ನಿಮ್ಮ ಕೆಲಸಕಾರ್ಯಗಳಿಗೆ ಕುಟುಂಬದವರ ಸಹಕಾರ ಖಂಡಿತ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಯುವಕರು ಉದ್ಯೋಗ ಸ್ಥಳದಲ್ಲಿ ಅನಗತ್ಯವಾಗಿ ಯಾರೊಂದಿಗೂ ವಾಗ್ವಾದವನ್ನು ಮಾಡುವುದು ಬೇಡ. ದೈವತಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುವ ಮನಸ್ಸಾಗುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಉನ್ನತ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ಕಾಡುತ್ತಿದ್ದ ಶತ್ರುವಿನ ಭೀತಿ ನಿಧಾನವಾಗಿ ತಾನಾಗಿಯೇ ನಿವಾರಣೆಯಾಗುತ್ತದೆ. ಭೂಮಿಯ ವ್ಯವಹಾರದಲ್ಲಿ ಲಾಭದ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದು. ಬಹಳ ಹಿಂದೆ ನೀಡಿದ್ದ ಕೆಲವು ಸಾಲ ಈಗ ವಾಪಸ್‌ ಬರುತ್ತದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಕುಟುಂಬದಲ್ಲಿನ ಕೆಲವು ವಿಚಾರಗಳಿಗೆ ಮಕ್ಕಳೊಡನೆ ಚಕಮಕಿ ಸಂಭವಿಸಬಹುದು. ಹೊಸ ವ್ಯವಹಾರಗಳ ವಿಸ್ತರಣೆಗಾಗಿ ನಿರ್ದಿಷ್ಟ ಹಣ ಹೂಡಿಕೆ ಮಾಡುವಿರಿ. ಹಣದ ಒಳಹರಿವು ನಿರೀಕ್ಷಿತ ಮಟ್ಟದಷ್ಟು ಇರುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತದೆ. ಉದ್ಯೋಗದ ಸ್ಥಳದಲ್ಲಿ ಕೆಲವು ಗೊಂದಲಗಳು ಮೂಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.