ADVERTISEMENT

ದಕ್ಷಿಣ ಕನ್ನಡದಾದ್ಯಂತ ಶಾಂತಿ ಸಭೆ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 5:22 IST
Last Updated 4 ಆಗಸ್ಟ್ 2022, 5:22 IST
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಆಮ್‌ ಆದ್ಮಿ ಪಾರ್ಟಿಯ ಮುಖಂಡರು ಮನವಿ ಸಲ್ಲಿಸಿದರು
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ಆಮ್‌ ಆದ್ಮಿ ಪಾರ್ಟಿಯ ಮುಖಂಡರು ಮನವಿ ಸಲ್ಲಿಸಿದರು   

ಮಂಗಳೂರು: ಸತತ ಕೊಲೆಗಳು ನಡೆದಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಕಾರಣ ನಗರ ಮತ್ತು ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಾಂತಿ ಸಭೆಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ನಗರ ಪೊಲೀಸ್ ಆಯುಕ್ತರನ್ನು ಆಮ್‌ ಆದ್ಮಿ ಪಾರ್ಟಿ ಕೋರಿದೆ.

ಆಯುಕ್ತರಿಗೆ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ ಪಕ್ಷದ ಮುಖಂಡರು, ಬೆಳ್ಳಾರೆಯಲ್ಲಿ ಇಬ್ಬರು ಮತ್ತು ಸುರತ್ಕಲ್‌ನಲ್ಲಿ ಒಬ್ಬರ ಕೊಲೆ ಆದ ನಂತರ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಕೊಲೆಗೆ ಕೋಮುದ್ವೇಷವೇ ಕಾರಣ ಎಂಬ ಸಂದೇಹ ಇರುವುದರಿಂದ ಜನರು ಭಯಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರಾತ್ರಿ ಓಡಾಟಕ್ಕೆ ನಿರ್ಬಂಧ ಹೇರಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂಥ ಪರಿಸ್ಥಿತಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವ್ಯಾಪಾರಿಗಳು, ಉದ್ಯಮಿಗಳು, ಸಂಘಗಳ ಮುಖಂಡರು, ಸೇವಾ ಸಂಸ್ಥೆಗಳು, ಸಾಂಸ್ಕೃತಿಕ ಜಗತ್ತಿನ ಪ್ರತಿನಿಧಿಗಳು, ವಿದ್ಯಾ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿ ನಾಯಕರು ಮತ್ತಿತರರ ಜೊತೆ ಶಾಂತಿ ಸಭೆ ನಡೆಸಬೇಕು ಎಂದು ಕೋರಲಾಗಿದೆ.

ADVERTISEMENT

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲೂ ಶಾಂತಿ ಸಮಿತಿ ರಚಿಸಿ ಸಭೆಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಮನವಿ ಮಾಡಲಾಗಿದೆ.

ಆಮ್ ಆದ್ಮಿ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕಾಮತ್, ಮುಖಂಡರಾದ ವೇಣುಗೋಪಾಲ್‌, ವೆಂಕಟೇಶ್ ಬಾಳಿಗಾ, ಡೆಸ್ಮಂಡ್ ಡಿ ಸೋಜ, ಸ್ಟೀಫನ್ ಪಿಂಟೊ, ರೋನಿ ಕ್ರಾಸ್ತ, ಬೆನೆಟ್ ಮೋರಸ್‌, ಕೆ.ಎಸ್‌.ಶ್ರೀನಿವಾಸ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.