ಗೋಕಾಕ: ಹೊರವಲಯದ ಸಂಗಮೇಶ್ವರ ದೇವಸ್ಥಾನದಲ್ಲಿ ಹೆಜ್ಜೇನುಗಳು ಜನರ ಮೇಲೆ ದಾಳಿ ನಡೆಸಿವೆ.
ಸಾವಳಿಗೆಪ್ಪ ನಂದಗಾಂವಿ, ಸಿದ್ದಪ್ಪ ಮಡಿವಾಳ, ಶ್ರೀಕಾಂತ ಖಾನಟ್ಟಿ, ಭೀಮಪ್ಪ ವಾಳವಿ, ಬಸವರಾಜ ಅಂಬಿ, ಚಿದಾನಂದ ಸದಾವರ್ತಿ ಸೇರಿದಂತೆ 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
‘ಘಟಪ್ರಭಾ ಮತ್ತು ಮಾರ್ಖಂಡೇಯ ನದಿಗಳ ಸಂಗಮ ಸ್ಥಳದಲ್ಲಿರುವ ಈ ದೇಗುಲದಲ್ಲಿ ಪೂಜೆಗಾಗಿ ಜನರು ಸೇರಿದ್ದರು. ಆಗ ಹೆಜ್ಜೇನುಗಳು ದಾಳಿ ನಡೆಸಿ, ಕಚ್ಚಿವೆ. ಹಲವರು ತಪ್ಪಿಸಿಕೊಳ್ಳಲು ಓಡಿ ಬರುತ್ತಿದ್ದುದನ್ನು ಗಮನಿಸಿ ನಾನೂ ಸುರಕ್ಷಿತ ಸ್ಥಳ ತಲುಪಿದೆ’ ಎಂದು ಗಿರೀಶ ಮಾಹಿತಿ ನೀಡಿದರು.
‘ಗಾಯಗೊಂಡವರನ್ನು ವಾಹನವೊಂದರಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಯಿತು’ ಎಂದು ಪ್ರತ್ಯಕ್ಷದರ್ಶಿ ಶ್ರೀಶೈಲ ಪೂಜಾರಿ ‘ಪ್ರಜಾವಾಣಿ'’ಗೆ ತಿಳಿಸಿದರು.
‘ಸಾವಳಿಗೆಪ್ಪ ನಂದಗಾಂವಿ ಮತ್ತು ಸಿದ್ದಪ್ಪ ಮಡಿವಾಳ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಬಿಡುಗಡೆ ಆಗಿದ್ದಾರೆ’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.