ADVERTISEMENT

ಬೆಳಗಾವಿ: ಬಸವರಾಜ ಹೂಗಾರ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 7:19 IST
Last Updated 20 ಸೆಪ್ಟೆಂಬರ್ 2021, 7:19 IST
ಬಸವರಾಜ ಹೂಗಾರ
ಬಸವರಾಜ ಹೂಗಾರ   

ಬೆಳಗಾವಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಜಂಟಿ ನಿರ್ದೇಶಕರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿ ಕಂದಾಯ ವಿಭಾಗಕ್ಕೆ ಬೆಳಗಾವಿ ವಲಯದ ಜಂಟಿ ನಿರ್ದೇಶಕರಾಗಿ ನೇಮಗಕೊಂಡಿರುವ ಬಸವರಾಜ ಹೂಗಾರ ಅವರು ಸೋಮವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು. ವಲಯವು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ, ಉತ್ತರಕನ್ನಡ ಮತ್ತು ಧಾರವಾಡ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಈ ಜಿಲ್ಲೆಗಳಲ್ಲಿ ಬರುವ ಟ್ರಸ್ಟ್‌ಗಳು, ಅಕಾಡೆಮಿಗಳು ಮತ್ತು ರಂಗಾಯಣ, ರಂಗಮಂದಿರಗಳು ಹಾಗೂ ಸಹಾಯಕ ನಿರ್ದೆಶಕರ ಮೇಲ್ವಿಚಾರಣೆಯ ಅಧಿಕಾರವನ್ನು ನೂತನ ಜಂಟಿ ನಿರ್ದೇಶಕರಿಗೆ ನೀಡಲಾಗಿದೆ.

ಕವಿ, ಬರಹಗಾರ ಬಸವರಾಜ ಹೂಗಾರ ಮೂಲತಃ ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ಗ್ರಾಮದವರು. ಸಹಾಯಕ ನಿರ್ದೆಶಕರಾಗಿ ತುಮಕೂರು, ಕೊಪ್ಪಳ, ಉತ್ತರಕನ್ನಡ, ಮಂಡ್ಯ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಲಲಿತಕಲಾ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರ ‘ತತ್ರಾಣಿ’ ಕಾವ್ಯಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬಹುಮಾನ ನೀಡಿ ಗೌರವಿಸಿದೆ. ‘ಹಾದಿಜಂಗಮ’, ‘ಬೀದಿ ಬೆಳಕಿನ ಕಂದಿಲು’ ಇವರ ಇತರ ಪ್ರಮುಖ ಕೃತಿಗಳು. ಅನೇಕ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಅವರ ಕವಿತೆ ಹಾಗೂ ಲೇಖನಗಳು ಪಠ್ಯವಾಗಿವೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.