ADVERTISEMENT

ಬೆಳಗಾವಿ| ‘ಯುವ ಕ್ರಾಂತಿ’ ರ್‍ಯಾಲಿ ಇಂದು : ರಾಹುಲ್‌ ಭಾಗಿ

ಕಾಂಗ್ರೆಸ್‌ ನಾಯಕನ ಸ್ವಾಗತಕ್ಕೆ ಭರದ ಸಿದ್ಧತೆ, ಬೆಳಗಾವಿಯಾದ್ಯಂತ ಕಟೌಟ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 18:58 IST
Last Updated 19 ಮಾರ್ಚ್ 2023, 18:58 IST
ರಾಹುಲ್‌ ಗಾಂಧಿ ಅವರಿಗೆ ಸ್ವಾಗತ ಕೋರಿ ಬೆಳಗಾವಿಯಲ್ಲಿ ಅಳವಡಿಸಿದ ಕಟೌಟ್‌ಗಳು  – ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ
ರಾಹುಲ್‌ ಗಾಂಧಿ ಅವರಿಗೆ ಸ್ವಾಗತ ಕೋರಿ ಬೆಳಗಾವಿಯಲ್ಲಿ ಅಳವಡಿಸಿದ ಕಟೌಟ್‌ಗಳು  – ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿನ ಸಿಪಿಇಡಿ ಮೈದಾನದಲ್ಲಿ ಮಾರ್ಚ್‌ 20ರ ಸೋಮವಾರ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ‘ಯುವ ಕ್ರಾಂತಿ ರ್‍ಯಾಲಿಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾಗವಹಿಸಲಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಯುವಕರು ಬರಲಿದ್ದು, ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಿದ್ಧಪಡಿಸಲಾಗಿದೆ. 80 ಸಾವಿರಕ್ಕೂ ಅಧಿಕ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ರಾಹುಲ್‌ ಗಾಂಧಿ ಅವರಿಗೆ ಸ್ವಾಗತ ಕೋರಿ ನಗರದ ಮುಖ್ಯರಸ್ತೆಗಳಲ್ಲಿ ಪಕ್ಷದ ಸ್ಥಳೀಯ ನಾಯಕರು ಹಲವು ಕಟೌಟ್‌ಗಳನ್ನು‌ ಹಾಕಿದ್ದಾರೆ. ರಸ್ತೆಬದಿ ಕಾಂಗ್ರೆಸ್‌ ಧ್ವಜಗಳನ್ನು ಕಟ್ಟಿದ್ದಾರೆ. ರಾಹುಲ್‌ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

ADVERTISEMENT

ಗ್ರಹಣಕ್ಕೆ ಮುಕ್ತಿ ಸಿಗಲಿದೆ: ಸಿಪಿಇಡಿ ಮೈದಾನಕ್ಕೆ ಭಾನುವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ‘ಭರವಸೆಗಳನ್ನು ನೀಡಿ, ಯುವಕರಿಗೆ ಉದ್ಯೋಗ ನೀಡದ ಬಿಜೆಪಿ ಸರ್ಕಾರವನ್ನು ಬೇರು ಸಮೇತವಾಗಿ ಕಿತ್ತುಹಾಕಲು ಯುವಜನತೆ ಮುಂದಾಗಬೇಕು’ ಎಂದು ಕರೆ ನೀಡಿದರು.

‘ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಉದ್ಯೋಗ ಸೃಷ್ಟಿಸಿಲ್ಲ. ಇದರಿಂದಾಗಿ ಯುವಕ–ಯುವತಿಯರ ಭವಿಷ್ಯಕ್ಕೆ ಹಿಡಿದಿರುವ ಗ್ರಹಣಕ್ಕೆ ಯುವ ಕ್ರಾಂತಿ ರ್‍ಯಾಲಿಯಿಂದ ಮುಕ್ತಿ ಸಿಗಲಿದೆ’ ಎಂದು ತಿಳಿಸಿದರು.

‘ಈ ರ್‍ಯಾಲಿಯಲ್ಲಿ ಹಿರಿಯ ನಾಯಕರು ರಾಜ್ಯದ ಯುವಕರ ಬದುಕು ಉಜ್ವಲಗೊಳಿಸುವಂತಹ ಗ್ಯಾರಂಟಿ ಕಾರ್ಡ್ ಅನಾವರಣಗೊಳಿಸಲಿದ್ದಾರೆ’ ಎಂದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೇವಲ ಸುಳ್ಳು ಹೇಳುತ್ತಿದ್ದಾರೆ. ರಾಜ್ಯಕ್ಕೆ ಬರಬೇಕಿದ್ದ ಹಲವು ಉದ್ಯಮ ಬೇರೆ ರಾಜ್ಯಗಳ ಪಾಲಾಗುತ್ತಿವೆ’ ಎಂದು ಆಪಾದಿಸಿದರು.

ಗೊಂದಲದ ಪ್ರಶ್ನೆಯಲ್ಲ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸುರ್ಜೇವಾಲಾ, ‘ವಿವಿಧ ಕ್ಷೇತ್ರಗಳಿಂದ ಕಣಕ್ಕಿಳಿಯುವಂತೆ ಇಬ್ಬರಿಗೂ ಕಾರ್ಯಕರ್ತರಿಂದ ಆಹ್ವಾನ ಬಂದಿದೆ. ಇದು ಅವರ ಜನಪ್ರಿಯತೆಗೆ ಸಾಕ್ಷಿಯೇ ಹೊರತು, ಗೊಂದಲದ ಪ್ರಶ್ನೆಯಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.