ಬೆಳಗಾವಿ: ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡ) ಸಭೆಯನ್ನು, ಬಿಜೆಪಿ ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರು ಗೈರು ಹಾಜರಾದ್ದರಿಂದ ಉಂಟಾದ ಕೋರಂ ಅಭಾವದಿಂದಾಗಿ ನಡೆಸಲಾಗಲಿಲ್ಲ
ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ವಿಷಯಗಳ ಚರ್ಚೆಗೆ ಉದ್ದೇಶಿಸಲಾಗಿತ್ತು. ಆದರೆ, ಶಾಸಕರು ಬಾರದಿದ್ದರಿಂದ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕರಾದ ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಸಭೆಗೆಂದು ನಿಗದಿತ ಸಮಯಕ್ಕೆ ಬಂದು ಕಾದಿದ್ದರು. ಆಗಮಿಸಿದ್ದರು. ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ ಕೂಡ ಬಂದಿದ್ದರು. ಸಭೆಯನ್ನು ಅ. 25ಕ್ಕೆ ಮುಂದೂಡಲಾಯಿತು. ಅಧ್ಯಕ್ಷರು ಹಾಗೂ ಶಾಸಕರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಸಭೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ.
‘ಪ್ರಾಧಿಕಾರದ ಸಭೆ ನಡೆದು ಒಂದು ವರ್ಷವೇ ಸಮೀಪಿಸುತ್ತಿದೆ. ಆದರೂ, ಈ ಬಗ್ಗೆ ಸ್ಥಳೀಯ ಶಾಸಕರಾದ ಅನಿಲ ಬೆನಕೆ ಹಾಗೂ ಅಭಯ ಪಾಟೀಲ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರು ಗೈರು ಹಾಜರಾಗುತ್ತಿರುವುದರಿಂದ ಸಭೆಯನ್ನು ಪದೇ ಪದೇ ಮುಂದಕ್ಕೆ ಹಾಕಲಾಗುತ್ತಿದೆ’ ಎಂದು ಸತೀಶ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ನವೆಂಬರ್ನಲ್ಲಿ ಬುಡಾ ಸಭೆ ಆಗಿತ್ತು. ಇದಾದ ಬಳಿಕ ಯಾವುದೇ ಸಭೆ ನಡೆದಿಲ್ಲ. ಮುಂದಿನ ಬಾರಿಯೂ ಬಿಜೆಪಿ ಶಾಸಕರು ಆಗಮಿಸದಿದ್ದರೆ ಅಧ್ಯಕ್ಷರು ಯಾವ ರೀತಿ ಕ್ರಮ ಕೈಗೊಳ್ಳಲಿದ್ದಾರೆ ನೋಡಬೇಕು. ಕೋರಂ ಅಭಾವದಿಂದಾಗಿ ಯಾವುದೇ ರೀತಿ ಚರ್ಚೆ ಆಗಲಿಲ್ಲ. ‘ಕಣಬರಗಿ ಯೋಜನೆ–61’ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ತಿಳಿಸಿದರು.
‘ಶಾಸಕರಿಗೆ ತಿಳಿಸಿಯೇ ಸಭೆ ಕರೆದಿದ್ದೆವು. ಶಾಸಕರು, ಸದಸ್ಯರು ಬಾರದ ಹಿನ್ನೆಲೆಯಲ್ಲಿ ಎರಡು ಬಾರಿ ಸಭೆ ಮುಂದಕ್ಕೆ ಹೋಗಿದೆ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇರುವಾಗ ಸಭೆಗೆ ಶಾಸಕರು ಗೈರಾಗಿರುವುದು ಸರಿಯಲ್ಲ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.