ಉಗರಗೋಳ (ಸವದತ್ತಿ ತಾ.): ಇಲ್ಲಿನ ಪ್ರಖ್ಯಾತ ಕುಸ್ತಿಪಟು ರಾಜೇಸಾಬ್ ಬೇವಿನಗಿಡದ ಅವರ ಪುತ್ರರಾದ ಮೀರಾಸಾಬ್ ಮತ್ತು ಮುಷ್ಫಿಕ್ ಆಲಂ ಬೇವಿನಗಿಡದ ಅಂತರರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಹಲವು ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕುಸ್ತಿ ಅಖಾಡಗಳಲ್ಲಿ ಮಿಂಚಿದ್ದ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನೇಪಾಳದ ಕಠ್ಮಂಡುವಿನ ಫೊಖ್ರಾದಲ್ಲಿ ಸೆ.22ರಿಂದ ಸೆ.24ರವರೆಗೆ ಆಯೋಜಿಸಿರುವ ಇಂಡೊ-ನೇಪಾಳ ಗೇಮ್ಸ್ನಲ್ಲಿ ಅವರು ಭಾರತ ಪ್ರತಿನಿಧಿಸಲಿದ್ದಾರೆ. 92 ಕೆ.ಜಿ. ಹಿರಿಯರ ವಿಭಾಗದಲ್ಲಿ ಮೀರಾಸಾಬ್ ಮತ್ತು 92 ಕೆ.ಜಿ. ಸಬ್ ಜೂನಿಯರ್ ವಿಭಾಗದಲ್ಲಿ ಮುಷ್ಫಿಕ್ ಆಲಂ ಸ್ಪರ್ಧಿಸಲಿದ್ದಾರೆ. ಅವರು ಗ್ರಾಮದಿಂದ ಶನಿವಾರ ನೇಪಾಳದತ್ತ ತೆರಳಿದರು.
‘ನಾವು ಕಷ್ಟದಲ್ಲೇ ಬೆಳೆದು ಬಂದವರು. ತಂದೆಯವರ ಗರಡಿಯಲ್ಲಿ ಅಭ್ಯಾಸ ಮಾಡುತ್ತಾ ಸ್ಪರ್ಧಿಸುತ್ತಾ ಬಂದಿದ್ದೇವೆ. ಅಣ್ಣಂದಿರಾದ ಮಲ್ಲನಗೌಡ ಪಾಟೀಲ ಮತ್ತು ರಾಜು ಪಾಟೀಲ ಮಾರ್ಗದರ್ಶನ ನೀಡುತ್ತಿದ್ದಾರೆ. ಊರಿನ ಹಿರಿಯರು ಆರ್ಥಿಕ ನೆರವು ನೀಡಿದ್ದಾರೆ. ಅವರೆಲ್ಲರ ಸಹಕಾರದಿಂದಾಗಿ ಇದೇ ಮೊದಲ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇವೆ. ಗೆದ್ದು ನಮ್ಮೂರು ಮತ್ತು ದೇಶದ ಕೀರ್ತಿ ಹೆಚ್ಚಿಸುವುದು ನಮ್ಮ ಗುರಿಯಾಗಿದೆ’ ಎಂದು ಈ ಸಹೋದರರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.