ಬೆಳಗಾವಿ: ‘ರಾಜ್ಯದ ಜನರು ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎನ್ನುವುದನ್ನು ಅರಿತು ಬಿಜೆಪಿ ಮತ್ತು ಜೆಡಿಎಸ್ನ ನಾಯಕರು ಪಕ್ಷ ಸೇರ್ಪಡೆಗಾಗಿ ನಮ್ಮ ಮುಖಂಡರನ್ನು ಸಂಪರ್ಕಿಸಿದ್ದಾರೆ. ಆದರೆ, ಸದ್ಯಕ್ಕೆ ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದರು.
‘ಪಕ್ಷಕ್ಕೆ ಒಳ್ಳೆಯ ಭವಿಷ್ಯ ಇದೆ ಎನ್ನುವುದಕ್ಕಾಗಿಯೇ ಹಲವರು ನಮ್ಮೊಂದಿಗೆ ಬರಲು ಸಿದ್ಧವಾಗಿದ್ದಾರೆ’ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
‘ಸೋಲನ್ನು ಜೀರ್ಣಿಸಿಕೊಳ್ಳುವ ಶಕ್ತಿ ಪಕ್ಷಕ್ಕಿದೆ. ಆದರೆ, ಸಿದ್ಧಾಂತವನ್ನು ಬಿಟ್ಟುಕೊಡುವುದಿಲ್ಲ. ಯಾವುದೇ ಸಂದರ್ಭದಲ್ಲಿ ಬೇಕಾದರೂ ವಿಧಾನಸಭೆ ಚುನಾವಣೆ ಎದರಾಗಬಹುದು. ಅದಕ್ಕೆ ನಾವು ಸಿದ್ಧವಾಗಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಕ್ರವ್ಯೂಹದಲ್ಲಿ ಸಿಲುಕ್ಕಿದ್ದಾರೆ. ಅವರಿಗೆ ಅಧಿಕಾರ ಇದೆಯೇ ಹೊರತು ಆಡಳಿತ ಮಾಡಲು ಅವರ ಹೈಕಮಾಂಡ್ ಬಿಡುತ್ತಿಲ್ಲ. ಅವರ ಸರ್ಕಾರ ಟೇಕಾಫ್ ಆದದ್ದು ಕಾಣಿಸುತ್ತಿಲ್ಲ. ಬಿಜೆಪಿಯ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನೆ, ಆರ್ಎಸ್ಎಸ್ನ ಕೇಶವಕೃಪ ಕಚೇರಿ ಹಾಗೂ ಹೈಕಮಾಂಡ್ ಹೀಗೆ... 3 ಬಾಗಿಲುಗಳು ಮುಖ್ಯಮಂತ್ರಿ ಎದುರಿವೆ. ಎಲ್ಲಿಗೆ ಹೋಗಬೇಕು ಎನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.