ಬೆಳಗಾವಿ: ‘ಮನೆಗಳ ಮಾಲೀಕರನ್ನು ಆನ್ಲೈನ್ನಲ್ಲಿ ವಂಚಿಸುವ ಜಾಲವೊಂದು ಸಕ್ರಿಯವಾಗಿದ್ದು, ಎಚ್ಚರಿಕೆ ವಹಿಸಬೇಕು’ ಎಂದು ಡಿಸಿಪಿ ವಿಕ್ರಂ ಅಮಟೆ ತಿಳಿಸಿದ್ದಾರೆ.
‘ಮನೆ ಮಾರಾಟಕ್ಕಿದೆ ಅಥವಾ ಬಾಡಿಗೆಗೆ ಕೊಡುವುದಿದೆ ಎಂದು ಜಾಲತಾಣದಲ್ಲಿ ಪೋಸ್ಟ್ ಅಥವಾ ಜಾಹೀರಾತು ಹಾಕುವುದನ್ನು ಗಮನಿಸಿ, ಸೈಬರ್ ವಂಚಕರು ಕರೆ ಮಾಡುತ್ತಾರೆ. ನಾವು ಸೇನೆಯ ಅಧಿಕಾರಿಗಳಾಗಿದ್ದು, ಬೆಳಗಾವಿಗೆ ವರ್ಗಾವಣೆ ಆಗಿ ಬರುವುದಿದೆ; ಇದಕ್ಕಾಗಿ ಮನೆ ಬೇಕಿದೆ ಎಂದು ಕೇಳುತ್ತಾರೆ. ಮನೆಯ ಖರೀದಿಯ ಬಗ್ಗೆ ವ್ಯವಹರಿಸಿ ಬ್ಯಾಂಕ್ ಖಾತೆಯ ಮಾಹಿತಿ ಪಡೆಯುತ್ತಾರೆ. ಟೋಕನ್ ಅಡ್ವಾನ್ಸ್ ಆಗಿ ₹ 10 ಹಾಕಿ ವಿಶ್ವಾಸ ಗಳಿಸುತ್ತಾರೆ. ಕ್ಯೂ ಆರ್ ಕೋಡ್ ಅಥವಾ ಲಿಂಕ್ ಕಳುಹಿಸಿ ಖಾತೆಯಲ್ಲಿರುವ ಹಣವನ್ನೆಲ್ಲಾ ಸೆಳೆಯುತ್ತಾರೆ. ಇಂಥದೊಂದು ಜಾಲವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈ ರೀತಿಯ ಸೈಬರ್ ವಂಚಕರಿಂದ ಮೋಸ ಹೋದವರು ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಹೀಗಾಗಿ, ಮನೆ ಮಾರುವವರು ಹಾಗೂ ಬಾಡಿಗೆಗೆ ಕೊಡುವವರು ಎಚ್ಚರ ವಹಿಸಬೇಕು. ನೇರವಾಗಿ ವ್ಯವಹರಿಸಬೇಕು. ಹಣವನ್ನು ಖುದ್ದು ಬಂದು ನೀಡುವಂತೆ ಖರೀದಿಸುವವರಿಗೆ ತಿಳಿಸಬೇಕು’ ಎಂದು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.