ADVERTISEMENT

ಇ-ಕೆವೈಸಿ: ಸೆ.30ರವರೆಗೆ ಅವಧಿ ವಿಸರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 13:28 IST
Last Updated 13 ಸೆಪ್ಟೆಂಬರ್ 2021, 13:28 IST

ಬೆಳಗಾವಿ: ಜಿಲ್ಲೆಯಲ್ಲಿರುವ ಅಂತ್ಯೋದಯ, ಆದ್ಯತಾ (ಬಿಪಿಎಲ್) ಹಾಗೂ ಆದ್ಯತೇತರ (ಎಪಿಎಲ್) ಪಡಿತರ ಚೀಟಿದಾರರು ಇ-ಕೆವೈಸಿಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲು ಸರ್ಕಾರದಿಂದ ನೀಡಲಾಗಿದ್ದ ಕಾಲಾವಧಿಯನ್ನು ಸೆ.30ರವರೆಗೆ ವಿಸ್ತರಿಸಲಾಗಿದೆ.

ಸೆ.15ರರವರೆಗೆ ಪ್ರತಿ ದಿನ ಆಯಾ ನ್ಯಾಯಬೆಲೆ ಅಂಗಡಿಗಳ ನಿಯಮಿತ ಸಮಯ ಅಂದರೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ಇ-ಕೆವೈಸಿ ಸಂಗ್ರಹಿಸುವ ಕಾರ್ಯ ನಡೆಸಲಾಗುವುದು. ಸೆ. 16ರಿಂದ 30ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ದಿನ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಮಾತ್ರ ಇ-ಕೆವೈಸಿ ಸಂಗ್ರಹ ಕಾರ್ಯವನ್ನು ನಿಯೋಜಿತ ನ್ಯಾಯಬೆಲೆ ಅಂಗಡಿಗಳಲ್ಲಿ ನಿರ್ವಹಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದ್ದಾರೆ.

‘ನಿಗದಿತ ವೇಳಾಪಟ್ಟಿಯಂತೆ ಸರ್ಕಾರವು ಜಿಲ್ಲೆಯ ಎಲ್ಲಾ ವರ್ಗದ ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಅದರಂತೆ ಚೀಟಿದಾರರು ತಪ್ಪದೇ ಎಲ್ಲ ಸದಸ್ಯರ (ಪಡಿತರ ಚೀಟಿಯಲ್ಲಿ ಹೆಸರಿರುವವರು) ಇ-ಕೆವೈಸಿ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬೇಕು. ಒಂದು ವೇಳೆ ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿಗಳಲ್ಲಿನ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಸರ್ಕಾರವು ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಬಹುದು’ ಎಂದು ಹೇಳಿದ್ದಾರೆ.

ADVERTISEMENT

‘ಇ-ಕೆವೈಸಿ ಮಾಡಿಸಲು ನಿಯೋಜಿತ ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಕುಟುಂಬದ ಸದಸ್ಯರು ಸರ್ಕಾರ ನಿಗಧಿಪಡಿಸಿದ ಕೋವಿಡ್-19 ಮಾನದಂಡಗಳ ಅನ್ವಯ ಮಾಸ್ಕ್‌ ಧರಿಸಬೇಕು ಮತ್ತು ಅಂತರ ಕಾಯ್ದುಕೊಳ್ಳಬೇಕು. ಈ ಅಂತಿಮ ಅವಕಾಶವನ್ನು ಚೀಟಿದಾರರು ಸದ್ಬಳಕೆ ಮಾಡಿಕೊಳ್ಳಬೇಕು. ಇ-ಕೆವೈಸಿ ಸಂಗ್ರಹಣೆಗೆ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಕಾರರು ಹಣ ಕೇಳಿದ್ದಲ್ಲಿ ಅಥವಾ ದೂರುಗಳು ಇದ್ದರೆ ತಹಶೀಲ್ದಾರ್‌ ಅಥವಾ ಇಲಾಖೆಯ ಸಹಾಯಕ ನಿರ್ದೇಶಕರು, ಆಹಾರ ಶಿರಸ್ತೇದಾರರು/ ಇನ್‌ಸ್ಪೆಕ್ಟರ್‌ಗೆ ನೀಡಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.