ADVERTISEMENT

ತೆಲಸಂಗ: ಆಧಾರ್ ಸೇವೆ ಪುನರಾರಂಭಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:14 IST
Last Updated 17 ಸೆಪ್ಟೆಂಬರ್ 2021, 16:14 IST
ತೆಲಸಂಗದಲ್ಲಿ ಆಧಾರ್ ಕಾರ್ಡ್ ಸೇವೆ ಪುನರಾರಂಭಕ್ಕೆ ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು
ತೆಲಸಂಗದಲ್ಲಿ ಆಧಾರ್ ಕಾರ್ಡ್ ಸೇವೆ ಪುನರಾರಂಭಕ್ಕೆ ಆಗ್ರಹಿಸಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು   

ತೆಲಸಂಗ: ‘ಗ್ರಾಮದ ಅಟಲ್‍ಜೀ ಜನಸ್ನೇಹಿ ಕೇಂದ್ರಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಅರ್ಜಿ ಕೆಲಸ ಸ್ಥಗಿತಗೊಂಡು 6 ತಿಂಗಳುಗಳೆ ಕಳೆದರೂ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ’ ಎಂದು ಆರೋಪಿಸಿ ಗ್ರಾಮಸ್ಥರು ಇಲ್ಲಿನ ಉಪತಹಶೀಲ್ದಾರ್‌ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ತೆಲಸಂಗ ಹೋಬಳಿ ಜನರು ನಿತ್ಯ ತಾಲ್ಲೂಕು ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಆಧಾರ್ ಕಾರ್ಡ್ ಕೇಂದ್ರ ಆರಂಭಕ್ಕೆ ಕ್ರಮ ವಹಿಸದಿರುವುದು ನೋಡಿದರೆ ಆಡಳಿತ ವ್ಯವಸ್ಥೆ ಎಚ್ಚರದಿಂದ ಇದೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತಿದೆ’ ಎಂದು ಮುಖಂಡ ಮಸ್ತಾನ ನದಾಫ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಯೊಂದು ಸೌಲಭ್ಯ ಪಡೆಯುವುದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ತಿದ್ದುಪಡಿ ಮತ್ತು ಹೊಸ ಕಾರ್ಡ್ ಅರ್ಜಿಗಾಗಿ 32 ಗ್ರಾಮಗಳಿಗೆ ಇದೊಂದೆ ಕೇಂದ್ರವಾಗಿದೆ. ಇಲ್ಲಿ ಸೇವೆ ಸಿಗದಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ಆದಷ್ಟು ಬೇಗ ಕೇಂದ್ರ ಪ್ರಾರಂಭಿಸದಿದ್ದರೆ ನಾಡಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು’ ಎಂದು ಮುಖಂಡರಾದ ಅದೀಕ ಲಾಮಖಾನೆ, ರಾವಸಾಬ ದಶವಂತ, ಗುರು ಕೋಡ್ನಿ, ಅರ್ಜುನ ಮೋರೆ, ಸಂದೀಪ ಮೋರೆ, ಸಿದ್ದು ಚವ್ಹಾಣ, ಅಲ್ತಾಫ ನಧಾಪ ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.