ADVERTISEMENT

ಬೆಳಗಾವಿ: 11 ದಿನಗಳ ಗಣೇಶೋತ್ಸವಕ್ಕೆ ಅನುಮತಿ–ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 6:50 IST
Last Updated 9 ಸೆಪ್ಟೆಂಬರ್ 2021, 6:50 IST
ಬೆಳಗಾವಿಯಲ್ಲಿ ಕಲಾವಿದೆಯೊಬ್ಬರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವುದು
ಬೆಳಗಾವಿಯಲ್ಲಿ ಕಲಾವಿದೆಯೊಬ್ಬರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವುದು   

ಬೆಳಗಾವಿ: ‘ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು 11 ದಿನಗಳವರೆಗೆ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಈ ಬಗ್ಗೆ ವಿಡಿಯೊ ಹೇಳಿಕೆಯನ್ನು ಮಾಧ್ಯಮಕ್ಕೆ ಗುರುವಾರ ಬಿಡುಗಡೆ ಮಾಡಿರುವ ಅವರು, ‘ಗಣೇಶೋತ್ಸವಕ್ಕೆ ಅವಕಾಶ ಕೊಡುವ ಕುರಿತು ನಿರ್ಣಯ ಕೈಗೊಳ್ಳಲು ಆಯಾ ಜಿಲ್ಲಾಡಳಿತಕ್ಕೆ ಅಧಿಕಾರ ಕೊಡಲಾಗಿದೆ. ಬೆಳಗಾವಿಯಲ್ಲಿ 11 ದಿನ ಉತ್ಸವ ನಡೆಯಲಿ ಎಂದು ಹೇಳಿದ್ದಾರೆ. ಮಧ್ಯಾಹ್ನದ ಒಳಗೆ ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಹೊರಬೀಳಲಿದೆ ಎಂದೂ ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದಿದ್ದಾರೆ.

‘ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ, ನಗರದ ಅಭಿವೃದ್ಧಿ ಬಗ್ಗೆಯೂ ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಅವರ ಸಮಯ ಪಡೆದಿದ್ದು, ಸೆ.13ರಂದು ನಗರಪಾಲಿಕೆಯ ಬಿಜೆಪಿ ಸದಸ್ಯರನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಭೇಟಿ ಮಾಡಿಸುತ್ತೇನೆ. ಬಿಜೆಪಿ ಕಚೇರಿಗೂ ಸದಸ್ಯರು ಭೇಟಿ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

ಇಲ್ಲಿ ಗಣೇಶೋತ್ಸವಕ್ಕೆ ಕೇವಲ ಐದು ದಿನಗಳಿಗೆ ಅನುಮತಿ ನೀಡಿದ್ದಕ್ಕೆ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಸಂಪ್ರದಾಯದಂತೆ ಉತ್ಸವ ನಡೆಸಲು ಅನುಮತಿ ನೀಡಬೇಕು ಎಂದು ಮಹಾಮಂಡಳಗಳ ಮುಖಂಡರುಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಒತ್ತಾಯಿಸಿದ್ದರು. ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.