ಬೆಳಗಾವಿ: ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ಸುಳೇಭಾವಿ ಗ್ರಾಮದಲ್ಲಿ ಜಲಜೀವನ ಅಭಿಯಾನದಲ್ಲಿ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಲಕ್ಷ್ಮಿತಾಯಿ ಕೋ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
‘ಕಾಮಗಾರಿಯನ್ನು ₹ 3.80 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಹಾಗೂ ರಸ್ತೆಗೆ ತೊಂದರೆ ಆಗದಂತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮತ್ತು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ’ ಎಂದು ಚನ್ನರಾಜ ತಿಳಿಸಿದರು.
‘ಶಾಸಕರು ಇಡೀ ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಶಾಲಾ ಕಟ್ಟಡ, ದೇವಸ್ಥಾನ ಜೀರ್ಣೋದ್ಧಾರ ಮೊದಲಾದ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ಹಲವೆಡೆ ತೊಂದರೆ ಅಗಿದ್ದರೂ ಧೈರ್ಯಗುಂದದೆ ಕಾಮಗಾರಿ ಮುಂದುವರಿಸುತ್ತಿದ್ದಾರೆ. ಜನರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದದಿಂದಾಗಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತಂದಿದ್ದಾರೆ. ಮಾದರಿ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತಿದ್ದಾರೆ’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ, ಉಪಾಧ್ಯಕ್ಷೆ ರತ್ನವ್ವ ಕೋಲಕಾರ, ಸದಸ್ಯರಾದ ಬಸನಗೌಡ ಪಾಟೀಲ, ನಾಗಯ್ಯ, ಅರ್ಜುನ, ಕಲ್ಲಪ್ಪ, ದತ್ತ ಬಾಂಡಿಗನಿ, ಮುರಗೇಶ, ಇಸ್ಮಾಯಿಲ್ ತಿಗಡಿ ಉಪಸ್ಥಿತರಿದ್ದರು.
ಬಳಿಕ, ಕ್ಷೇತ್ರದ ಬಾಳೇಕುಂದ್ರಿ ಕೆ.ಎಚ್. ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಎದುರು ಅಳವಡಿಸಲಾದ ಸೋಲಾರ್ ದೀಪವನ್ನು ಚನ್ನರಾಜ ಉದ್ಘಾಟಿಸಿದರು.
ಮುಖಂಡರಾದ ನೀಲೇಶ ಚಂದಗಡ್ಕರ, ಸಿದ್ದಪ್ಪ ಕಾಂಬಳೆ, ರಾಕೇಶ ಬುರುಡ, ಜೈನುಲ್ಲಾ ಕುಡಚಿ, ಶಹಬಾಜ ಶೇಖ, ಶೀತಲ ಜಕ್ಕನ್ನವರ, ಪ್ರವೀಣ ಮುರಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.