ಮುರಗುಂಡಿ: ‘ಸಂಸ್ಕಾರಯುತವಾದ ಶಿಕ್ಷಣ ನೀಡಿ ಮಕ್ಕಳನ್ನು ಅತ್ಯುತ್ತಮ ನಾಗರಿಕರನ್ನಾಗಿಸುವುದು ಶಿಕ್ಷಕರ ಬದ್ಧತೆಯನ್ನು ತೋರಿಸುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಖೋತ ಹೇಳಿದರು.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗ್ರಾಮದ ಶಿಕ್ಷಕ ಮಹಾದೇವ ಮಳಮಳಸಿ ಅವರನ್ನು ಹಳೆಯ ವಿದ್ಯಾರ್ಥಿಗಳ ಬಳಗದಿಂದ ಸನ್ಮಾನಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳೊಂದಿಗೆ ವ್ಯವಹಾರ ಜ್ಞಾನ ನೀಡಬೇಕು’ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾಗವಾಡ ಶಾಖೆ ಅಧ್ಯಕ್ಷ ಗೌಡಪ್ಪ ಸಡ್ಡಿ, ‘ಮಳಮಳಸಿ ಅವರು ಮಕ್ಕಳಿಗೆ ತಿಳಿಯುವಂತೆ ಸರಳವಾಗಿ ಪಾಠ ಮಾಡುತ್ತಾರೆ. ಅತ್ಯಂತ ಉತ್ಸಾಹದಿಂದ ಶಾಲೆಗೆ ಬರುವಂತೆ ಪ್ರೇರೇಪಿಸುತ್ತಿದ್ದಾರೆ’ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಮಹಾದೇವ, ‘ವಿದ್ಯಾರ್ಥಿಗಳು ಸದಾ ಪ್ರೇರಣಾ ಶಕ್ತಿಯಾಗಿದ್ದಾರೆ. ಅವರಿಂದ ಬರುವ ಕುತೂಹಲಕಾರಿ ಪ್ರಶ್ನೆಗಳು ಇನ್ನಷ್ಟು ಕಲಿಸಬೇಕು ಎನ್ನುವ ಪ್ರೇರಣೆ ನೀಡುತ್ತವೆ. ಹಳೆಯ ವಿದ್ಯಾರ್ಥಿಗಳಿಂದ ಸಿಕ್ಕ ಸನ್ಮಾನ ಜೀವಮಾನದ ಸುವರ್ಣಾಕ್ಷರದ ಪುಟಗಳು’ ಎಂದು ಭಾವುಕರಾಗಿ ಹೇಳಿದರು.
ಕಾಗವಾಡ ಬಿಇಒ ಎಂ.ಆರ್. ಮುಂಜೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ರಾಠೋಡ ಮಾತನಾಡಿದರು. ಸುತ್ತಮುತ್ತಲಿನ ಶಾಲೆಗಳು, ಸಂಘ ಸಂಸ್ಥೆಗಳು, ಗ್ರಾಮ ಪಂಚಾಯ್ತಿ, ಮುರಸಿದ್ದೇಶ್ವರ ಸಮಿತಿಗಳ ವತಿಯಿಂದ ಮಹಾದೇವ ಮಳಮಳಸಿ ದಂಪತಿಯನ್ನು ಸನ್ಮಾನಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಬಸವರಾಜ ಪಾಟೀಲ, ಪ್ರೌಢಶಾಲಾ ಮುಖ್ಯಶಿಕ್ಷಕ ಕೆ.ಎ. ಶಿರಗಾಂವಕರ, ಎಸ್ಡಿಎಂಸಿ ಅಧ್ಯಕ್ಷ ಶ್ರೀಮಂತ ಪಾಟೀಲ, ಭರಮಾ ಮಗಾಡಿ, ತವನಪ್ಪ ಮಹಿಷವಾಡಗಿ, ಕುಮಾರ ಪಾಟಿಲ, ತಮ್ಮಣ್ಣ ಸಣಮುರಿ, ಸಿದ್ರಾಯ ಕಾಳೆಲಿ, ಮುತ್ತಪ್ಪ ಮಗಾಡಿ, ಸುನೀಲ ದಾದಾಗೋಳ, ಭೀಮು ಸಡ್ಡಿ, ಶ್ರೀಮಂತ ಕಾಟಕರ, ಐ.ಜಿ. ಮಕಾನದಾರ, ಜಿ.ಎಂ. ಅತ್ತಾರ ಇದ್ದರು.
ಸುರೇಶ ವಾಘಮೊಡೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.