ಮೂಡಲಗಿ: ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರ ಕಲರವ ಬುಧವಾರ ತುಂಬಿತ್ತು.
ರಜೆಗಾಗಿ ಗ್ರಾಮಕ್ಕೆ ಬಂದಿರುವ ಗ್ರಾಮದ ಯೋಧರೆಲ್ಲರೂ ಸೇರಿ ತಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಸನ್ಮಾನಿಸಿ ಶಿಕ್ಷಕರ ದಿನವನ್ನು ವಿಶೇಷವಾಗಿ ಆಚರಿಸಿದ್ದು ಗಮನಸೆಳೆಯಿತು.
17 ಮಂದಿ ಹಾಲಿ ಮತ್ತು ಮಾಜಿ ಸೈನಿಕರು ಸೇರಿ ಸಮಾರಂಭ ಆಯೋಜಿಸಿದ್ದರು. ದೇಶದ ಭವಿಷ್ಯ ರೂಪಿಸುವ ಶಿಕ್ಷರು ಮತ್ತು ದೇಶ ಕಾಯುವ ಯೋಧರ ಮಿಲನವು ಶಾಲೆಗೆ ವಿಶೇಷ ಕಳೆ ಕಟ್ಟಿತ್ತು. ಇಂತಹ ಅಪರೂಪದ ದೃಶ್ಯವನ್ನು ಶಾಲೆಯ ಮಕ್ಕಳು ಮತ್ತು ಪಾಲಕರೆಲ್ಲ ಕಣ್ತುಂಬಿಕೊಂಡರು.
‘ನಮಗೆ ಅಕ್ಷರ ಜ್ಞಾನವನ್ನು ನೀಡಿ ಸೇನೆಯಲ್ಲಿ ಸೇವೆ ಮಾಡುವಂತಹ ಅವಕಾಶ ಕಲ್ಪಿಸಿರುವ ಶಿಕ್ಷಕರನ್ನು ನಾವು ಎಂದಿಗೂ ಮರೆಯುವುದಿಲ್ಲ’ ಎಂದು ಯೋಧ ಸಿದ್ದು ಅರಭಾವಿ ಹೇಳಿದರು.
ನಿವೃತ್ತ ಯೋಧ ಸಿದ್ದಪ್ಪ ನಾಯ್ಕ, ‘ನಾವು ಕಲಿತ ಶಾಲೆಗೆ ನಾವು ಸದಾ ಋಣಿಯಾಗಿರುತ್ತೇವೆ. ನಾವು ಕಲಿತ ಸರ್ಕಾರಿ ಶಾಲೆ ಪ್ರಗತಿಯಾಗುತ್ತಿರುವುದು ಕಂಡು ಖುಷಿಯಾಗಿದೆ’ ಎಂದರು.
ಗ್ರಾಮದಿಂದ 42 ಮಂದಿ ಭಾರತೀಯ ಸೇನೆಯನ್ನು ಸೇರಿದ್ದಾರೆ. ವರ್ಷದಲ್ಲಿ ಒಮ್ಮೆ ತವರೂರಿಗೆ ಬರುವ ವಾಡಿಕೆ. ಈ ಬಾರಿ ಗ್ರಾಮದ ಜಾತ್ರೆಗಾಗಿ ಬಂದಿದ್ದು, ಕುಟುಂಬ ಹಾಗೂ ಗೆಳೆಯರ ಒಡನಾಟದೊಂದಿಗೆ ಅಕ್ಷರ ಕಲಿಸಿದ ಶಿಕ್ಷಕರನ್ನೂ ಗೌರವಿಸಿದ್ದಾರೆ.
ಸೈನಿಕರಾದ ಸಿದ್ದಪ್ಪ ನಾಯ್ಕ, ಸಿದ್ದಪ್ಪ ಬಾಗೇವಾಡಿ, ನಾಮದೇವ ಸಂಗಾನಟ್ಟಿ, ಆನಂದ ಪತ್ತಾರ, ಪುಂಡಲೀಕ ಉಪ್ಪಾರ, ರಾಜು ನಾಯ್ಕವಾಡಿ, ಸಿದ್ದು ಅರಬಾಂವಿ, ಭೈರಪ್ಪ ಸಂಗಾನಟ್ಟಿ, ಪ್ರದೀಪ ಶೆಟ್ಟಿ. ಸಿದ್ದಾರೂಢ ವ್ಯಾಪಾರಕಿ, ಸಿದ್ದು ಖಾನಟ್ಟಿ, ನಾರಾಯಣ ಮಲ್ಲಾಪೂರ, ಮುತ್ತುರಾಜ ಗದಾಡಿ, ಗುರುನಾಥ ಗದಾಡಿ, ಯಲ್ಲಪ್ಪ ಚೋಟೆಪ್ಪಗೋಳ, ಬಾಳಪ್ಪ ಗದಾಡಿ ಭಾಗವಹಿಸಿದ್ದರು.
ಶಾಲಾ ಮುಖ್ಯಸ್ಥ ಎ.ವಿ. ಗಿರೆಣ್ಣವರ, ಸಿಆರ್ಪಿ ಗಣಪತಿ ಉಪ್ಪಾರ ಅವರು ಸೈನಿಕರ ಕಾರ್ಯವನ್ನು ಶ್ಲಾಘಿಸಿದರು.
ಶಿಕ್ಷಕಿಯರಾದ ಲಕ್ಷ್ಮಿ ಹೆಬ್ಬಾಳ, ಪುಷ್ಪಾ ಭರಮದೆ, ಕುಸುಮಾ ಮಾಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ ಲಮಾಣಿ, ಶೀಲಾ ಕುಲಕರ್ಣಿ, ಕೆ.ಆರ್. ಭಜಂತ್ರಿ, ಸಂಗೀತಾ ತಳವಾರ, ಎಂ.ಕೆ. ಕಮ್ಮಾರ, ಎಂ.ಡಿ. ಗೋಮಾಡಿ ಹಾಗೂ ಅಕ್ಷರದಾಸೋಹ ಸಿಬ್ಬಂದಿಯನ್ನು ಸನ್ಮಾನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.