ಬೆಂಗಳೂರು: ಪಾಲಿಕೆ ಆವರಣದ ಆದಿಶಕ್ತಿ ದೇವಸ್ಥಾನದ ಬಳಿ ಹೂವು ಮಾರುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಲ್ಯಾಪ್ಟಾಪ್ ಕೊಡಿಸುವ ಭರವಸೆ ನೀಡಿದ್ದಾರೆ.
16 ವರ್ಷದಬನಶಂಕರಿ ಎಂಬ ವಿದ್ಯಾರ್ಥಿನಿ ತನ್ನ ಶಿಕ್ಷಣದೊಂದಿಗೆ ಜೀವನ ನಿರ್ವಹಣೆಗಾಗಿ ಐದು ವರ್ಷಗಳಿಂದ ಹೂವು ಮಾರುತ್ತಿದ್ದಳು. ಈ ವಿಚಾರ ತಿಳಿದ ಆಯುಕ್ತರು ದೇವಸ್ಥಾನದ ಬಳಿಗೆ ತೆರಳಿ, ವಿದ್ಯಾರ್ಥಿನಿಯನ್ನು ಮಾತನಾಡಿಸಿದರು.
ಜೀವನ ನಿರ್ವಹಣೆಗಾಗಿ ಹೂವು ಮಾರಾಟ ಮಾಡುತ್ತಿದ್ದೇನೆ ಹಾಗೂ ಜೊತೆಯಲ್ಲೇ ಶಿಕ್ಷಣ ಮುಂದುವರಿಸುತ್ತಿದ್ದೇನೆ. ಬಡ ಕುಟುಂಬ ಆಗಿರುವುದರಿಂದ ಆನ್ಲೈನ್ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ಇರುವುದಾಗಿ ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಳು.
ವಿದ್ಯಾರ್ಥಿನಿಯ ಸಂಕಷ್ಟ ಆಲಿಸಿದ ಮುಖ್ಯ ಆಯುಕ್ತರು, ಆನ್ಲೈನ್ ಶಿಕ್ಷಣಕ್ಕೆ ಅನುಕೂಲವಾಗಲು ಲ್ಯಾಪ್ಟಾಪ್ ಕೊಡಿಸುವ ಹಾಗೂ ಶಿಕ್ಷಣಕ್ಕೆ ಬೇಕಾದ ಅಗತ್ಯ ಸಹಾಯ ಮಾಡುವ ಭರವಸೆ ನೀಡಿದರು.
ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಬನಶಂಕರಿ,‘ತಂದೆ ಮಗ್ಗ ನೇಯುವ ಕೆಲಸ ಮಾಡುತ್ತಿದ್ದಾರೆ. ತಾಯಿ ನನ್ನ ಕೆಲಸಕ್ಕೆ ಸಹಾಯ ಮಾಡುತ್ತಿದ್ದು, ಮಾರುಕಟ್ಟೆಯಿಂದ ಹೂವು ತಂದು ಕೊಡುತ್ತಾರೆ.ಜುಲೈ 19ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿವೆ. ಮಧ್ಯಾಹ್ನದವರೆಗೆ ಹೂವು ಮಾರಾಟ ಮಾಡಿ, ನಂತರ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಮೊಬೈಲ್ನಲ್ಲಿ ಆನ್ಲೈನ್ ಶಿಕ್ಷಣಕ್ಕೆ ಸಮಸ್ಯೆಯಾಗಿತ್ತು. ಆಯುಕ್ತರು ಲ್ಯಾಪ್ಟಾಪ್ ಕೊಡಿಸುವುದಾಗಿ ತಿಳಿಸಿದ್ದಾರೆ. ಅವರಿಗೆ ಧನ್ಯವಾದ’ ಎಂದು ಸಂತಸ ವ್ಯಕ್ತಪಡಿಸಿದಳು.
‘ಈ ಉತ್ತಮ ಕಾರ್ಯ ಮಾಡಿರುವ ಪಾಲಿಕೆ ಆಯುಕ್ತರಿಗೆ ಧನ್ಯವಾದಗಳು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.