ಬೆಂಗಳೂರು: ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದ ಮೇಲೆ ಅನಗತ್ಯ ದಂಡ ವಿಧಿಸುವ ಮೂಲಕ ರಾಜ್ಯ ಸರ್ಕಾರ ಗದಾ ಪ್ರಹಾರ ನಡೆಸುತ್ತಿದ್ದು, ಪಾರದರ್ಶಕ ನಿಯಮಗಳನ್ನು ಜಾರಿಗೆ ತರಬೇಕು ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ಸ್ ಒತ್ತಾಯಿಸಿದೆ.
‘ಸರ್ಕಾರದ ಎಲ್ಲ ನಿಯಮಗಳನ್ನು ಪಾಲನೆ ಮಾಡಿಕೊಂಡು ಕಾನೂನು ಬದ್ಧವಾಗಿ ಬಂಡವಾಳ ಹೂಡಿ ಉದ್ಯಮ ನಡೆಸಲಾಗುತ್ತಿದೆ. ಅದಕ್ಕೂ ಸರ್ಕಾರ ತೊಡಕುಂಟು ಮಾಡುತ್ತಿದೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಕಲ್ಲು ಕ್ವಾರಿ ಮತ್ತು ಕ್ರಷರ್ ಉದ್ಯಮದ ವಿಷಯದಲ್ಲಿ ಸರ್ಕಾರದ ನಿರ್ಧಾರಗಳು ಅರಾಜಕತೆ ಸೃಷ್ಟಿಸಿವೆ. ಪಾರದರ್ಶಕ ಕಾನೂನು ಮತ್ತು ಸೂಕ್ತ ನಿಯಮಗಳಿಲ್ಲ. ಏಳು ವರ್ಷಗಳಿಂದ ಅಸಮರ್ಪಕ ಲೆಕ್ಕಪರಿಶೋಧನೆ ನಡೆಸಲಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೇಳಿದರು.
‘ಕಾನೂನುಬದ್ಧ ಚಟುವಟಿಕೆಗಳನ್ನು ಅಕ್ರಮ ಗಣಿಗಾರಿಕೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಕಾನೂನಿನ ತೊಡಕಿನಿಂದಾಗಿ ಕೆಲ ಗಣಿ ಪ್ರದೇಶಗಳ ಮಂಜೂರಾತಿ ವಿಳಂಬವಾಗಿದ್ದು, ಕೂಡಲೇ ಮಂಜೂರಾತಿ ನೀಡಬೇಕು. ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಡಿ.ಸಿದ್ಧರಾಜು, ಉಪಾಧ್ಯಕ್ಷ ಬಿ.ಎನ್ ಕಿರಣ್ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.