ADVERTISEMENT

ಯುಯುಸಿಎಂಎಸ್ ಜಾರಿಗೆ ವಿಳಂಬ ಕುಲಸಚಿವರ ವಜಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:17 IST
Last Updated 19 ಆಗಸ್ಟ್ 2022, 22:17 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಜಾರಿಗೆ ವಿಳಂಬ ಮಾಡುವ ಕುಲಸಚಿವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಇಲ್ಲವೇ, ಕರ್ತವ್ಯದಿಂದಲೇ ಬಿಡುಗಡೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವತ್ಥ ನಾರಾಯಣ ಎಚ್ಚರಿಸಿದರು.

ವಿಕಾಸಸೌಧದಲ್ಲಿ ಶುಕ್ರವಾರ ನಡೆದರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಕಡಿಮೆ ಸಿಬ್ಬಂದಿ, ಕಡಿಮೆ ಖರ್ಚು ವೆಚ್ಚದಲ್ಲಿ ವಿಶ್ವವಿದ್ಯಾಲಯಗಳನ್ನು ನಿರ್ವ ಹಿಸಲು ಇದು ಪರಿಣಾಮಕಾರಿ ವ್ಯವಸ್ಥೆ. ಇಂತಹ ವ್ಯವಸ್ಥೆ ಅನುಷ್ಠಾನಕ್ಕೆ ನಿರ್ಲಕ್ಷ್ಯ ತೋರುವ ಕುಲಸಚಿವರ ಕುರಿತು ಕುಲಪತಿಗಳೇ ವರದಿ ನೀಡಬೇಕು‌ ಎಂದು ಸೂಚಿಸಿದರು.

ADVERTISEMENT

ಕೆಲವು ವಿಶ್ವವಿದ್ಯಾಲಯಗಳಲ್ಲಿ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಫಲಿ ತಾಂಶ ಬಂದಿವೆ.‌ ಬಹುತೇಕ ವಿವಿಗಳು ಪರೀಕ್ಷೆ ನಡೆಸಿದರೂ ಮೌಲ್ಯಮಾಪನ ಮಾಡಿಲ್ಲ, ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಕೆಲವು ವಿವಿಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ತಂತ್ರಾಂಶದಲ್ಲಿ ನಮೂ ದಿಸಿಲ್ಲ. ಈ ಲೋಪವನ್ನು ಇದೇ ತಿಂಗಳ ಒಳಗೆ ಸಂಪೂರ್ಣವಾಗಿ ಸರಿಪಡಿಸಿ ಕೊಳ್ಳಬೇಕು. ಯುಯುಸಿಎಂಎಸ್ ಜಾರಿಯಲ್ಲಿನ ತೊಡಕು ತಿಳಿದುಕೊಳ್ಳಲು ನಿತ್ಯವೂ ವಿಡಿಯೊ ಸಂವಾದದ ಮೂಲಕ ಗಮನಕ್ಕೆ ತರಬಹುದು ಎಂದು ತಾಕೀತು ಮಾಡಿದರು.

ನವೋದ್ಯಮ ಸ್ಪರ್ಧೆ: ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ, ಪರ್ಯಾವರಣ ಗತಿ ವಿಧಿ ಸಂಸ್ಥೆಗಳ ಸಹಯೋಗದಲ್ಲಿ ಎರಡು ದಿನ ನಡೆಯಲಿರುವ ‘ಇಕೋ ಯೂತ್’ ನವೋದ್ಯಮ ಸ್ಪರ್ಧೆ ಮತ್ತು ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಅವರು,ಮುಂದುವರಿದ ದೇಶಗಳಲ್ಲಿ ಸಂಸ್ಥೆ ಚಾಲಿತ ಆರ್ಥವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಕೈಗಾರಿಕೆ ಚಾಲಿತ ಅರ್ಥ ವ್ಯವಸ್ಥೆಯಿದೆ. ದೇಶ ಸಮಗ್ರವಾಗಿ ಅಭಿವೃದ್ಧಿಗೊಳ್ಳಲು ಸಂಸ್ಥೆ ಚಾಲಿತ ಅರ್ಥ ವ್ಯವಸ್ಥೆ ಅಗತ್ಯ. ಹೊಸ ಶಿಕ್ಷಣ ನೀತಿ ಇಂತಹ ವಿಷಯಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದರು.

ಸಿ-ಕ್ಯಾಂಪ್‌ಗೆ ಜಮೀನು: ಭರವಸೆ
ಜೈವಿಕ ವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆ ಸಿ-ಕ್ಯಾಂಪ್‌ಗೆ (ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಪ್ಲಾಟ್ ಫಾರಂಸ್) ಅಗತ್ಯವಿರುವ ಜಮೀನು ಒದಗಿಸಲು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿದರು.

ಸಿ-ಕ್ಯಾಂಪ್ ಸಿಇಒ ತಸ್ಲಿಮಾ ಅವರ ನೇತೃತ್ವದ ನಿಯೋಗದ ಶುಕ್ರವಾರನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಸಿ-ಕ್ಯಾಂಪ್ ಸಂಸ್ಥೆ ಪ್ರಸ್ತುತ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಹೊಂದಿಕೊಂಡಂತೆ ಅಗತ್ಯ ಜಮೀನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.