ಬೆಂಗಳೂರು: ಇಲ್ಲಿನ ರಾಜಾಜಿನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ(ಜಿಟಿಟಿಸಿ) ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪಗಳ ಬಗ್ಗೆಸದನ ಸಮಿತಿಯಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ಸದಸ್ಯರು ಸೋಮವಾರ ವಿಧಾನ ಪರಿಷತ್ನಲ್ಲಿ ಒತ್ತಾಯಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ವಿಷಯಪ್ರಸ್ತಾಪಿಸಿದ ಕಾಂಗ್ರೆಸ್ನ ಪಿ.ಆರ್. ರಮೇಶ್ ಅವರು, ‘ಉಪಕರಣಗಳ ಖರೀದಿಯಲ್ಲಿ ಪಾರದರ್ಶಕ ಕಾಯ್ದೆ ಕಡೆಗಣಿಸಲಾಗಿದ್ದು, ಭಾರಿ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿದರು.
‘ಅಧಿಕೃತ ಏಜೆಂಟ್ರಿಂದ ಉಪಕರಣಗಳನ್ನು ಖರೀದಿಸಿಲ್ಲ. ವಾಸ್ತವಕ್ಕಿಂತ ಹೆಚ್ಚು ಬೆಲೆ ನೀಡಲಾಗಿದೆ. ₹ 8.5 ಕೋಟಿ ಯಂತ್ರಕ್ಕೆ ₹17 ಕೋಟಿ ನೀಡಲಾಗಿದೆ. ₹ 40 ಲಕ್ಷ ಯಂತ್ರಕ್ಕೆ ₹ 1.3 ಕೋಟಿ ನೀಡಲಾಗಿದೆ. ಕೆಲಉಪಕರಣಗಳು ದಾಖಲೆಗಳಲ್ಲಿವೆಯೇ ಹೊರತು ವಾಸ್ತವದಲ್ಲಿ ಇಲ್ಲ. ಇಂತಹಹಲವಾರು ವ್ಯತ್ಯಾಸಗಳಿವೆ’ ಎಂದು ಆರೋಪಿಸಿದರು.
ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ‘₹27 ಕೋಟಿ ಮೊತ್ತದ ಯಂತ್ರಕ್ಕೆ ₹60 ಕೋಟಿ ನೀಡಲಾಗಿದೆ. ಕೇವಲ ಮೂರು ಕಂಪನಿಗಳಿಗೆ ಮಾತ್ರ ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದರಿಂದ ಸದನ ಸಮಿತಿಯಿಂದ ತನಿಖೆ ಮಾಡಿಸಿ’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್ನಿಂದಮಸಿ ಬಳಿಯುವ ಯತ್ನ’
‘ಖರೀದಿ ವೇಳೆ ಯಾವುದೇ ರೀತಿಯಲ್ಲೂ ನಿಯಮಗಳನ್ನು ಉಲ್ಲಂಘಿಸಿಲ್ಲ. ಪಾರದರ್ಶಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಆದರೆ, ಕಾಂಗ್ರೆಸ್ಮಸಿ ಬಳಿಯುವ ಪ್ರಯತ್ನ ನಡೆಸಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಕಿಡಿಕಾರಿದರು.
‘ಟೆಂಡರ್ ಅಂದಾಜಿಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸಿಲ್ಲ. ಉದಾಹರಣೆಗೆ, ಸಿಎನ್ಸಿ ಯಂತ್ರವನ್ನು ಅಣ್ಣಾಮಲೈ ವಿಶ್ವವಿದ್ಯಾಲಯ ₹1.8 ಕೋಟಿಗೆ ಖರೀದಿಸಿದೆ. ಆದರೆ, ಜಿಟಿಟಿಸಿಯಲ್ಲಿ ₹99 ಲಕ್ಷಕ್ಕೆ ಖರೀದಿಸಲಾಗಿದೆ’ ಎಂದರು.
‘ಜಿಟಿಟಿಸಿಯಿಂದ ವರ್ಷಕ್ಕೆ ಸುಮಾರು ₹7 ಕೋಟಿ ಆದಾಯ ಬರುತ್ತಿದೆ. ಇಲ್ಲಿ ತಯಾರಿಸಿದ ಹಲವು ಉಪಕರಣಗಳನ್ನು ಎಚ್ಎಎಲ್, ಇಸ್ರೊ ಮುಂತಾದ ಸಂಸ್ಥೆಗಳು ಖರೀದಿಸಿವೆ’ ಎಂದು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.