ADVERTISEMENT

ಕನ್ನಡದ ಸೀಮಾರೇಖೆ ವಿಸ್ತರಿಸುವ ಹಳಗನ್ನಡ: ಮಲ್ಲೇಪುರಂ ಜಿ. ವೆಂಕಟೇಶ್

ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 20:00 IST
Last Updated 25 ಮಾರ್ಚ್ 2023, 20:00 IST
ಕಾರ್ಯಕ್ರಮದಲ್ಲಿ ಪ್ರೊ.ಸಿ. ಮಹಾದೇವಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. (ಎಡದಿಂದ) ಶಿಕ್ಷಣ ತಜ್ಞ ಗುರುರಾಜ ಕರಜಗಿ, ವೈದ್ಯ ಸಾಹಿತಿ ಡಾ.ನಾ. ಸೋಮೇಶ್ವರ, ಸಾಹಿತಿಗಳಾದ ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ ಹಾಗೂ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ. ಪ್ರಸನ್ನಯ್ಯ ಇದ್ದಾರೆ.       – ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪ್ರೊ.ಸಿ. ಮಹಾದೇವಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. (ಎಡದಿಂದ) ಶಿಕ್ಷಣ ತಜ್ಞ ಗುರುರಾಜ ಕರಜಗಿ, ವೈದ್ಯ ಸಾಹಿತಿ ಡಾ.ನಾ. ಸೋಮೇಶ್ವರ, ಸಾಹಿತಿಗಳಾದ ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ ಹಾಗೂ ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ. ಪ್ರಸನ್ನಯ್ಯ ಇದ್ದಾರೆ.       – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹೊಸ ತಲೆಮಾರಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಹಳಗನ್ನಡದ ರುಚಿ ಹಿಡಿಸಬೇಕು. ಹಳಗನ್ನಡ ಕಾವ್ಯಗಳ ಅಭ್ಯಾಸದಿಂದ ಕನ್ನಡದ ಸೀಮಾರೇಖೆ ವಿಸ್ತರಣೆ ಆಗಲಿದೆ’ ಎಂದು ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ್ ತಿಳಿಸಿದರು.

ಕಮಲಾ ಹಂಪನಾ ಸಾಹಿತ್ಯ ವೇದಿಕೆ ಹಾಗೂ ಕರ್ನಾಟಕ ಜೈನ್ ಅಸೋಸಿಯೇಷನ್ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಅಕ್ಕರಗೊಟ್ಟಿಯ ಅಲಂಪಿನ ಇಂಪು ಚಂಪೂ ಕಬ್ಬಗಳ ಹಬ್ಬ’ದಲ್ಲಿ ಭಾಗವಹಿಸಿ, ಮಾತನಾಡಿದರು.

‘ಹಳತನ್ನು ಕಳೆದುಕೊಂಡರೆ ಹೊಸದನ್ನು ಸೃಷ್ಟಿಸುವುದು ಅಸಾಧ್ಯ. ಆದ್ದರಿಂದ ಹೊಸ ಕಣ್ಣು, ಹೊಸ ಮನಸ್ಸಿನಿಂದ ಹಳಗನ್ನಡ ಸಾಹಿತ್ಯವನ್ನು ಪ್ರವೇಶ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಪ್ರಾಚೀನ ಕನ್ನಡ ಕಾವ್ಯ ಸಂದರ್ಭ ನೋಡಿದರೆ ಅಧಿಕಾರ ಮತ್ತು ಕಾವ್ಯದ ಸಂಬಂಧ ಬಹಳ ಸಂಕೀರ್ಣವಾಗಿದೆ. ಪಂಪ ಹಾಕಿದ ಮಾರ್ಗದಲ್ಲಿ ಮುಂದಿನ ಕವಿಗಳು ನಡೆದಿದ್ದಾರೆ. ರಾಜನನ್ನು ಕೀರ್ತಿಸುವುದಕ್ಕೆ ಮಾತ್ರ ಪ್ರಾಚೀನ ಕವಿಗಳು ಕಾವ್ಯ ರಚಿಸಲಿಲ್ಲ. ಆಗಿನ ಕಾವ್ಯಗಳಲ್ಲಿ ಸೃಜನಶೀಲತೆ ಮತ್ತು ಅನುವಾದದ ನಡುವಿನ ಗೆರೆ ತಿಳಿಯಾಗಿತ್ತು. ಈಗ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವದಿಂದ ಅನುವಾದವು ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಿದೆ’ ಎಂದು ಕವಿ ಎಚ್.ಎಸ್. ಶಿವಪ್ರಕಾಶ್ ಅಭಿಪ್ರಾಯಪಟ್ಟರು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರನ್ನು ಸ್ಮರಿಸಿ ಭಾವುಕರಾದ ಸಾಹಿತಿ ಹಂ.ಪ. ನಾಗರಾಜಯ್ಯ, ‘ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹಳಗನ್ನಡದ ಬಗ್ಗೆ ಅಗಾಧ ಪ್ರಭುತ್ವ ಹೊಂದಿದ್ದರು. ಸಾಹಿತ್ಯದ ಬಗ್ಗೆ ಅವರು ವಿಶೇಷ ಆಸಕ್ತಿ ಹೊಂದಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಆದಿಕವಿ ಪಂಪನ ಸಹೋದರ ಜಿ ನವಲ್ಲಭನಿಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ. ಜಿನವಲ್ಲಭ ತ್ರಿಭಾಷಾ ಕವಿ ಯಾಗಿದ್ದು, ಅವನು ತೆಲುಗು ಭಾಷೆಯ ಆದಿಕವಿಯಾಗಿದ್ದಾನೆ’ ಎಂದರು.

ಇದಕ್ಕೂ ಮೊದಲು ಪ್ರೊ.ಸಿ. ಮಹಾದೇವಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.