ADVERTISEMENT

ಬೆಂಗಳೂರಿನಲ್ಲಿ ಭಾರಿ ಮಳೆ: ಮರಗಳು ಧರೆಗೆ

ಮಲ್ಲೇಶ್ವರ 18ನೇ ಅಡ್ಡ ರಸ್ತೆ ಬಳಿ ಕಾರುಜಖಂ: ಹಲವೆಡೆ ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 28 ಮೇ 2020, 2:50 IST
Last Updated 28 ಮೇ 2020, 2:50 IST
ನಗರದಲ್ಲಿ ಬುಧವಾರ ಸುರಿದ ಗಾಳಿ ಮಳೆಗೆ ಮಲ್ಲೇಶ್ವರ 18ನೇ ಕ್ರಾಸ್‌ನಲ್ಲಿ ಮರವೊಂದು ಬಿದ್ದ ಪರಿಣಾಮ ಮೂರು ಕಾರುಗಳು ಜಖಂಗೊಂಡವು. ವ್ಯಕ್ತಿಯೊಬ್ಬರು ತಮ್ಮ ಕಾರಿನ ಸ್ಥಿತಿಯನ್ನು ಅರಿಯಲು ಪ್ರಯತ್ನಿಸಿದರು.
ನಗರದಲ್ಲಿ ಬುಧವಾರ ಸುರಿದ ಗಾಳಿ ಮಳೆಗೆ ಮಲ್ಲೇಶ್ವರ 18ನೇ ಕ್ರಾಸ್‌ನಲ್ಲಿ ಮರವೊಂದು ಬಿದ್ದ ಪರಿಣಾಮ ಮೂರು ಕಾರುಗಳು ಜಖಂಗೊಂಡವು. ವ್ಯಕ್ತಿಯೊಬ್ಬರು ತಮ್ಮ ಕಾರಿನ ಸ್ಥಿತಿಯನ್ನು ಅರಿಯಲು ಪ್ರಯತ್ನಿಸಿದರು.   

ಬೆಂಗಳೂರು: ನಗರದಾದ್ಯಂತ ಬುಧವಾರ ಸಂಜೆ ಕೂಡಾ ಗುಡುಗು, ಸಿಡಿಲು, ಭಾರಿ ಗಾಳಿ ಸಹಿತ ಸುಮಾರು ಒಂದು ಗಂಟೆ ಧಾರಾಕಾರವಾಗಿ ಮಳೆ ಸುರಿಯಿತು. ಗಾಳಿಯ ರಭಸಕ್ಕೆ 50ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ.

ಮಲ್ಲೇಶ್ವರ 18ನೇ ಅಡ್ಡ ರಸ್ತೆ ಮತ್ತು ಕಾಡುಮಲ್ಲೇಶ್ವರ ದೇವಾಲಯ ಬಳಿ ಬೃಹತ್‌ ಗಾತ್ರದ ಮರಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದು, ಎರಡು ಕಾರು ಮತ್ತು ಒಂದು ಆಟೊ ಜಖಂಗೊಂಡಿದೆ. ಹೀಗಾಗಿ, ಕಿಲೋ ಮೀಟರ್‌ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಕೆಲವು ಕಡೆಗಳಲ್ಲಿ ಮರದ ರೆಂಬೆಗಳು ಮುರಿದು ವಿದ್ಯುತ್‌ ತಂತಿಗಳ ಮೇಲೆ ಬಿದ್ದಿವೆ. ಹೀಗಾಗಿ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು.

ಮಧ್ಯಾಹ್ನ 3.30ರ ಸುಮಾರಿಗೆ ಆರಂಭವಾದ ಮಳೆ ಕೆಲವು ಪ್ರದೇಶಗಳಲ್ಲಿ ಜೋರಾಗಿ ಸುರಿಯಿತು. ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ನೀರು ತುಂಬಿ ಹರಿಯಿತು.

ADVERTISEMENT

ಮಲ್ಲೇಶ್ವರ, ಗಾಂಧಿನಗರ, ಜಯನಗರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳು ನೆಲಕ್ಕುರುಳಿವೆ. ಸಂಚಾರ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಮರಗಳನ್ನು ತೆರವುಗೊಳಿಸಲು ಹರಸಾಹಸಪಟ್ಟರು. ಮಲ್ಲೇಶ್ವರ, ಗಾಂಧಿನಗರ, ಇಂದಿರಾನಗರ ಸೇರಿದಂತೆ ಹಲವೆಡೆಗಳಲ್ಲಿ ಸಂಚಾರ ದಟ್ಟಣೆಯೂ ಉಂಟಾಯಿತು.

ಬೆಳೆ, ಪಾಲಿಹೌಸ್ ಹಾನಿ
ದಾಬಸ್‍ಪೇಟೆ:
ಸೋಂಪುರ ಹೋಬಳಿಯಾದ್ಯಂತ ಬುಧವಾರ ಬಿರುಗಾಳಿ ಸಹಿತ ಭಾರಿ ಮಳೆಯಾಯಿತು. ಮಧ್ಯಾಹ್ನ ಸುಮಾರು 3ರಿಂದ 4.30ರವರೆಗೂಸತತವಾಗಿ ಮಳೆ ಸುರಿಯಿತು.

ರೋಹಿಣಿ ಮಳೆ ಆರಂಭದಲ್ಲೇ ಉತ್ತಮ ಮಳೆಯಾಗುತ್ತಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಗಾಳಿಸಹಿತ ಸುರಿದ ಮಳೆಗೆ ಅಲ್ಲಲ್ಲಿ ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದವು. ತೋಟಗಳಲ್ಲಿ ಬೆಳೆದಿರುವ ಹಲಸಿನಕಾಯಿ, ಮಾವಿನಕಾಯಿಗಳು ನೆಲಕ್ಕುರುಳಿವೆ.

ಮಳೆಯಿಂದ ನರಸೀಪುರದ ರೈತ ಪ್ರವೀಣ್ ಎಂಬುವರ ಪಾಲಿಹೌಸ್‍ಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.