ADVERTISEMENT

ಹೆಬ್ಬಾಳ ಮೇಲ್ಸೇತುವೆ: ಮತ್ತೆರಡು ಲೇನ್‌, ಅಂಡರ್‌ಪಾಸ್‌ಗೆ ಟೆಂಡರ್‌

₹225 ಕೋಟಿ ವೆಚ್ಚ; ಟೆಂಡರ್‌ ಬಿಡ್‌ಗೆ ಸೆಪ್ಟೆಂಬರ್ 9ರ ಗಡುವು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:07 IST
Last Updated 19 ಆಗಸ್ಟ್ 2022, 22:07 IST
.
.   

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಿವಾರಿಸುವ ಹಿನ್ನೆಲೆಯಲ್ಲಿ ಮೇಲ್ಸೇತುವೆಯಲ್ಲಿ ಮತ್ತೆರಡು ಲೇನ್‌ ಮಾಡಲು ಹಾಗೂ ಅಂಡರ್‌ ಪಾಸ್‌ ನಿರ್ಮಿಸಲು ₹225 ಕೋಟಿ ಮೊತ್ತದ ನವೀಕೃತ ಯೋಜನೆಗೆ ಬಿಡಿಎ ಟೆಂಡರ್‌ ಕರೆದಿದೆ.

ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಮುಕ್ತವಾಗಿ ಸಂಚರಿಸಲು ಎರಡು ಲೇನ್‌ ಅನ್ನು ಹೆಬ್ಬಾಳ ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತದೆ. ಎರಡು ಲೂಪ್‌ಗಳನ್ನು ತೆಗೆಯಲಾಗುತ್ತದೆ ಎಂದು ಬಿಡಿಎ ಎಂಜಿನಿಯರ್‌ ಸದಸ್ಯ ಶಾಂತರಾಜಣ್ಣ ತಿಳಿಸಿದರು.

ತುಮಕೂರು ರಸ್ತೆಯಿಂದ ಕೆ.ಆರ್‌. ಪುರದ ಕಡೆಯ ಎರಡು ಬದಿ ಮುಕ್ತವಾಗಿ ಸಂಚರಿಸಲು ಅನುವಾಗುವಂತೆ ಅಂಡರ್‌ಪಾಸ್‌ ನಿರ್ಮಿಸಲಾಗುತ್ತದೆ. ಇದಕ್ಕೆ ಭೂ ಸ್ವಾಧೀನದ ಅಗತ್ಯ ಇಲ್ಲ. ಮೇಲ್ಸೇತುವೆಯ ಕೆಳಭಾಗದಲ್ಲೇ ಮಾಡಬಹುದಾಗಿದೆ ಎಂದು ಹೇಳಿದರು.

ADVERTISEMENT

‘ಈ ಯೋಜನೆಯನ್ನು ಮೊದಲೇ ಮಾಡಿದ್ದೆವು. ಬಿಎಂಆರ್‌ಸಿಎಲ್‌ನವರು ಅದಕ್ಕೆ ಸಮ್ಮತಿಸಲಿಲ್ಲ. ಹೀಗಾಗಿ ನಾವು ಯೋಜನೆಯನ್ನು ಬದಲಾಯಿಸಿ, ಹೊಸ ರೀತಿಯಲ್ಲಿ ಮಾಡುತ್ತಿದ್ದೇವೆ. ಇದಕ್ಕೆ ಬಿಎಂಆರ್‌ಸಿಎಲ್‌ ಸಮ್ಮತಿಸಿದೆ. ಮೇಲ್ಸೇತುವೆಯನ್ನು ವಿಸ್ತರಿಸಿ, ಎರಡು ಲೇನ್‌ಗಳನ್ನು ನಗರದಿಂದ ವಿಮಾನ ನಿಲ್ದಾಣದ ಕಡೆಗೆ ನಂತರದ ಹಂತದಲ್ಲಿ ನಿರ್ಮಿಸಲಾಗುತ್ತದೆ ’ ಎಂದರು.

‘ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಕಡೆ ಸಾಕಷ್ಟು ದಟ್ಟಣೆ ಉಂಟಾಗುತ್ತಿದೆ. ಇದನ್ನು ಮೊದಲ ಹಂತದಲ್ಲೇ ಸುಗಮಗೊಳಿಸಲು ಎರಡು ಲೇನ್‌ ಹೆಚ್ಚುವರಿಯಾಗಿ ನಿರ್ಮಾಣ ಮಾಡಲಾಗುತ್ತದೆ. ಆಗ, ಈಗಿರುವ ಎರಡು ಲೇನ್‌ಗಳು ಒಂದು ಕಡೆಗೆ ಮಾತ್ರ ಮುಕ್ತವಾಗುತ್ತವೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಮತ್ತೆರಡು ಲೇನ್‌ಗಳು ಮುಂದಿನ ಹಂತದಲ್ಲಿ ನಿರ್ಮಾಣವಾದರೆ, ಭವಿಷ್ಯದ ವರ್ಷಗಳಲ್ಲೂ ದಟ್ಣಣೆ ಉಂಟಾಗುವುದಿಲ್ಲ’ ಎಂದು ವಿವರ ನೀಡಿದರು.

‘ಬಿಎಂಆರ್‌ಸಿಎಲ್‌ ಜೊತೆಗೆ ಯೋಜನೆ ಬಗ್ಗೆ ಚರ್ಚಿಸಲಾಗುತ್ತಿದೆ. ದಟ್ಟಣೆಯನ್ನು ಪೂರ್ಣವಾಗಿ ನಿವಾರಿಸಲು ಅಗತ್ಯ ಕ್ರಮಗಳನ್ನು ಕಾಮಗಾರಿ ವೇಳೆ ತೆಗೆದುಕೊಳ್ಳಲಾಗುತ್ತದೆ. ಭೂಸ್ವಾಧೀನ ಕಡಿಮೆಗೊಳಿಸಲು ಬಯಸಿದ್ದು, ಅದರಂತೆ ಯೋಜನೆ ರೂಪಿಸಲಾಗಿದೆ’ ಎಂದು ಬಿಡಿಎ ಆಯುಕ್ತ ರಾಜೇಶ್‌ ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.