ADVERTISEMENT

ಜನಸ್ಪಂದನ: ಸಾರ್ವಜನಿಕರ ಕಳವಳಕ್ಕೆ ಜನಪ್ರತಿನಿಧಿಗಳ ಕಾಳಜಿ

ಮನೆಯೊಳಗೆ ನೀರು; ರಸ್ತೆಯುದ್ದಕ್ಕೂ ಕಾರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 6:42 IST
Last Updated 14 ಅಕ್ಟೋಬರ್ 2019, 6:42 IST
ಕಾರ್ಯಕ್ರಮದಲ್ಲಿ ಶಾಸಕ ಉದಯ್‌ ಗರುಡಾಚಾರ್‌ ಮಾತನಾಡಿದರು. ಸುಧಾಮ ನಗರದ ಪಾಲಿಕೆ ಸದಸ್ಯ ಆರ್.ವಿ.ಯುವರಾಜ್, ವಿಶ್ವೇಶ್ವರಪುರ ವಾರ್ಡ್‌ನ ಪಾಲಿಕೆ ಸದಸ್ಯೆ ವಾಣಿ ವಿ.ರಾವ್‌, ಮೇಯರ್‌ ಗಂಗಾಂಬಿಕೆ, ಸುಂಕೇನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಡಿ.ಎನ್‌.ರಮೇಶ್‌, ಪಾಲಿಕೆ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ಮತ್ತಿತರರು ಇದ್ದರು (ಎಡಚಿತ್ರ) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರು       – ಪ್ರಜಾವಾಣಿ ಚಿತ್ರಗಳು
ಕಾರ್ಯಕ್ರಮದಲ್ಲಿ ಶಾಸಕ ಉದಯ್‌ ಗರುಡಾಚಾರ್‌ ಮಾತನಾಡಿದರು. ಸುಧಾಮ ನಗರದ ಪಾಲಿಕೆ ಸದಸ್ಯ ಆರ್.ವಿ.ಯುವರಾಜ್, ವಿಶ್ವೇಶ್ವರಪುರ ವಾರ್ಡ್‌ನ ಪಾಲಿಕೆ ಸದಸ್ಯೆ ವಾಣಿ ವಿ.ರಾವ್‌, ಮೇಯರ್‌ ಗಂಗಾಂಬಿಕೆ, ಸುಂಕೇನಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಡಿ.ಎನ್‌.ರಮೇಶ್‌, ಪಾಲಿಕೆ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ಮತ್ತಿತರರು ಇದ್ದರು (ಎಡಚಿತ್ರ) ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರು       – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ವಸತಿ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಣಿಜ್ಯ ಚಟುವಟಿಕೆಯಿಂದಾಗಿ ವಾಹನ ನಿಲುಗಡೆ ತಾಣಗಳಂತಾಗುವ ರಸ್ತೆಗಳು, ಹೂವಿನಂಗಡಿಗಳ ಹಾವಳಿ, ವಿಪರೀತ ವಾಹನ ಸಂಚಾರ ದಟ್ಟಣೆ, ತಗ್ಗು ಪ್ರದೇಶಗಳಲ್ಲಿ ಮನೆಗಳ ಒಳಗೆ ನುಗ್ಗುವ ನೀರು...

ಚಿಕ್ಕಪೇಟೆ ವಿಧಾನ ಸಭಾಕ್ಷೇತ್ರದ ಜನರ ಅಹವಾಲುಗಳಿಗೆ ಕ್ಷೇತ್ರದ ಜನಪ್ರತಿನಿಧಿಗಳಿಂದ ಹಾಗೂ ಅಧಿಕಾರಿಗಳಿಂದ ನೇರ ಉತ್ತರ ಕೊಡಿಸುವ ಸಲುವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್‌’ ವತಿಯಿಂದ ಶನಿವಾರ ಏರ್ಪಡಿಸಿದ್ದ ಜನಸ್ಪಂದನದಲ್ಲಿ ಚರ್ಚೆಗೆ ಗ್ರಾಸವಾದ ಪ್ರಮುಖ ವಿಚಾರಗಳಿವು. ಶಾಸಕ ಉದಯ್‌ ಬಿ. ಗರುಡಾಚಾರ್‌, ಮೇಯರ್‌ ಗಂಗಾಂಬಿಕೆ ಹಾಗೂ ಪಾಲಿಕೆ ಸದಸ್ಯರು ಶಾಂತ ಚಿತ್ತದಿಂದ ಜನರ ಸಮಸ್ಯೆಗಳನ್ನು ಆಲಿಸಿ ಕಾಲಮಿತಿಯೊಳಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

‘ನಮ್ಮ ಪ್ರದೇಶದಲ್ಲಂತೂ ವಾಣಿಜ್ಯ ಚಟುವಟಿಕೆ ಮಿತಿ ಮೀರಿದೆ. ಬಿಟಿಎಸ್‌ ರಸ್ತೆಯಲ್ಲೊಂದು ಎಟಿಎಂಗೆ ಹಣ ಹಾಕುವ ಕಂಪನಿಯ ಕಚೇರಿ ಇದೆ. ಅಲ್ಲಂತೂ ಯಾವಾಗಲೂ ವಾಹನದಟ್ಟಣೆ. ನೂರಿನ್ನೂರು ವಾಹನಗಳು ರಸ್ತೆಯಲ್ಲೇ ನಿಂತಿರುತ್ತವೆ’ ಎಂದು ಚಂಚಲಾ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೆ ದನಿಗೂಡಿಸಿದ ಇನ್ನೊಬ್ಬ ಮಹಿಳೆ, ‘ದಿನವಿಡೀ ರಸ್ತೆಯಲ್ಲೇ ನಿಂತಿರುವ ವಾಹನಗಳಿಂದಾಗಿ ಸ್ಥಳೀಯರ ಬದುಕು ಹೈರಾಣಾಗಿದೆ’ ಎಂದು ಅಳಲು ತೋಡಿಕೊಂಡರು.

ವಿಲ್ಸನ್‌ ಗಾರ್ಡನ್‌ ಪ್ರದೇಶದಲ್ಲಿ ಹೂವಿನ ಅಂಗಡಿಗಳ ಹಾವಳಿ ವಿಪರೀತವಾಗಿದೆ. ಇದರಿಂದಾಗಿ ಸ್ಥಳೀಯರಿಗೆ ನೆಮ್ಮದಿ ಇಲ್ಲದಂತಾಗಿದೆ. ಈ ಪ್ರದೇಶದಲ್ಲಿ ವಾಹನ ದಟ್ಟಣೆಗೂ ಇದು ಕಾರಣವಾಗುತ್ತಿದೆ ಎಂದು ಅನೇಕರು ದೂರಿದರು.

ಮೆಟ್ರೊ ನಿಲ್ದಾಣದ ಬಳಿಗೂ ಪಾರ್ಕಿಂಗ್‌ ಸಮಸ್ಯೆ: ‘ಬಸವನಗುಡಿ ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣದ ಬಳಿ ಮೆಟ್ರೊ ಪ್ರಯಾಣಿಕರು ರಸ್ತೆಗಳಲ್ಲೇ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ಸಾರ್ವಜನಿಕರು ಓಡಾಡುವುದಕ್ಕೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯರೊಬ್ಬರು ಆರೋ‍‍ಪಿಸಿದರು.

‘ಕ್ಷೇತ್ರದ ಸಂಚಾರ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಸಂಚಾರ ಪೊಲೀಸ್‌ ವಿಭಾಗದ ಡಿಸಿಪಿ ಅವರನ್ನು ಕರೆಸಿ ಸಮಾಲೋಚನೆ ನಡೆಸುತ್ತೇನೆ. ಈ ಸಭೆಗೆ ಸ್ಥಳೀಯ ಪ್ರಮುಖರನ್ನೂಆಹ್ವಾನಿಸುತ್ತೇನೆ’ ಎಂದು ಶಾಸಕರು ಭರವಸೆ ನೀಡಿದರು.

‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇನೆ’ ಎಂದರು.

ಮೇಯರ್‌ ಗಂಗಾಂಬಿಕೆ, ‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಅವಕಾಶ ಕಲ್ಪಿಸಬಾರದು. ಅಕ್ರಮವಾಗಿ ನಡೆಯುತ್ತಿರುವ ವಾಣಿಜ್ಯ ಚಟುವಟಿಕೆಯನ್ನು ನಿಲ್ಲಿಸಲುಕ್ರಮಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಬಗೆಹರಿಸುವ ಭರವಸೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು.

‘ಮನೆಗಳಿಗೆ ನುಗ್ಗುವ ನೀರನ್ನು ಪಂಪ್‌ ಮೂಲಕ ಹೊರ ಹಾಕಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದ್ದೇವೆ. ಇದಕ್ಕೆ ಶಾಶ್ವತ ಕ್ರಮಕೈಗೊಳ್ಳುವುದಕ್ಕೆ ಅನುದಾನ ಸಿಕ್ಕಿದೆ. ಶೀಘ್ರವೇ ಈ ಸಮಸ್ಯೆಯಿಂದ ಮುಕ್ತಿ ಸಿಗಲಿದೆ’ ಎಂದು ಶಾಸಕರು ಆಶ್ವಾಸನೆ ನೀಡಿದರು.

ಶಾಸಕರ ರಸಾಯನವಿಜ್ಞಾನ ಪಾಠ

ಜನರ ಪ್ರಶ್ನೆಗಳಿಗೆ ಶಾಸಕ ಉದಯ್ ಗರುಡಾಚಾರ್‌ ಲಘು ದಾಟಿಯಿಂದ ಉತ್ತರಿಸಿದರು. ಕಬ್ಬನ್‌ ಪೇಟೆಯಲ್ಲಿ ಚಿನ್ನ ಬೆಳ್ಳಿ ಕೆಲಸ ಮಾಡುವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಈ ಲೋಹಗಳನ್ನು ಕರಗಿಸಲು ಬಳಸುವ ರಾಸಾಯನಿಕಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂದು ಸ್ಥಳೀಯರೊಬ್ಬರು ಸಮಸ್ಯೆ ಹೇಳಿಕೊಂಡರು.

‘ಚಿನ್ನ ಹಾಗೂ ಬೆಳ್ಳಿಯನ್ನು ಕರಗಿಸಲು ನೈಟ್ರೇಟ್‌ ಹಾಗೂ ಹೈಡ್ರೋಕ್ಲೋರಿಕ್‌ ಆಮ್ಲ ಬಳಸುತ್ತಾರೆ. ಅದನ್ನು ಅಕ್ವಾರಿಜಿಯ ಎಂದು ಕರೆಯುತ್ತಾರೆ. ಈ ರಾಸಾಯನಿಕ ಸಂಯೋಜನೆ ಒಂದು HNO3 ಹಾಗೂ ಮೂರು HCL. ಇದರಿಂದ ಪರಿಸರ ಮಾಲಿನ್ಯ ಉಂಟಾಗುವುದು ಸಹಜ’ ಎಂದು ಶಾಸಕರು ಅದರ ವೈಜ್ಞಾನಿಕ ಹಿನ್ನೆಲೆಯನ್ನೂ ವಿವರಿಸಿದರು.

‘ಈ ಕೆಲಸದಲ್ಲಿ ತೊಡಗಿರುವವರಲ್ಲಿ ಬಂಗಾಳಿಗಳೇ ಜಾಸ್ತಿ. ದೇಶಕ್ಕೆ ಅಕ್ರಮ ವಲಸೆ ಬಂದವರೂ ಇವರಲ್ಲಿ ಸೇರಿಕೊಂಡಿರುವ ಸಾಧ್ಯತೆ ಇದೆ. ಇಲ್ಲೂ ನಾಗರಿಕಪೌರತ್ವ ಸರ್ವೆ ನಡೆಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ಸಮಸ್ಯೆ ಬಗ್ಗೆ ಈಗಾಗಲೇ ಪಾಲಿಕೆಯ ಆರೋಗ್ಯಾಧಿಕಾರಿಗೆ ಪತ್ರ ಬರೆದಿದ್ದೆ. ಅವರಿನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೌರಿ ಗಣೇಶ ಹಬ್ಬ ಮುಗಿದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಮನೋರಂಜನ್‌ ಹೆಗ್ಡೆ ಭರವಸೆ ನೀಡಿದರು.

ದೇಗುಲ ನಿರ್ಮಾಣ ರಾಜಕೀಯ

ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣದ ಬಳಿ ಉದ್ಯಾನಕ್ಕೆ ಮೀಸಲಾದ ಜಾಗದಲ್ಲಿ ಭುವನೇಶ್ವರಿ ದೇಗುಲ ನಿರ್ಮಾಣಕ್ಕೆ ಕೆಲವರು ಯತ್ನಿಸುತ್ತಿದ್ದು, ಇದಕ್ಕೆ ಅವಕಾಶ ಕಲ್ಪಿಸಬಾರದು’ ಎಂದು ನಿವಾಸಿಗಳು ಒತ್ತಾಯಿಸಿದರು.

ವಿಷಯ ಪ್ರಸ್ತಾಪಿಸಿದ ಆನಂದ್ ಮತ್ತು ಶ್ರೀಕರ್, ‍‘ಮೆಟ್ರೊ ನಿಲ್ದಾಣ ಕಾಮಗಾರಿಗೆ ಉದ್ಯಾನದ ಜಾಗ ನೀಡಲಾಗಿತ್ತು. ಈಗ ದೇವರ ಮೂರ್ತಿಯೊಂದನ್ನು ಕೆಲವರು ತಂದಿಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಬೆದರಿಕೆ ಒಡ್ಡಿದ್ದಾರೆ’ ಎಂದರು.

‘ನಾವು ದೇವರು, ಧರ್ಮದ ವಿರೋಧಿಗಳಲ್ಲ. ಆದರೆ, ಈ ಜಾಗದಲ್ಲಿ ದೇಗುಲಕ್ಕೆ ಬದಲು ಹಸಿರು ಬೆಳೆಸುವುದು ಒಳ್ಳೆಯದು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಈ ವಿಷಯ ನನ್ನ ಗಮನದಲ್ಲಿದೆ. ಎರಡೂ ಕಡೆಯವರು ಒಂದೊಂದು ರೀತಿ ವಾದ ಮಂಡಿಸುತ್ತಿದ್ದಾರೆ.ಈ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ’ ಎಂದರು.

****

ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು 200ಕ್ಕೂ ಹೆಚ್ಚು ನಾಗರಿಕರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮುಂದೆ ತಮ್ಮ ಅಹವಾಲು ಹೇಳಿಕೊಂಡರು. ಸಮಸ್ಯೆ–ಪರಿಹಾರದ ಮಾರ್ಗೋಪಾಯದ ವಿವರಗಳು ಇಲ್ಲಿವೆ.

*ಗುರುಪ್ರಸಾದ್, ಹೊಂಬೇಗೌಡನಗರ

ವಿಲ್ಸನ್‌ ಗಾರ್ಡನ್ ಅಡ್ಡ ರಸ್ತೆಗಳಲ್ಲಿ ಟ್ರಾವೆಲ್ ಏಜೆನ್ಸಿಗಳ ಬಸ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ.

ಉದಯ್ ಗರುಡಾಚಾರ್, ಶಾಸಕ: ಎಸ್‌ಆರ್‌ಎಸ್, ಕೆಪಿಎಸ್‌ ಮತ್ತಿತರ ಸಂಸ್ಥೆಗಳ ಬಸ್‌ಗಳನ್ನು ಇಲ್ಲಿ ನಿಲ್ಲಿಸಲಾಗುತ್ತಿದೆ. ಈಗಾಗಲೇ ಶೇ 20ರಿಂದ ಶೇ 30ರಷ್ಟು ಕಡಿವಾಣ ಹಾಕಲಾಗಿದೆ. ಇನ್ನುಳಿದ ಬಸ್‌ಗಳನ್ನೂ ಇಲ್ಲಿ ನಿಲ್ಲಿಸದಂತೆ ಏಜೆನ್ಸಿಗಳಿಗೆ ಹಾಗೂ ಈ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೂ ಸೂಚಿಸುತ್ತೇನೆ. ಬಸ್‌ಗಳು ನಗರದ ಒಳಗೆ ಬಾರದಂತೆ ಪರ್ಯಾಯ ಯೋಜನೆ ರೂಪಿಸಬೇಕು.

*ರೂಪಾಲಿ, ವಿಲ್ಸನ್ ಗಾರ್ಡನ್

ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ಪಾದಚಾರಿ ಮಾರ್ಗಗಳ ಮೇಲೆ ಶೆಡ್‌ ಹಾಕಲಾಗಿದೆ.

ಶಾಸಕ: ವಿಲ್ಸನ್ ಗಾರ್ಡನ್ ಶಾಂತಿಯುತ ಪ್ರದೇಶವಾಗಿತ್ತು. ಇತ್ತೀಚೆಗೆ ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತಿವೆ. ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ನಿರ್ಮಿಸಿ, ಬಾಡಿಗೆಗೆ ಕೊಡುವವರ ಸಂಖ್ಯೆ ಅಧಿಕವಾಗಿರುವುದು ಸಮಸ್ಯೆಯಾಗಿದೆ. ವಾಣಿಜ್ಯೀಕರಣ ನಿಲ್ಲಿಸಬೇಕಿದೆ.

*ಆರ್. ಕಾರ್ತಿಕ್, ನ್ಯೂಸ್ ಪೇಪರ್ ಮಾರಾಟಗಾರ

ಸ್ಲಂ ನಿವಾಸಿಗಳು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹವರಿಗೆ ಸೂರನ್ನು ಒದಗಿಸಬೇಕು. ಒಂಟಿ ಮನೆ ಯೋಜನೆಯ ಲಾಭ ಪಡೆದುಕೊಳ್ಳುವುದು ಹೇಗೆ?

ಶಾಸಕ: ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 32 ಕೊಳಚೆ ಪ್ರದೇಶವಿದೆ.ಕೊಳಚೆ ನಿರ್ಮೂಲನಾ ಮಂಡಳಿಯಿಂದ ಒಂಟಿ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಒಂಟಿ ಮನೆ ಬದಲಿಗೆ ಅಪಾರ್ಟ್‌ಮೆಂಟ್‌ ನಿರ್ಮಿಸಿ, ಮನೆಗಳನ್ನು ಹಂಚಿಕೆ ಮಾಡಿ ಎಂದು ಮಂಡಳಿಗೆ ಹೇಳಿರುವೆ. ಒಂಟಿ ಮನೆ ನಿರ್ಮಿಸಿದರೆ ಆ ಪ್ರದೇಶ ಸ್ಲಂ ಆಗಿಯೇ ಉಳಿಯಲಿದೆ.

ಗಂಗಾಂಬಿಕೆ, ಮೇಯರ್: ಬಿಬಿಎಂಪಿಯಿಂದ ಸಹ ಒಂಟಿ ಮನೆ ನಿರ್ಮಿಸಿಕೊಡಲಾಗುತ್ತದೆ. ಒಂದು ವಾರ್ಡ್‌ಗೆ 15 ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಒಂದು ಮನೆಗೆ ₹5 ಲಕ್ಷ ಬಿಡುಗಡೆ ಮಾಡಲಾಗುವುದು.

ವಾಣಿ ವಿ. ರಾವ್, ವಿಶ್ವೇಶಪುರ ವಾರ್ಡ್‌ ಸದಸ್ಯೆ: ಸ್ಲಂ ನಿವಾಸಿಗಳಿಗೆ ನಮ್ಮ ವಾರ್ಡ್‌ನಲ್ಲಿ 40ಮನೆ ನಿರ್ಮಿಸಿಕೊಟ್ಟಿದ್ದೇವೆ. ಇದೀಗ 15 ಮನೆಗಳಿಗೆ ಅರ್ಜಿ ಸಲ್ಲಿಸಲಾಗಿದೆ.

*ಸುರೇಶ್ ಬಾಬು, ವಿಲ್ಸನ್‌ ಗಾರ್ಡನ್‌ 4ನೇ ಅಡ್ಡ ರಸ್ತೆ

ಮೋರಿಯಲ್ಲಿ ನೀರು ಸಮರ್ಪಕವಾಗಿ ಹೋಗುತ್ತಿಲ್ಲ. ಮಳೆ ಬಂದರೆ ನೀರು ಮನೆಗಳಿಗೆ ನುಗ್ಗುತ್ತಿದೆ. ದುರ್ವಾಸನೆ ಸಹಿಸಲಸಾಧ್ಯವಾಗಿದೆ.

ಮೇಯರ್: ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆ ಕಾಣುತ್ತಿದೆ. ಜನಸ್ಪಂದನದ ಬಳಿಕ ಅಧಿಕಾರಿಗಳು ಸಭೆ ನಡೆಸಬೇಕು. ನಾಗರಿಕರ ಸಮಸ್ಯೆಗಳಿಗೆ ‘ಸಹಾಯ’ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಆಯುಕ್ತರ ಆದೇಶದ ಅನುಸಾರ ವಲಯವಾರು ದೂರುಗಳನ್ನು ಪರಿಶೀಲಿಸಲಾಗುತ್ತಿದೆ.

*ಪೊನ್ನಪ್ಪ, ಜಯನಗರ 3ನೇ ಹಂತ

ಟ್ರಾಫಿಕ್ ಸಮಸ್ಯೆ ಹೆಚ್ಚಿದ್ದು, ಪಾದಚಾರಿಗಳು ರಸ್ತೆ ದಾಟಲು ಪರದಾಡಬೇಕಾಗಿದೆ. ವಾಹನ ಸವಾರರು ಸಹ ವೇಗವಾಗಿ ಬರುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ.

ಮೇಯರ್: ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವುದನ್ನು ಸಂಚಾರ ಪೊಲೀಸರ ಗಮನಕ್ಕೆ ತರಲಾಗುವುದು. ಸ್ಕೈವಾಕ್ ಅಳವಡಿಸುವ ಬಗ್ಗೆ ಪೊಲೀಸರು ಹಾಗೂ ಸ್ಥಳೀಯ ನಿವಾಸಿಗಳ ಜತೆಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು.

*ದಕ್ಷಿಣಾ ಮೂರ್ತಿ, ಕಬ್ಬನ್‌ಪೇಟೆ

ಕಸ ಸಂಗ್ರಹಿಸಲು ಪೌರಕಾರ್ಮಿಕರು ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ನಾಮಕಾವಸ್ತೆಗೆ ಮಾತ್ರ ಕಸ ಸಂಗ್ರಹ ನಡೆಯುತ್ತಿದೆ.

ಮೇಯರ್: ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ಕಸ ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕು.

*ಎಸ್‌.ವಿ. ಕೃಷ್ಣ, 145ನೇ ವಾರ್ಡ್‌

ಎಲ್ಲೆಂದರೆಲ್ಲಿ ಕಸ ಹಾಕಲಾಗುತ್ತಿದೆ. ನಾಯಿಗಳ ಕಾಟ ಹೆಚ್ಚಾಗಿದ್ದು, ಓಡಾಡುವುದು ಕಷ್ಟವಾಗಿದೆ. ಬೀಡಾಡಿ ದನಗಳ ಕಾಟ ಹೆಚ್ಚಾಗಿದೆ.

ಶಾಸಕ: ಸಣ್ಣ ಪ್ರದೇಶದಲ್ಲಿ ಹಿಂದಿನ ಕಾಲದಿಂದಲೂ ಹಸುಗಳನ್ನು ಸಾಕಿಕೊಂಡು ಬರಲಾಗುತ್ತಿದೆ. ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡಬೇಕು.

*ಮನೋಜ್, ವಿಲ್ಸನ್‌ಗಾರ್ಡನ್

ಹೂವಿನ ಅಂಗಡಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಹೊಸದಾಗಿಪರವಾನಗಿ ನೀಡಬಾರದು.

ಶಾಸಕ: ಈ ಬಗ್ಗೆನಾಗರಿಕರ ಅಸೋಸಿಯೇಷನ್ ಹಾಗೂ ಹೂವು ಮಾರಾಟಗಾರರ ಅಸೋಸಿಯೇಷನ್ ಜತೆಗೆ ಮಾತನಾಡಿರುವೆ. ಹೂವು ಮಾರಾಟಗಾರರಿಗೆ ಪ್ರತ್ಯೇಕ ಸ್ಥಳ ಗುರುತಿಸಿ, ಸ್ಥಳಾಂತರ ಮಾಡಲಾಗುವುದು.

*ವೆಂಕಟೇಶ್, 143ನೇ ವಾರ್ಡ್‌

ಕಾಲೇಜು ವಿದ್ಯಾರ್ಥಿಗಳು ವಿಜಯ ಬ್ಯಾಂಕ್‌ ಸುತ್ತಮುತ್ತ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದೀಗ ಜೈನ್‌ ಫೆಸ್ಟಿವಲ್‌ ನಡೆಯಲಿದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ.

ವಾಣಿ, ಪಾಲಿಕೆ ಸದಸ್ಯೆ: ಪಾರ್ಕಿಂಗ್ ಮಾಡಲು ಅವಕಾಶ ನೀಡದಂತೆ ಟ್ರಾಫಿಕ್ ಪೊಲೀಸರಿಗೂ ಪತ್ರ ಬರೆಯಲಾಗಿದೆ. ಅವಕಾಶ ನೀಡಿದರೂ ಒಂದು ಕಡೆ ನೀಡಿ ಎಂದು ತಿಳಿಸಿರುವೆ.

*ಮೋಹನ್‌ ಕುಮಾರ್, ಲಕ್ಕಸಂದ್ರ

ಬೀದಿ ಬದಿ ಹೊಟೇಲ್‌ಗಳು ಪಾದಚಾರಿ ಮಾರ್ಗದಲ್ಲಿ ಕುರ್ಚಿ ಹಾಕಿಕೊಳ್ಳುತ್ತಿವೆ. ಪುಂಡಪೋಕರಿಗಳು ಧೂಮಪಾನ ಮಾಡುತ್ತಾ ಕುಳಿತುಕೊಳ್ಳುತ್ತಾರೆ.

ಡಾ. ಮನೋರಂಜನ್ ಹೆಗ್ಡೆ, ದಕ್ಷಿಣ ವಲಯದ ಆರೋಗ್ಯಾಧಿಕಾರಿ: ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ವ್ಯಾಪಾರಿ ನಡೆಸಲು ಅವಕಾಶವಿಲ್ಲ. ಈ ಬಗ್ಗೆ ಕ್ರಮ ಜರುಗಿಸಲಾಗುವುದು.

*ಸೌಭಾಗ್ಯಮ್ಮ, ಹೊಂಬೇಗೌಡನಗರ

ಹಸುಗಳನ್ನು ಸಾಕುವವರು ಅವುಗಳನ್ನು ಬಿಡುವುದರಿಂದ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ಹಸುಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು.

ಶಾಸಕ: ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚಿಸಿ, ಅಗತ್ಯ ಕ್ರಮಕೈಗೊಳ್ಳಲಾಗುವುದು.

‘ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ’

‘ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ದೂರದೃಷ್ಟಿ ಹೊಂದಿರುವೆ. ಶಾಸಕನಾಗಿ 14 ತಿಂಗಳಾಗಿವೆ. ಯಾವುದೇ ಪ್ರಾಜೆಕ್ಟ್ ತೆಗೆದುಕೊಂಡರೂ ಪ್ರದೇಶವನ್ನು ಅಧ್ಯಯನ ಮಾಡಿ, ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ಶಾಸಕ ಉದಯ್ ಗರುಡಾಚಾರ್ ತಿಳಿಸಿದರು.

‘ಕಾಲೇಜಿಗೆ ಹೋಗುತ್ತಿರುವಾಗ ಬೆಂಗಳೂರಿನ ಜನಸಂಖ್ಯೆ 30 ಲಕ್ಷವಿತ್ತು. ಆದರೆ, ಇದೀಗ 1.30ಕೋಟಿಗೆ ತಲುಪಿದೆ. ಹಾಗಾಗಿ ಹೊಸದಾಗಿ ನಗರಕ್ಕೆ ಬರುವವರಿಗೆ ಹೊರವಲಯದಲ್ಲಿ ಅವಕಾಶ ನೀಡಬೇಕು’ ಎಂದರು.

‘ಹೂವು–ಹಣ್ಣು ದಿನನಿತ್ಯ ಬೇಕಾಗುತ್ತವೆ. ಆದರೆ, ಕ್ಷೇತ್ರದ ಜನರು ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಸರ್ಕಾರದ ಜತೆಗೆ ಈ ಬಗ್ಗೆ ಮಾತುಕತೆ ನಡೆಸಿ, ಮಾರಾಟಗಾರಿಗೆ ಪ್ರತ್ಯೇಕ ಸ್ಥಳ ಮಾಡಿಕೊಡಲಾಗುವುದು. ಅದೇ ರೀತಿ, ಕ್ಷೇತ್ರದಲ್ಲಿನ ಹಿಂದೂ ಹಾಗೂ ಮುಸ್ಲಿಂ ರುದ್ರಭೂಮಿಯನ್ನು ಆಧುನೀಕರಣ ಮಾಡಲಾಗುತ್ತದೆ. ಏಜೆನ್ಸಿ ಬಸ್‌ಗಳು ನಗರದ ಒಳಗಡೆ ಬರದಂತೆ ಸಾರಿಗೆ ಸಚಿವರ ಜತೆಗೆ ಸಭೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಸ್ತೆ, ಒಳಚರಂಡಿ, ಉದ್ಯಾನ, ಕ್ರೀಡಾಂಗಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಅನುದಾನ ತಂದಿರುವೆ’ ಎಂದರು.

ಮೋದಿ ಜೀ ಹಿಂದಿಯಲ್ಲಿ ಹೇಳುತ್ತಾರೆ...

ಹೊಂಬೇಗೌಡ ನಗರದ ನಿವಾಸಿ ಮನ್ಸೂರ್ ಹಿಂದಿಯಲ್ಲಿ ಮಾತು ಆರಂಭಿಸುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದವರು ಅಪಸ್ವರವೆತ್ತಿ, ಕನ್ನಡದಲ್ಲಿ ಮಾತನಾಡುವಂತೆ ಆಗ್ರಹಿಸಿದರು. ‘ಮೋದಿ ಜೀ ಹಿಂದಿಯಲ್ಲಿ ಮಾತನಾಡುತ್ತಾರೆ. ನಾವು ಕೂಡಾ ಹಿಂದಿಯಲ್ಲಿ ಮಾತನಾಡುತ್ತೇವೆ’ ಎಂದು ಉತ್ತರಿಸಿ, ‘ಶ್ಯಾಮಣ್ಣ ಗಾರ್ಡನ್‌ ಮೊದಲನೇ ಅಡ್ಡ ರಸ್ತೆ ಬಳಿ ಎಲ್ಲರೂ ವಾಹನ ನಿಲ್ಲಿಸುತ್ತಿದ್ದಾರೆ. ಮೂರು ಟೆಂಪೋ ಗ್ಯಾರೇಜ್‌ಗಳು ಸಹ ಕಾರ್ಯನಿರ್ವಹಿಸುತ್ತಿವೆ. ಮಳೆ ಬಂದರೆ ನೀರು ಸಹ ನಿಲ್ಲುತ್ತಿದೆ. ಇದರಿಂದಾಗಿ ಡೆಂಗಿ ಜ್ವರದ ಭೀತಿ ಉಂಟಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ₹100ನಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ, ಖಾಸಗಿ ಆಸ್ಪತ್ರೆಗಳು ₹1,000 ವಸೂಲಿ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರ ಒದಗಿಸಿ’ ಎಂದು ಮನವಿ ಮಾಡಿದರು. ‘ನಮ್ದುಕೀ ಅರ್ಥ ಆಯಿತು ಮನ್ಸೂರ್’ ಎಂದು ಹೇಳುವ ಮೂಲಕ ಶಾಸಕರು ಹಾಸ್ಯ ಚಟಾಕಿ ಹಾರಿಸಿದರು. ‘ಹೊಂಬೇಗೌಡ ನಗರ ತಳಮಟ್ಟದಲ್ಲಿ ಇರುವುದರಿಂದ ಹಲವು ಸಮಸ್ಯೆ ಇದೆ. ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಯೋಜನೆ ರೂಪಿಸಬೇಕು. ಸರ್ಕಾರದಿಂದ ಅನುದಾನ ತಂದಿದ್ದು, ನಿಮ್ಮ ಸಮಸ್ಯೆಗೆ ಸ್ಪಂದಿಸುವೆ’ ಎಂದು ಭರವಸೆ ನೀಡಿದರು.

‘ವಾರ್ಡ್‌ ಸಮಿತಿ ಸಭೆ ಸದುಪಯೋಗ ಪಡೆಯಿರಿ’

‘ಪ್ರತಿ ತಿಂಗಳ ಮೊದಲ ಶನಿವಾರ ವಾರ್ಡ್‌ನಲ್ಲಿ ಸಭೆ ನಡೆಸಲಾಗುತ್ತದೆ. ನಾಗರಿಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕು. ಇದರಲ್ಲಿ ಅಧಿಕಾರಿಗಳು ಭಾಗ
ವಹಿಸಲಿದ್ದು, ಸದು‍ಪಯೋಗಪಡಿಸಿಕೊಳ್ಳಬೇಕು’ ಎಂದು ಮೇಯರ್ ಗಂಗಾಂಬಿಕೆ ಮನವಿ ಮಾಡಿಕೊಂಡರು.

ಒಂದು ತಿಂಗಳಲ್ಲಿ ಶೌಚಾಲಯ ನಿರ್ಮಾಣ

ಪಾಲಿಕೆ ಸದಸ್ಯ ಆರ್‌.ವಿ. ಯುವರಾಜ್ ಮಾತನಾಡಿ, ‘ನಾವು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಶಾಸಕರು ಬೇರೆ ಪಕ್ಷದವರಾದರೂ ಸಹಕರಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಇದೀಗ ಸ್ಪಂದಿಸುತ್ತಿಲ್ಲ. ಸುಧಾಮನಗರ ವಾರ್ಡ್‌ನಲ್ಲಿ ಮಳೆ ನೀರು ಚರಂಡಿಯ ಮೇಲೆ ಅಕ್ರಮವಾಗಿ ಕಟ್ಟಡಗಳು ತಲೆಯೆತ್ತುತ್ತಿವೆ. ಇದರ ಮೇಲೆ ಕ್ರಮ ಕೈಗೊಳ್ಳಬೇಕು. ಶಂಭು ಪಾಳ್ಯದಲ್ಲಿ ಹೊಸ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ ನಿರ್ಮಾಣದ ಟೆಂಡರ್ ಕರೆಯಲಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ನಿರ್ಮಾಣವಾಗಲಿದೆ’ ಎಂದು ಭರವಸೆ ನೀಡಿದರು.

ಮನೆ ಮುಂದೆ ನಿಂತ ಕಾರು ಟೋವಿಂಗ್!

‘ಮನೆಯ ಬಳಿ ಶನಿಮಹಾತ್ಮನ ದೇವಾಲಯ, ಸಾಫ್ಟ್‌ವೇರ್ ಕಂಪನಿ ಹಾಗೂ ಶಾಲೆ ಇರುವುದರಿಂದ ಎಲ್ಲರೂ ನಮ್ಮ ಮನ ಮುಂದೆ ವಾಹನ ಪಾರ್ಕ್ ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ವಾಹನಗಳನ್ನೇ ನಿಲ್ಲಿಸಲು ಜಾಗವಿಲ್ಲದಂತಾಗಿದೆ. ಮನೆಯ ಮುಂದಿದ್ದ ನಮ್ಮ ವಾಹನವನ್ನೇ ಟೋವಿಂಗ್ ಮಾಡಿಕೊಂಡು ಹೋಗಲಾಗಿದೆ. ರಾಣಿ ಉದ್ಯಾನ ಸಹ ಗಬ್ಬು ವಾಸನೆಯಿಂದ ನಾರುತ್ತಿದೆ’ ಎಂದು ವಿಲ್ಸನ್‌ಗಾರ್ಡನ್ ನಿವಾಸಿ ರುಕ್ಮಿಣಿ ಅಳಲು ತೋಡಿಕೊಂಡರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಟ್ರಾಫಿಕ್ ಪೊಲೀಸ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.