ADVERTISEMENT

ಕನಸಿನ ನಗರ ಕಟ್ಟಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:51 IST
Last Updated 25 ಮಾರ್ಚ್ 2023, 19:51 IST
   

ಬೆಂಗಳೂರು: ‘ಸುಸ್ಥಿರ ಮತ್ತುವಿಶ್ವ ದರ್ಜೆಯ ನಗರವಾಗಿ ಬೆಂಗಳೂರನ್ನು ಪರಿವರ್ತಿಸುವ ಗುರಿ ಸೇರಿದಂತೆ, ಕನಸಿನ ನಗರ ಕಟ್ಟಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕದ ಕೆಲಸ ಮಾಡಲಿದೆ. ಆ ಮೂಲಕ ಅಪಾರ್ಟ್‌ಮೆಂಟ್‌ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಗಟ್ಟಿ ದನಿಯಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಹೋಟೆಲ್ ಶಾಂಗ್ರಿ- ಲಾದಲ್ಲಿ ಶನಿವಾರ ರೆಸಿಡೆಂಟ್‌ ವೆಲ್‌ಫೇರ್ ಅಸೋಸಿಯೇಶನ್‌ಗಳು ಮತ್ತು ಕೆಪಿಸಿಸಿ ಅಪಾರ್ಟ್‌ಮೆಂಟ್‌ ಘಟಕ ಆಯೋಜಿಸಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಮಾಲೀಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಬೆಂಗಳೂರಿಗೆ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು. ಮುಂಬರುವ ಚುನಾವಣೆಗೆ ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುವುದಾಗಿ ತಿಳಿಸಿದರು.

ADVERTISEMENT

‘ಉತ್ತಮ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ವೈಜ್ಞಾನಿಕ ಕಸ ವಿಲೇವಾರಿ, ಮೆಟ್ರೋ ಸೇರಿದಂತೆ ಇತರ ಸಾರಿಗೆ ವ್ಯವಸ್ಥೆಗಳಿಗೆ ಲಿಂಕ್ ವ್ಯವಸ್ಥೆ, ಅಪಾರ್ಟ್‌ಮೆಂಟ್‌ ಸಂಕೀರ್ಣಗಳ ಸುತ್ತ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಲು ಈ ಘಟಕವು ಸ್ಥಳೀಯ ಅಧಿಕಾರಿಗಳ ಜೊತೆ ಸೇರಿ ಕೆಲಸ ಮಾಡಲಿದೆ. ಅಪಾರ್ಟ್‌ಮೆಂಟ್ ಕುರಿತಂತೆ ಸರ್ಕಾರದ ಕಾನೂನುಗಳು, ನೀತಿ ನಿರೂಪಣೆ ವೇಳೆ ಸಲಹೆ ಸೂಚನೆಗಳನ್ನು ನೀಡುವ ಕೆಲಸವನ್ನೂ ಮಾಡಲಿದೆ. ಈ ಉದ್ದೇಶದಿಂದ ‘ಅಪಾರ್ಟ್‌ಮೆಂಟ್ ಮಿತ್ರ’ ಎಂಬ ಮುಕ್ತ ಸಂವಾದ ಕಾರ್ಯಕ್ರಮವನ್ನು ಆರಂಭಿಸಲಾಗಿದೆ’ ಎಂದರು.

ಶಾಸಕರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್, ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಮನ್ಸೂರ್ ಅಲಿಖಾನ್, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು, ಕೆಪಿಸಿಸಿ ಸಂಶೋಧನಾ ವಿಭಾಗದ ಸಹ
ಅಧ್ಯಕ್ಷ ರಘು ದೊಡ್ಡೇರಿ, ಮಾಜಿ ಮೇಯರ್ ಸಂಪತ್ ಕುಮಾರ್ ಮುಂತಾದವರು ಸಂವಾದದಲ್ಲಿ ಭಾಗವಹಿಸಿದರು.

ಕೆಪಿಸಿಸಿ ಅಪಾರ್ಟ್‌ಮೆಂಟ್ ಘಟಕ ಅಧ್ಯಕ್ಷರಾದ ಪ್ರೊ. ಎಂ.ವಿ. ರಾಜೀವ್ ಗೌಡ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.