ADVERTISEMENT

ಬಸ್ಸಿನಲ್ಲಿ ಯುವತಿಗೆ ಮುತ್ತು ಕೊಟ್ಟು ಕಿರುಕುಳ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:12 IST
Last Updated 16 ಸೆಪ್ಟೆಂಬರ್ 2021, 20:12 IST

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರಿಗೆ ಮುತ್ತು ಕೊಟ್ಟು ಅಪರಿಚಿತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 21 ವರ್ಷದ ಯುವತಿ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಗಣಪತಿ ಹಬ್ಬಕ್ಕಾಗಿ ಯುವತಿ ಇತ್ತೀಚೆಗೆ ಸ್ವಂತ ಊರಾದ ಬಳ್ಳಾರಿಗೆ ಹೋಗಿದ್ದರು. ಅಲ್ಲಿಂದ ವಾಪಸು ಬೆಂಗಳೂರಿಗೆ ಬರಲು ಸೆ. 12ರಂದು ರಾತ್ರಿ ಕೆಎಸ್‌ಆರ್‌ಟಿಸಿ (ಎಫ್‌ 834) ಬಸ್‌ ಹತ್ತಿದ್ದರು. ಅದೇ ಸಂದರ್ಭದಲ್ಲಿ ಅಪರಿಚಿತ ಯುವಕ, ಬಸ್ ಹತ್ತಿ ಯುವತಿಯನ್ನು ದುರುಗುಟ್ಟಿ ನೋಡಿದ್ದ. ಅದಕ್ಕೆ ತಲೆಕೆಡಿಸಿಕೊಳ್ಳದ ಯುವತಿ, ತಮ್ಮ ಆಸನಕ್ಕೆ ಹೋಗಿ
ಕುಳಿತಿದ್ದರು’

ADVERTISEMENT

‘ಮರುದಿನ ಬೆಳಿಗ್ಗೆ 5 ಗಂಟೆಗೆ ಬಸ್‌ ಬೆಂಗಳೂರು ಪ್ರವೇಶಿಸಿತ್ತು. ಯುವತಿ ನಿದ್ದೆಯಲ್ಲಿದ್ದರು. ದಾಸರಹಳ್ಳಿಯಿಂದ ಪೀಣ್ಯಕ್ಕೆ ಹೋಗುವ ಮಾರ್ಗಮಧ್ಯೆ ಯುವತಿಯ ಆಸನದ ಬಳಿ ಹೋಗಿದ್ದ ಆರೋಪಿ, ಕೆನ್ನೆಗೆ ಮುತ್ತು ಕೊಟ್ಟು ಲೈಂಗಿಕ ಕಿರುಕುಳ ನೀಡಿದ್ದ. ಎಚ್ಚರಗೊಂಡ ಯುವತಿ, ಆತನನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಪೀಣ್ಯ ನಿಲ್ದಾಣದಲ್ಲಿ ಆರೋಪಿ ಇಳಿದು ಹೋಗಿದ್ದಾನೆ’ ಎಂದೂ ಪೊಲೀಸ್ ಮೂಲಗಳು
ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.