ADVERTISEMENT

ನೆಲಮಂಗಲದಲ್ಲಿ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:15 IST
Last Updated 20 ಸೆಪ್ಟೆಂಬರ್ 2021, 21:15 IST

ನೆಲಮಂಗಲ: ಇಲ್ಲಿನ ಬಿಟಿ ಬಸ್ ನಿಲ್ದಾಣದ ಬಳಿಸ್ನೇಹಿತರ ನಡುವೆ ಜಗಳ ನಡೆದು ಯುವಕನನ್ನು ಕೊಲೆ ಮಾಡಲಾಗಿದೆ.‌

ವಿ.ಪಿ. ಮ್ಯಾಗ್ನಸ್‌ ಆಸ್ಪತ್ರೆ ಉದ್ಯೋಗಿ ರೇವಂತ್‌ ಅಲಿಯಾಸ್‌ ಸೃಷ್ಟಿ (22) ಕೊಲೆಯಾದ ಯುವಕ. ಇದೇ ತಾಲ್ಲೂಕಿನ ಜೋಗಿಪಾಳ್ಯದ ಚಿಕ್ಕಣ್ಣ ಮತ್ತು ಶಾಂತಮ್ಮ ದಂಪತಿ ಮಗ ರೇವಂತ್‌, ಪೋಷಕರೊಂದಿಗೆ ಪಟ್ಟಣದ ಸುಭಾಷ್‌ ನಗರದಲ್ಲಿ ವಾಸವಿದ್ದರು.

ತಾಲ್ಲೂಕಿನ ಎಣ್ಣೆಗೆರೆ ನಿವಾಸಿ ಅರುಣ್‌ (23), ಮಾಗಡಿ ತಾಲ್ಲೂಕಿನ ಕಂಬದಕಲ್ಲು ನಿವಾಸಿ ಧರಣೇಶ್‌(25) ಮತ್ತು ಇತರ ಮೂವರ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ಬಸ್‌ ನಿಲ್ದಾಣದ ಬಳಿಭಾನುವಾರ ಸಂಜೆ ಊಟ ಮಾಡುತ್ತಿದ್ದ ರೇವಂತ್‌ನೊಂದಿಗೆ ಕುಡಿತದ ನಶೆಯಲ್ಲಿದ್ದ ಅರುಣ್‌ ಮತ್ತು ಧರಣೇಶ್‌ ಜಗಳವಾಡಿಕೊಂಡಿದ್ದಾರೆ. ಕೋಪಗೊಂಡ ರೇವಂತ್‌ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ರಾತ್ರಿ ರೇವಂತ್‌ಗೆ ಕರೆ ಮಾಡಿದ ಅರುಣ್‌ ಮಾತನಾಡಬೇಕು ಎಂದು ಟಿ.ಬಿ.ಬಸ್‌ನಿಲ್ದಾಣದ ಬಳಿ ಕರೆಸಿಕೊಂಡು ಸಂಜೆಯ ಜಗಳದ ವಿಷಯವಾಗಿ ಕೆದಕಿದ್ದಾರೆ.

ರೇವಂತ್‌ ತನ್ನ ಸಹೋದರ ಭಾರ್ಗವ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ರೇವಂತ್‌ಗೆ ಹಲ್ಲೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಭಾರ್ಗವ್‌ ಮೇಲೂ ಹಲ್ಲೆ ಮಾಡಿದ್ದಾರೆ. ಈ ಮಧ್ಯೆ ಗುಂಪಿನಲ್ಲಿದ್ದ ಯಾರೋ ಚಾಕುವಿನಿಂದ ರೇವಂತ್‌ನ ಎದೆಯ ಭಾಗಕ್ಕೆ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದನ್ನು ಕಂಡು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.