ADVERTISEMENT

ಫ್ಲೆಕ್ಸ್, ಪೋಸ್ಟರ್‌ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 20:01 IST
Last Updated 25 ಮಾರ್ಚ್ 2023, 20:01 IST
ಹೆಸರುಘಟ್ಟ ಮುಖ್ಯರಸ್ತೆಯ ಶೆಟ್ಟಿಹಳ್ಳಿಯಲ್ಲಿ ಪೌರಕಾರ್ಮಿಕರು ಪೋಸ್ಟರ್‌ಗಳನ್ನು ತೆರವುಗೊಳಿಸಿದರು
ಹೆಸರುಘಟ್ಟ ಮುಖ್ಯರಸ್ತೆಯ ಶೆಟ್ಟಿಹಳ್ಳಿಯಲ್ಲಿ ಪೌರಕಾರ್ಮಿಕರು ಪೋಸ್ಟರ್‌ಗಳನ್ನು ತೆರವುಗೊಳಿಸಿದರು   

ಬೆಂಗಳೂರು: ನಗರದ ಅಂದ ಕೆಡಿಸುತ್ತಿರುವ ಫ್ಲೆಕ್ಸ್‌, ಪೋಸ್ಟರ್‌ಗಳನ್ನು ತೆರವುಗೊಳಿಸಿ, ಬಿಬಿಎಂಪಿ 2020 ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರತಿದಿನವೂ ಇದರ ಮಾಹಿತಿಯನ್ನು ಸಲ್ಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಎಲ್ಲ ವಲಯಗಳ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ವಿಧಾನಸಭೆ ಚುನಾವಣೆಯೂ ಹತ್ತಿರವಾಗುತ್ತಿದ್ದು, ಇದರ ಮೇಲೆ ಈ ಫ್ಲೆಕ್ಸ್‌ ಹಾಗೂ ಪೋಸ್ಟರ್‌ಗಳು ಪರಿಣಾಮ ಬೀರಬಾರದು.ಹೀಗಾಗಿ, ಎಲ್ಲ ರೀತಿಯ ಪತ್ರಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ತುಷಾರ್‌ ಗಿರಿನಾಥ್‌ ಸುತ್ತೋಲೆ ಹೊರಡಿಸಿದ್ದಾರೆ.

ಎಲ್ಲ ವಲಯ ಆಯುಕ್ತರು ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ, ಸಾರ್ವಜನಿಕ ಸ್ಥಳಗಳ ಅಂದಗೆಡಿಸಿರುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು. ವಿಶೇಷ ತಂಡವನ್ನು ರಚನೆ ಮಾಡಿ, ಹೋರ್ಡಿಂಗ್ಸ್‌, ಬ್ಯಾನರ್ಸ್‌ ಮತ್ತು ಬಂಟಿಂಗ್ಸ್‌ ಇತ್ಯಾದಿಗಳನ್ನು ತೆರವು ಮಾಡಿ, ಅದನ್ನು ಹಾಕಿದವರಿಗೆ ದಂಡ ವಿಧಿಸಬೇಕು. ಬೆಂಗಳೂರು ನಗರದ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ನಗರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ನ ಸಿಇಒ ತಮ್ಮ ವ್ಯಾಪ್ತಿಯಲ್ಲಿ ಕಾನೂನುಬದ್ಧವಾಗಿ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.

ADVERTISEMENT

ಬೆಂಗಳೂರು ಚುನಾವಣೆ ಜಿಲ್ಲೆಗಳಾದ ಕೇಂದ್ರ, ಉತ್ತರ, ದಕ್ಷಿಣ, ಬೆಂಗಳೂರು ನಗರ ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣೆ ಅಧಿಕಾರಿಗಳು, ಜಿಲ್ಲಾ ಚುನಾವಣೆ ಅಧಿಕಾರಿಗಳು ಪ್ರತಿ ದಿನವೂ ಸೂಚಿಸಿದ ಮಾದರಿಯಲ್ಲಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.