ಆನೇಕಲ್: ಹೊರವಲಯ ತಮ್ಮನಾಯಕನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ವೊಂದರಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 37ಮಂದಿಯನ್ನು ಭಾನುವಾರ ಮುಂಜಾನೆ ಬಂಧಿಸಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ ಸುಮಾರು 40ಕ್ಕೂ ಹೆಚ್ಚು ಯುವಕ–ಯುವತಿಯರು ಮೋಜು ಮಸ್ತಿಯಲ್ಲಿ ತೊಡಗಿದ್ದು ಕಂಡು ಬಂದಿದೆ. ದಾಳಿ ಮಾಡುತ್ತಿದ್ದಂತೆ ಯುವಕ ಯುವತಿಯರು ರೆಸಾರ್ಟ್ನಿಂದ ಕಾಡಿನತ್ತ ಓಡಿಹೋಗಿದ್ದಾರೆ. ಆದರೆ, ಪೊಲೀಸರು ಹಿಂಬಾಲಿಸಿ 11 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. 16 ದ್ವಿಚಕ್ರ ವಾಹನ, 6 ಕಾರು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬೆಂಬಿಡದೆ ಬೆಳಿಗ್ಗೆವರೆಗೂ ಕಾದು ಕುಳಿತು ಓಡಿ ಹೋಗಿದ್ದ ಆರೋಪಿಗಳು ರೆಸಾರ್ಟ್ನತ್ತ ಬೆಳಿಗ್ಗೆ ವಾಪಸ್ ಬಂದಾಗ ಇನ್ನುಳಿದ 26 ಮಂದಿಯನ್ನು ಬಂಧಿಸಿದ್ದಾರೆ.
ಮ್ಯೂಸಿಕ್ ಸಂಸ್ಥೆಯೊಂದು ರೇವ್ ಪಾರ್ಟಿ ಆಯೋಜಿಸಿದ್ದು ₹1000-1200 ಆನ್ಲೈನ್ ಮೂಲಕ ಟಿಕೆಟ್ ಮಾರಾಟ ಮಾಡಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಯುವಕರು, ಟೆಕ್ಕಿಗಳು ವಾರಾಂತ್ಯದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೈ ಮೇಲೆ ಸಂಸ್ಥೆ ಸೀಲ್ ಹಾಕಿ ಪ್ರವೇಶ ನೀಡಲಾಗಿತ್ತು.
ಆನೇಕಲ್ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಎಂ.ಮಲ್ಲೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೇವ್ ಪಾರ್ಟಿ ಅನಧಿಕೃತವಾಗಿ ನಡೆದಿದೆ. ಅಶಿಕ್ ಗೌಡ ಮತ್ತು ಪ್ರವಣ್ ಎಂಬುವವರು ಪಾರ್ಟಿ ಆಯೋಜನೆ ಮಾಡಿದ್ದರು ಎಂಬ ಮಾಹಿತಿ ಇದೆ. ಗ್ರೀನ್ ರೆಸಾರ್ಟ್ನ ಮ್ಯಾನೇಜರ್ ಕಿರಣ್, ಸುನೀಲ್ ಅವರೊಂದಿಗೆ ವ್ಯವಹರಿಸಿ ರೇವ್ ಪಾರ್ಟಿ ಆಯೋಜನೆ ಮಾಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಸರ್ಕಲ್ ಇನ್ಸ್ಪೆಕ್ಟರ್ ಎಚ್.ಆರ್.ಮಹಾನಂದ್, ಸಬ್ಇನ್ಸ್ಪೆಕ್ಟರ್ ಮಧುಸೂದನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.