ADVERTISEMENT

ರಾಜ್ಯಕ್ಕೆ ಬಂದ ಸಾಹಿವಾಲ್ ತಳಿ ದನಗಳು

500 ಹಸುಗಳ ತರಿಸಿದ ಬಮೂಲ್, ಶೇ 50ರಷ್ಟು ಸಹಾಯಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 20:23 IST
Last Updated 16 ಜನವರಿ 2020, 20:23 IST
ನಂದಿನಿ ದೇಸಿ ಹಾಲನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದರು. ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಇದ್ದರು –ಪ್ರಜಾವಾಣಿ ಚಿತ್ರ
ನಂದಿನಿ ದೇಸಿ ಹಾಲನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಿದರು. ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‌ಗ್ರಾಹಕರಿಗೆ ಆರೋಗ್ಯಪೂರ್ಣ ದೇಸಿ ಹಾಲು ಪೂರೈಸಲು ಕರ್ನಾಟಕ ಹಾಲು ಮಹಾಮಂಡಳಿ ಹರಿಯಾಣದ ನಾಟಿ ತಳಿಯ ಹಸುಗಳನ್ನು ತರಿಸಿ ರೈತರಿಗೆ ವಿತರಿಸುತ್ತಿದೆ. ಇದಕ್ಕೆ ಸರ್ಕಾರ ಶೇ 50ರಷ್ಟು ಸಹಾಯಧನವನ್ನೂ ನೀಡುತ್ತಿದೆ.

ಗಿರ್ ಮತ್ತು ಸಾಹಿವಾಲ್ ತಳಿಯ 500 ಹಸುಗಳನ್ನು ಬೆಂಗಳೂರು ಹಾಲು ಒಕ್ಕೂಟದಿಂದ ತರಿಸಲಾಗಿದ್ದು, ಕನಕಪುರ ಮತ್ತು ಮಾಗಡಿ ಭಾಗದ ಆಸಕ್ತ ರೈತರಿಗೆ ವಿತರಣೆ ಮಾಡಲಾಗಿದೆ. ಸರಾಸರಿ ₹80 ಸಾವಿರ ಮೌಲ್ಯದ ಈ ಹಸುಗಳನ್ನು ಖರೀದಿಸುವ ರೈತರಿಗೆ ₹40 ಸಾವಿರ ಸಹಾಯಧನ ಸಿಗಲಿದೆ.

‘ರಾಜ್ಯದ ನಾಟಿ ಹಸುಗಳು ಒಂದೂವರೆಯಿಂದ 2ಲೀಟರ್ ಹಾಲು ಕೊಡುತ್ತವೆ. ಸಾಹಿವಾಲ್ ಹಸುಗಳು 10ರಿಂದ 12 ಲೀಟರ್ ಹಾಲು ಕೊಡುತ್ತವೆ. ಎ–2 ಮಾದರಿಯ ಬಿಟಾ–ಕೇಸಿನ್ ಮತ್ತು ಇತರೆ ಪೋಷಕಾಂಶಗಳನ್ನು ಹೊಂದಿದೆ. ಮಕ್ಕಳಿಗೆ ಈ ಹಾಲು ಕುಡಿಸಿದರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಖಾಸಗಿಯವರು ಲೀಟರ್‌ಗೆ ₹120ರಿಂದ ₹130 ಪಡೆದು ಮಾರಾಟ ಮಾಡುತ್ತಿದ್ದಾರೆ. ನಾವು ಕಲಬೆರಕೆಗೆ ಅವಕಾಶ ಇಲ್ಲದಂತೆ ಪ್ರತ್ಯೇಕವಾಗಿ ಸಂಸ್ಕರಿಸಿ ಲೀಟರ್‌ಗೆ ₹80ಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ದುಬೈನಲ್ಲಿ ನಂದಿನಿ ಉತ್ಪನ್ನಕ್ಕೆ ಬೇಡಿಕೆ: ‘ನಂದಿನಿ ಉತ್ಪನ್ನಗಳಿಗೆ ದುಬೈನಲ್ಲಿ ಬೇಡಿಕೆ ಇದ್ದು, ರಫ್ತು ಮಾಡುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

‘ನಂದಿನಿ ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂಬ ಮಾಹಿತಿಯನ್ನು ದುಬೈನಲ್ಲಿರುವ ಭಾರತೀಯ ಮೂಲದ ಉದ್ಯಮಿಗಳು ತಿಳಿಸಿದ್ದಾರೆ. ಅವರ ಮೂಲಕವೇ ದುಬೈಗೆ ನಂದಿನಿ ಉತ್ಪನ್ನಗಳನ್ನು ಕಳುಹಿಸಲು ವ್ಯವಹರಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.