ಬೆಂಗಳೂರು:ಸಂಜಯನಗರದ ಬಸ್ ತಂಗುದಾಣದ ಬಳಿ ರಾಹುಲ್ ಭಂಡಾರಿ ಎಂಬಾತ ತಲೆಗೆ ಪಿಸ್ತೂಲ್ ಗುಂಡು ಬಿದ್ದು ಮೃತಪಟ್ಟಿದ್ದು, ಆತನ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.
‘ಆರ್.ಟಿ. ನಗರ ನಿವಾಸಿ ರಾಹುಲ್, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಸ್ಥಳದಲ್ಲಿ ಪಿಸ್ತೂಲ್ ಸಿಕ್ಕಿದೆ. ಆತನೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ’ ಎಂದು ಪೊಲೀಸ್ ಮೂಲಗಳು ಹೇಳಿದರು.
‘ರಾಹುಲ್ ತಂದೆ ಹೆಸರಿನಲ್ಲಿ ಪಿಸ್ತೂಲ್ ಪರವಾನಗಿ ಇದೆ. ಅದೇ ಪಿಸ್ತೂಲ್ನಿಂದಲೇ ರಾಹುಲ್ ಗುಂಡು ಹೊಡೆದುಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಬಗ್ಗೆ ತಂದೆಯನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
‘ಆರ್.ಟಿ.ನಗರದಲ್ಲಿ ಬೇಕರಿ ನಡೆಸುತ್ತಿದ್ದ ಭಗತ್ ಸಿಂಗ್ - ಬಾಬ್ನಾ ದಂಪತಿ ಮಗನಾದ ರಾಹುಲ್, ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದ. ಗುರುವಾರ ತಂದೆಯ ಬಳಿ ₹ 500 ಕೇಳಿದ್ದ. ತಂದೆ ಕೊಡದಿದ್ದಕ್ಕೆ ರಾಹುಲ್ ಮತ್ತಷ್ಟು ನೊಂದಿದ್ದನೆಂದು ಗೊತ್ತಾಗಿದೆ.’
‘ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ಬೆಳಿಗ್ಗೆ ಮನೆಯಿಂದ ಹೊರಟಿದ್ದ ರಾಹುಲ್, ಜೊತೆಯಲ್ಲಿ ಪಿಸ್ತೂಲ್ ಸಹ ತೆಗೆದುಕೊಂಡು ಬಂದಿದ್ದ. ಅದೇ ಪಿಸ್ತೂಲ್ನಿಂದಲೇ ತಲೆಯ ಎಡಭಾಗಕ್ಕೆ ಗುಂಡು ಹೊಡೆದುಕೊಂಡಿದ್ದಾನೆ. ಮೃತದೇಹ ನೋಡಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.