ADVERTISEMENT

ಮಹಿಳಾ ಪ್ರಾತಿನಿಧ್ಯ ಕಾನೂನಾಗಲಿ: ಮೀನಾಕ್ಷಿ ಬಾಳಿ ಆಗ್ರಹ

ಸಂವಾದದಲ್ಲಿ ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 20:00 IST
Last Updated 25 ಮಾರ್ಚ್ 2023, 20:00 IST
ಕಾರ್ಯಕ್ರಮದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಇದ್ದರು –       ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಘಟಕದ ಅಧ್ಯಕ್ಷೆ ಮೀನಾಕ್ಷಿ ಬಾಳಿ ಇದ್ದರು –       ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜಕೀಯ ಪಕ್ಷಗಳು ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವುದಕ್ಕಾಗಿ ಮಹಿಳಾ ಮೀಸಲಾತಿ ನೀಡಿಕೆಯು ಕಾನೂನಾಗಿ ರೂಪುಗೊಳ್ಳಬೇಕು’ ಎಂದು ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಆಗ್ರಹಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ ಆಶ್ರಯದಲ್ಲಿ ಶನಿವಾರ ಇಲ್ಲಿ ನಡೆದ, ‘16ನೇ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರ– ಪ್ರಾತಿನಿಧ್ಯ’ ಕುರಿತಂತೆ ನಡೆದ ಮುಕ್ತ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಈಗಾಗಲೇ ಹಲವು ರಾಜಕೀಯ ಪಕ್ಷಗಳು ಮತದಾರರಿಗೆ ಅದರಲ್ಲೂ ಪ್ರಮುಖವಾಗಿ ಮಹಿಳೆಯರಿಗೆ ಸೀರೆ, ಕುಕ್ಕರ್‌, ಗಡಿಯಾರ, ನಿವೇಶನ ನೀಡಿಕೆಯಂತಹ ಆಮಿಷವೊಡ್ಡುವ ಮೂಲಕ ಅವರ ಮತ ಖರೀದಿಗೆ ತೊಡಗಿವೆ. ಮಹಿಳೆಯರು ಈ ಬಗ್ಗೆ ಎಚ್ಚರ ವಹಿಸಿ ಮಹಿಳೆಯರ ಮತಗಳು ಮಾರಾಟಕ್ಕಿಲ್ಲ ಎಂಬುದನ್ನು ಮನದಟ್ಟು ಮಾಡಿಸಬೇಕು’ ಎಂದರು.

ADVERTISEMENT

‘ರಾಜಕಾರಣಿಗಳು ಶೇ 40ರ ಕಮಿಷನ್‌ ಹಣದಲ್ಲಿಯೇ ಇಂತಹ ಆಮಿಷಗಳನ್ನು ಮತದಾರರಿಗೆ ಒಡ್ಡುತ್ತಿದ್ದಾರೆ. ಇದು ಮತದಾರರ ಬಡತನಕ್ಕೆ ಮಾಡುತ್ತಿರುವ ಅಪಮಾನ. ಅವರ ಸ್ವಾಭಿಮಾನವನ್ನು ಧ್ವಂಸ ಮಾಡುತ್ತಿರುವ ಕೆಲಸ. ಶರಣರು, ದಾರ್ಶನಿಕರು ಹುಟ್ಟಿ ಬಾಳಿದ ಈ ನಾಡಿನಲ್ಲಿ ಮತದಾರರು ಇಂತಹ ಆಮಿಷವೊಡ್ಡುವ ರಾಜಕಾರಣಿಗಳಿಗೆ ನಡುಕ ಹುಟ್ಟಿಸುವಂತಹ ಪ್ರಜ್ಞೆ ಮೆರೆಯಬೇಕಿದೆ’ ಎಂದರು.

ನಿರ್ಣಯಗಳ ಕುರಿತಂತೆ ಮಾತನಾಡಿದ ಸಿಪಿಐ (ಎಂ) ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮಿ, ‘ಇತ್ತೀಚಿಗೆ ನಾನು ಗಂಗಾವತಿಯ ಬೀದಿಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಒಂದೆಡೆ ಸೇರಿ ಗುಂಪುಗೂಡಿಕೊಂಡು ಅಭ್ಯರ್ಥಿ ಪರವಾಗಿ ಜೈಕಾರ ಹಾಕುತ್ತಾ ಹಳ್ಳಿ, ಪಟ್ಟಣ, ನಗರಗಳ ಬೀದಿಗಳಲ್ಲಿ ಸುತ್ತುವುದನ್ನು ನೋಡಿದೆ. ಈ ಜನರಿಗೆಲ್ಲಾ ದಿನವೊಂದಕ್ಕೆ ₹ 300ರಿಂದ ₹ 2 ಸಾವಿರದವರೆಗೂ ಹಣ ನೀಡಿ ಕರೆದುಕೊಂಡು ಬರಲಾಗುತ್ತಿದೆ ಎಂದು ಗೊತ್ತಾಯಿತು. ಜನಾರ್ದನ ರೆಡ್ಡಿ ಅವರ ಪರವಾಗಿ ಘೋಷಣೆ ಕೂಗುತ್ತಿದ್ದ ಈ ಹೊಸ ಟ್ರೆಂಡ್‌ ಆಘಾತಕಾರಿಯಾದದ್ದು’ ಎಂದರು.

ಸಂವಾದದಲ್ಲಿ ಜೆಡಿಎಸ್‌ನ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್, ಬಿಎಸ್‌ಪಿಯ ಅವನಿಕಾ, ಸಿಪಿಐಎಂಎಲ್‌ನ ಗಾಂಧಿ ಮತಿ, ಮಹಿಳಾ ಸಂಘಟನೆಯ ಕಮಲಾ, ಶಗೂನ್‌, ಜನವಾದಿ ಸಂಘಟನೆಯ ಕೆ.ಎಸ್.ಲಕ್ಷ್ಮಿ, ಪತ್ರಕರ್ತೆ ಸಿ.ಜಿ.ಮಂಜುಳಾ, ಸಿಐಟಿಯು ಸಂಘಟನೆಯ ಮಾಲಿನಿ ಮಸ್ತಿ, ವಕೀಲೆ ಮಹಿಮಾ ಅವರು ಸಾರ್ವಜನಿಕ ಕ್ಷೇತ್ರ, ದುಡಿಯವ ಸ್ಥಳ, ಕುಟುಂಬ ಸೇರಿದಂತೆ ಎಲ್ಲೆಡೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗಳ ಬಗ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.