ಬಸವಕಲ್ಯಾಣ: ‘ಬಯಲ ಬೆಡಗು ಕಾದಂಬರಿಯಲ್ಲಿ 12 ನೇ ಶತಮಾನದ ಪ್ರಭುದೇವರ ಚರಿತ್ರೆಯನ್ನು ಅತ್ಯಂತ ಉತ್ತಮ ರೀತಿಯಲ್ಲಿ, ಪ್ರಭಾವಪೂರ್ಣವಾಗಿ ಕಟ್ಟಿಕೊಡಲಾಗಿದೆ’ ಎಂದು ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಹೇಳಿದ್ದಾರೆ.
ನಗರದ ಅನುಭವ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಲಿಂಗಾಯತ ನೌಕರರ ಸಂಘದ ಸಹಯೋಗದಲ್ಲಿ ಈಚೆಗೆ ನಡೆದ ಮಹಾಂತೇಶ ಕುಂಬಾರ ಬರೆದ ‘ಬಯಲ ಬೆಡಗು’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಹಾಂತೇಶ ಅವರು ಕಾದಂಬರಿ ಬರವಣಿಗೆಯಲ್ಲಿ ಪಳಗಿದವರಾಗಿದ್ದಾರೆ. ಈಗಾಗಲೇ ನಾಲ್ಕು ಕಾದಂಬರಿ ಬರೆದಿದ್ದು, ಇದರಲ್ಲಿ ಅತ್ಯಂತ ವಿಮರ್ಶಾತ್ಮಕವಾಗಿ ಐತಿಹಾಸಿಕ ವಿಷಯವನ್ನು ಆಧ್ಯಾತ್ಮಿಕ ವಿಷಯವನ್ನಾಗಿ ಪರಿವರ್ತಿಸಿದ್ದಾರೆ. ಶರಣರ ಸಮಕಾಲೀನ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ’ ಎಂದು ಅವರು ಹೇಳಿದರು.
ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಮಾತನಾಡಿ,‘ಈ ಕಾದಂಬರಿಯನ್ನು 17 ಭಾಗಗಳನ್ನಾಗಿ ಮಾಡಿ ಪ್ರಭುದೇವರ ಚರಿತ್ರೆ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ’ ಎಂದರು.
ತೊನಸನಳ್ಳಿ ಅಲ್ಲಮಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ ಮಾತನಾಡಿ,‘ಲಿಂಗದ ಅರಿವು ಬಂದರೆ ಮಾತ್ರ ಇಂಥ ಕೃತಿ ರಚನೆ ಸಾಧ್ಯ’ ಎಂದರು. ಭಾಲ್ಕಿ ಗುರುಬಸವ ಪಟ್ಟದ್ದೇವರು, ಮಹಾಂತೇಶ ಕುಂಬಾರ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಗಡ್ಡೆ ಮಾತನಾಡಿದರು.
ಅಂತರರಾಷ್ಟ್ರೀಯ ಬಸವ ಪುರಸ್ಕಾರ ಪಡೆದ ಡಾ.ಬಸವಲಿಂಗ ಪಟ್ಟದ್ದೇವರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿವಲಿಂಗ ಹೆಡೆ, ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಸ್ವಾಮೀಜಿ. ಮುಖಂಡ ಶಿವರಾಜ ನರಶೆಟ್ಟಿ, ಆರ್.ಜಿ.ಶೆಟಗಾರ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಯೋಗರಾಜ, ಶಂಕರಣ್ಣ ಕೊಳಕೂರ, ಕಾಶಿನಾಥ ಹೊಳಕಡೆ, ಕೆ.ಕಾಶಪ್ಪ, ಚನ್ನಬಸಪ್ಪ ಪತಂಗೆ, ವಕೀಲ ವಿವೇಕ ನಾಗರಾಳೆ, ಝರೆಪ್ಪ ಕುಂಬಾರ, ಅನಿಲ ಶಾಸ್ತ್ರೀ ಮೊದಲಾದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.