ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರದಿಂದ (ಜುಲೈ 25) ಎಲ್ಲ ಸೇವೆಗಳು ಆರಂಭವಾಗಲಿವೆ.
ದೇವಾಲಯಗಳು ಹಾಗೂ ಇತರ ಧಾರ್ಮಿಕ ಕೇಂದ್ರಗಳಲ್ಲಿ ನಡೆಸುವ ಸೇವೆಗೆ ಸಂಬಂಧಿಸಿದಂತೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಕೆಗೊಳಿಸಿಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು ಹೊರಡಿಸಿರುವ ಆದೇಶದ ಅನ್ವಯ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿವಿಧ ಸೇವೆಗಳನ್ನು ಆರಂಭಿಸುವ ತೀರ್ಮಾನ ಕೈಗೊಂಡಿದೆ.
ದೇವಾಲಯದ ಒಳಗಡೆ ಪೂಜೆ, ಹಣ್ಣುಕಾಯಿ ಪೂಜೆ, ಮಹಾಮಂಗಳಾರತಿ, ರುದ್ರಾಭಿಷೇಕ (ಒಳಗೆ ಕುಳಿತುಕೊಳ್ಳಲು ಅವಕಾಶವಿಲ್ಲ), ಎಲ್ಲ ಸೇವೆಗಳು, ಆರತಿ, ವಿಭೂತಿ ನೀಡುವಿಕೆ, ಮಹಾಮಂಗಳಾರತಿ... ಎಲ್ಲವೂ ಸಂಪ್ರದಾಯದಂತೆ ನಡೆಯಲಿವೆ. ಎಲ್ಲ ಸೇವಾ ಟಿಕೆಟ್ಗಳನ್ನು ಪ್ರಾಧಿಕಾರ ವಿತರಿಸಲಿದೆ.
100ಕ್ಕೆ ಸೀಮಿತ: ಜಾತ್ರೆ/ಮೆರವಣಿಗೆ ಬಿಟ್ಟು, ಎಲ್ಲ ಉತ್ಸವಗಳು ನಡೆಯಲಿವೆ. ಭಕ್ತಾದಿಗಳು ಗುಂಪು ಗುಂಪಾಗಿ ಸೇರುವುದನ್ನು ತಡೆಗಟ್ಟುವ ಸಲುವಾಗಿ, ಚಿನ್ನದ ತೇರು ಟಿಕೇಟು ಪ್ರತಿದಿನ ಸದ್ಯ 100ಕ್ಕೆ ಮಾತ್ರ ಸೀಮಿತಗೊಳಿಸಿ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಅವಶ್ಯವಿದ್ದಲ್ಲಿ ಸಡಿಲಗೊಳಿಸಲಾಗುವುದು. ಮೊದಲು ಟಿಕೆಟ್ ಖರೀದಿಸಿದವರಿಗೆ ಆದ್ಯತೆ. ಆನ್ಲೈನ್ ಬುಕಿಂಗ್ ಕೂಡ ಮಾಡಬಹುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಲಿವಾಹನ, ರುದ್ರಾಕ್ಷಿ ವಾಹನ, ಬಸವ ವಾಹನ ಸೇರಿದಂತೆ ಇತರ ಸೇವೆಗಳು ಸಂಪ್ರದಾಯದಂತೆ ನಡೆಯಲಿವೆ. ದಾಸೋಹ ವ್ಯವಸ್ಥೆ ಶುಕ್ರವಾರದಿಂದ ಆರಂಭವಾಗಿದ್ದು, ಸದ್ಯ ತಿಂಡಿ ಸೇವೆ ಮಾತ್ರ ಇರಲಿದೆ.
ಸದ್ಯ ಕಾಟೇಜುಗಳನ್ನು ಹಾಗೂ ಸಂಕಮ್ಮ ನಿಲಯ, ಕಾರಯ್ಯ ನಿಲಯ ಮತ್ತು ಬಿಲ್ಲಯ್ಯ ನಿಲಯಗಳನ್ನು ತೆರೆಯುವುದಿಲ್ಲ. ಎಲ್ಲರಿಗೂ ಹೊಸ ಡಾರ್ಮಿಟರಿಯಲ್ಲಿ ತಂಗಲು ಅವಕಾಶ ನೀಡಲಾಗುವುದು. ಅಗತ್ಯ ನೋಡಿಕೊಂಡು ಇತರೆ ವಸತಿ ನಿಲಯಗಳನ್ನು ಹಂತಹಂತವಾಗಿ ತೆರೆಯಲಾಗುವುದು ಎಂದು ಜಯವಿಭವ ಸ್ವಾಮಿ ಅವರು ಹೇಳಿದ್ದಾರೆ.
ಮುಡಿಸೇವೆ,ಲಾಡುಪ್ರಸಾದದಸೇವೆಯೂಆರಂಭವಾಗಲಿದ್ದು,ಲಾಡುತಯಾರಿಕೆಶನಿವಾರದಿಂದಲೇಆರಂಭವಾಗಿದೆ.ದೇವಾಲಯದ ಬಸ್ ಸೇವೆ ಆಗಸ್ಟ್ 1ರಿಂದ ಆರಂಭವಾಗಲಿದೆ.
ಸಂದೇಹಗಳಿದ್ದಲ್ಲಿ ನಮ್ಮ ಸಹಾಯವಾಣಿ ಸಂಖ್ಯೆ 1860 425 4350 ಎಂದು ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.