ADVERTISEMENT

ಚಾಮರಾಜನಗರ: ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಆಗಬೇಕಾಗಿದ್ದೇನು?

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 11:27 IST
Last Updated 24 ಸೆಪ್ಟೆಂಬರ್ 2021, 11:27 IST
ಚಾಮರಾಜನಗರ ತಾಲ್ಲೂಕಿನ ಕೋಡಿಮೋಳೆ ಕೆರೆಗೆ ಇತ್ತೀಚೆಗೆ ಪ್ರಾಯೋಗಿಕವಾಗಿ ಹರಿದ ನೀರು
ಚಾಮರಾಜನಗರ ತಾಲ್ಲೂಕಿನ ಕೋಡಿಮೋಳೆ ಕೆರೆಗೆ ಇತ್ತೀಚೆಗೆ ಪ್ರಾಯೋಗಿಕವಾಗಿ ಹರಿದ ನೀರು   

ಚಾಮರಾಜನಗರ: ಒಂದು ಕಾಲದಲ್ಲಿ ಇಡೀ ಗಡಿ ಜಿಲ್ಲೆಯ ನೀರಿನ ಅಗತ್ಯವನ್ನು ಪೂರೈಸಿದ್ದ ಕೆರೆ ಕಟ್ಟೆಗಳಲ್ಲಿ ಬಹುತೇಕ ಜಲಮೂಲಗಳು ಈಗ ಅವಸಾನದತ್ತ ಸಾಗಿದೆ.

ಕೆರೆಗಳ ಸಂರಕ್ಷಣೆಗೆ ಮುಂದಾಗಿರುವ ಜಿಲ್ಲಾಡಳಿತ, ಅವುಗಳ ಒತ್ತುವರಿ ಗುರುತಿಸಿ, ತೆರವುಗೊಳಿಸಿ ಆಯಾ ಇಲಾಖೆಗಳಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದೆ.

ಬಹುತೇಕ ಕೆರೆಗಳು ಬತ್ತಿ ಹೋಗಿದ್ದು, ಹೂಳಿನ ಸಮಸ್ಯೆಯಿಂದ ನಲುಗಿವೆ. ಇದರ ಮಧ್ಯದಲ್ಲೇ ಕೆರೆ ತುಂಬಿಸುವ ಮಹತ್ವಕಾಂಕ್ಷೆಯ ಯೋಜನೆಗಳಿಂದ 40 ಹೆಚ್ಚು ಕೆರೆಗಳಿಗೆ ಜೀವ ಕಳೆ ಬಂದಿದೆ. ರೈತರಿಗೂ ಇದರಿಂದ ಸಾಕಷ್ಟು ಅನುಕೂಲವಾಗಿದೆ. ಇನ್ನೂ 25 ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯಬೇಕಿದೆ. ಇದರ ನಡುವೆಯೆ ಜಿಲ್ಲೆಯ ಎಲ್ಲ ಕೆರೆಗಳ ಅಭಿವೃದ್ಧಿ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ADVERTISEMENT

ಅನುದಾನ ಇಲ್ಲ: ಕೆರೆಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಅನುದಾನ ಇಲ್ಲ ಎಂದು ಹೇಳುತ್ತಾರೆ ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು. ಹಾಗಾಗಿ, ರಾಜ್ಯ ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ ಅನುದಾನ ನೀಡಬೇಕು ಎಂಬುದು ರೈತರ ಒತ್ತಾಯ.

ರೈತರ ಅಭಿಪ್ರಾಯವೇನು?

ಕೆರೆಗಳಿಗೆ ನೀರು ತುಂಬಿಸಲಿ…

ಜಿಲ್ಲೆಯಲ್ಲಿರುವ ಎಲ್ಲ ದೊಡ್ಡ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಯೋಜನೆ ರೂಪಿಸಬೇಕು ಈಗಾಗಲೇ ಜಿಲ್ಲೆಯ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಯುತ್ತಿದೆ. ಇದೇ ಯೋಜನೆಗಳನ್ನು ವಿಸ್ತರಿಸಿದರೆ ಸಾಕು. ಕೆರೆಗಳಿಗೆ ನೀರು ಹರಿಯಲು ಆರಂಭಿಸಿದರೆ, ರೈತರೇ ಕೆರೆಗಳನ್ನು ಸಂರಕ್ಷಿಸಿ ಕೊಳ್ಳುತ್ತಾರೆ. ಕೆರೆಗಳ ಏರಿ ಹಾಗೂ ಕೋಡಿ ಬೀಳುವ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರೆ ಸಾಕು.

– ಕಾಳನಹುಂಡಿ ಗುರುಸ್ವಾಮಿ, ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಯೋಜನೆಯ ಹೋರಾಟ ಸಮಿತಿ ಅಧ್ಯಕ್ಷ

ಹೂಳು, ಕಳೆ ತೆಗೆಸಿ

ಕೊಳ್ಳೇಗಾಲ ತಾಲ್ಲೂಕಿನಾದ್ಯಂತ ಹೆಚ್ಚು ರೈತರು ಕೃಷಿಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ತಾಲ್ಲೂಕಿನಲ್ಲಿ ಯಾವ ಕೆರೆಯೂ ಅಭಿವೃದ್ಧಿ ಆಗಿಲ್ಲ. ಇದೇ ಕಾರಣದಿಂದ ರೈತರಿಗೆ ಕೆಲ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೂಳು, ಕಳೆ, ಒತ್ತುವರಿ ಸಮಸ್ಯೆಗಳು ಬಾಧಿಸುತ್ತಿವೆ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆರೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಮುಂದಾಗಬೇಕು.

– ನಾಗರಾಜು, ಹೊಸ ಅಣಗಳ್ಳಿ, ಕೊಳ್ಳೇಗಾಲ ತಾಲ್ಲೂಕು

ಕೆರೆ ತುಂಬಿಸುವ ಯೋಜನೆ ವಿಸ್ತರಿಸಿ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೃಷಿಗೆ ನದಿ ಮೂಲಗಳಿಲ್ಲ. ರೈತರು ಅಂತರ್ಜಲ ಮತ್ತು ಮಳೆಯನ್ನೇ ಅವಲಂಬಿಸಿದ್ದಾರೆ. ಸಕಾಲದಲ್ಲಿ ಮಳೆಯಾಗದೆ ಕೆರೆ ಕಟ್ಟೆಗಳು ತುಂಬದೆ ಹೋದರೆ ಅಂತರ್ಜಲವೂ ಕಮ್ಮಿಯಾಗುತ್ತದೆ. ಈಗ ಕೆರೆ ತುಂಬಿಸುವ ಯೋಜನೆ ಅಡಿಯಲ್ಲಿ ಭರ್ತಿಯಾದ ಕೆರೆಗಳ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಿದೆ. ಆದ್ದರಿಂದ ತಾಲ್ಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು.

– ದಿಲೀಪ್, ಹಂಗಳ, ಗುಂಡ್ಲುಪೇಟೆ ತಾಲ್ಲೂಕು

ಕೆರೆ‌ ಮರುಪೂರಣಗೊಳಿಸಿ

ಯಳಂದೂರು ತಾಲೂಕಿನ 28 ಕೆರೆಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ತಾಲ್ಲೂಕು ಮಟ್ಟದಲ್ಲಿ ಯೋಜನೆಗಳನ್ನು ರೂಪಿಸಬೇಕು. ವರ್ಷಪೂರ್ತಿ ಜಲಾಶಯಗಳಲ್ಲಿ ನೀರು ತುಂಬಿದರೆ ಸಹಜವಾಗಿಯೇ ಕೃಷಿಕರ ಕೊಳವೆ ಬಾವಿಗಳು ಜಲಮರುಪೂರಣ ಗೊಂಡು ಸದಾ ಬೇಸಾಯಕ್ಕೆ ಉಪಯುಕ್ತವಾಗಲಿದೆ. ಈ ಬಗ್ಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಜನಪ್ರತಿ ನಿಧಿಗಳು ಕೆರೆ ಮರುಪೂರಣಗೊಳಿಸುವ ಕೆಲಸಕ್ಕೆ ಮುಂದಾಗಲಿ.

– ದಕ್ಷಿಣಾಮೂರ್ತಿ, ಅಗರ, ಯಳಂದೂರು ತಾಲ್ಲೂಕು

ಗಿಡ-ಮರ ಬೆಳೆಸಲಿ

ಕೃಷಿಕರು ವಿದ್ಯುತ್ ಸಮಸ್ಯೆ ಮತ್ತು ನೀರಿನ ಕೊರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಹೆಚ್ಚಿನ ಲಾಭವಾಗಲಿದೆ. ಕೆರೆಯ ಸುತ್ತ-ಮುತ್ತ ಗಿಡ ಮರಗಳನ್ನು ಬೆಳೆಸುವುದು, ಏರಿಗಳನ್ನು ಸದೃಢಗೊಳಿಸುವುದು.. ಇವೇ ಮೊದಲಾದ ಕೆಲಸಗಳನ್ನು ಆದ್ಯತೆಯಾಗಿ ಪರಿಗಣಿಸಬೇಕಿದೆ.

–ಡಿ.ನಂಜುಂಡಸ್ವಾಮಿ ಕಿನಕಳ್ಳಿ, ಯಳಂದೂರು ತಾಲ್ಲೂಕು

ಬೇಗ ನೀರು ಹರಿಸಲಿ

ಹನೂರು ತಾಲ್ಲೂಕಿನ ಹುಬ್ಬೆಹುಣಸೆ ಕೆರೆಯಲ್ಲಿ ನೀರು ಬತ್ತಿ ಹೋಗಿರುವುದರಿಂದ ಉದ್ದನೂರು, ಬೆಳತ್ತೂರು ಹಾಗೂ ಮಹಾಲಿಂಗನಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿ 700ಕ್ಕೂ ಹೆಚ್ಚು ಕೊಳವೆಬಾವಿಗಳಲ್ಲಿ ನೀರು ನಿಂತು ಹೋಗಿದೆ. ನೀರಿನ ಅಭಾವದಿಂದ ನೂರಾರು ಎಕರೆ ಜಮೀನು ಪಾಳು ಬಿದ್ದಿವೆ. ಕೂಡಲೇ ಕೆರೆಗೆ ನೀರು ತುಂಬಿಸುವಂತೆ ಮನವಿ ಸಲ್ಲಿಸಿದ್ದೆವು. ಇದುವರೆಗೆ ಯೋಜನೆ ಆರಂಭವಾಗಿಲ್ಲ. ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕೆಲಸವಾಗಬೇಕು.

- ಗಿರೀಶ್, ಉದ್ದನೂರು, ಹನೂರು ತಾಲ್ಲೂಕು

ಶಾಸಕರು ಏನಂತಾರೆ?

ತುರ್ತು ಅಗತ್ಯಬಿದ್ದರೆ ಹಣ ಕೊಡುವೆ

ತಾಲ್ಲೂಕಿನಲ್ಲಿ ಅಂದಾಜು 20 ಕೆರೆಗಳಿಗೆ ಈಗಾಗಲೇ ನೀರು ಹರಿಸಲಾಗುತ್ತಿದೆ. ತುರ್ತಾಗಿ ಕೆರೆ ಅಭಿವೃದ್ಧಿ ಆಗಬೇಕು ಎಂದಿದ್ದರೆ, ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಕೊಡುತ್ತೇನೆ. ಸದ್ಯಕ್ಕೆ ಸಮುದಾಯ ಭವನಗಳು, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡುತ್ತಿದ್ದೇನೆ. ಸುತ್ತೂರು ಏತ ನೀರಾವರಿ ಯೋಜನೆ ಅಡಿಯಲ್ಲಿ ಕ್ಷೇತ್ರದ ಇನ್ನಷ್ಟು ಕೆರೆಗಳಿಗೆ ನೀರು ತುಂಬಲಿದೆ.

–ಸಿ.ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ

ಕೆರೆಗಳಿಗೆ ನೀರು: ಸರ್ಕಾರಕ್ಕೆ ಪ್ರಸ್ತಾವ

ಹನೂರು ತಾಲ್ಲೂಕಿನ ಕೆರೆಗಳ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಇರುವ 28 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಣ್ಣ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಇವುಗಳೆಲ್ಲಾ ಅಂತರ್ಜಲ ಮಟ್ಟ ಹೆಚ್ಚಿಸುವ ಕೆರೆಗಳು. ಗೋಪಿನಾಥಂ ಕೆರೆಗೆ ಕಾವೇರಿ ನದಿಯಿಂದ ನೀರು ತುಂಬಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಅನುದಾನ ನೀಡುವ ಭರವಸೆ ಸಿಕ್ಕಿದೆ.

- ಆರ್. ನರೇಂದ್ರ, ಹನೂರು ಶಾಸಕ

ಕೆರೆಗಳ ಅಭಿವೃದ್ಧಿಗೆ ಆದ್ಯತೆ

ಉಮ್ಮತ್ತೂರು ಕೆರೆ ಮಾದರಿಯಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಕೋಟೆ ಕೆರೆಗೆ ನೀರು ತುಂಬಿಸಲು ₹80 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಕೊಳ್ಳೇಗಾಲ ತಾಲ್ಲೂಕಿನ ದಾಸನಪುರ ಸಮೀಪದ ಕಾವೇರಿ ನದಿಯಿಂದ ನೀರು ತುಂಬಿಸಲಾಗುತ್ತದೆ. ನಂತರ ಕೋಟೆ ಕೆರೆಯ ತಳಭಾಗದ 9 ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇತ್ತೀಚಿಗೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ಸಣ್ಣ ನೀರಾವರಿ ಸಚಿವರು, ಜಿಲ್ಲೆಯ ಎಲ್ಲ ಕೆರೆಗಳ ಬಗ್ಗೆ ಮಾಹಿತಿ ಮತ್ತು ನೀರು ತುಂಬಿಸುವ ಬಗ್ಗೆ ಯೋಜನೆ ರೂಪಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ

- ಎನ್.ಮಹೇಶ್, ಕೊಳ್ಳೇಗಾಲ ಶಾಸಕ

ಮುಖ್ಯಮಂತ್ರಿಗಳ ಗಮನ ಸೆಳೆಯುವೆ

ಜಿಲ್ಲೆಯ ಕೆರೆಗಳ ಸ್ಥಿತಿಗತಿ ಬಗ್ಗೆ 'ಪ್ರಜಾವಾಣಿ' ಸರಣಿ ಲೇಖನಗಳ ಮುಖಾಂತರ ಗಮನ ಸೆಳೆದಿದೆ. ಕೆರೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವುದರ ಸಂಬಂಧ ಜಿಲ್ಲೆಯ ಶಾಸಕರು, ಸಂಸದರೊಂದಿಗೆ ಚರ್ಚಿಸಲಾಗುವುದು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿ ಸಿದ್ಧಪಡಿಸಿ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು.

- ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.