ಮಂಚೇನಹಳ್ಳಿ: ಕುಕ್ಕರ್ ಹಂಚಿದ್ದಕ್ಕೆ ಸಂಬಂಧಿಸಿದಂತೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಸಮಾಜ ಸೇವಕ ಕೆಂಪರಾಜು ವಿರುದ್ಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಣಕಿನಗುರ್ಕಿ, ಗೊಲ್ಲಹಳ್ಳಿ, ನಾಮಗೊಂಡ್ಲು ಗ್ರಾಮಗಳ ಕಡೆ ಗಸ್ತು ನಡೆಸುತ್ತಿದ್ದರು. ಈ ವೇಳೆ ಬಿ.ಬೊಮ್ಮಸಂದ್ರ ಗ್ರಾಮದ ಬಸ್ ನಿಲ್ದಾಣದ ಬಳಿ ಸರಕು ಸಾಗಾಣಿಕೆ ವಾಹನದ ಸುತ್ತ ಜನರು ಗುಂಪಾಗಿ ನಿಂತಿದ್ದರು. ‘ನನಗೆ ಕೊಡು ನನಗೆ ಕೊಡು’ ಎಂದು ಒಬ್ಬರ ಮೇಲೊಬ್ಬರು ಕೈ ಚಾಚುತ್ತ
ಕೂಗಾಡುತ್ತಿದ್ದರು. ಇನ್ನು ಕೆಲವರು ತಮ್ಮ ಕೈಗಳಲ್ಲಿ ಒಂದೊಂದು ಬ್ಯಾಗ್ ಹಿಡಿದು ಹೋಗುತ್ತಿದ್ದರು.
ಆಗ ಪೊಲೀಸರು ಜೀಪ್ ನಿಲ್ಲಿಸಿ ಈ ಬಗ್ಗೆ ವಿಚಾರಿಸಿದ್ದಾರೆ. ಯಾವುದೋ ರಾಜಕೀಯ ಪಕ್ಷದವರು ಕುಕ್ಕರ್
ಹಂಚುತ್ತಿದ್ದಾರೆ ಎಂದು ಜನರು ತಿಳಿಸಿದ್ದಾರೆ. ಪೊಲೀಸರು ಗೂಡ್ಸ್ ವಾಹನದ ಬಳಿ ಹೋಗುವಷ್ಟರಲ್ಲಿ ಅಲ್ಲಿ ನಿಂತಿದ್ದ ಕೆಲವಾರು ಓಡಿ ಹೋಗಿದ್ದಾರೆ. ವಾಹನದಲ್ಲಿ ಸುಮಾರು ಬ್ಯಾಗುಗಳಿದ್ದು ಅವುಗಳಲ್ಲಿ ಕುಕ್ಕರ್ಗಳಿದ್ದವು. ಬ್ಯಾಗಿನ ಮೇಲೆ ‘ನನ್ನ ನಡೆ ಜನಾಶೀರ್ವಾದದ ಕಡೆ ಮನೆ ಮನೆಗೂ ಕೆಂಪರಾಜಣ್ಣ’ ಹಾಗೂ ಉತ್ತಮ ಸಮಾಜ ಸೇವಕ ಡಾ.ಕೆ.ಕೆಂಪರಾಜು ಬರಹಗಳಿದ್ದವು. 78 ಕುಕ್ಕರ್ ಹಾಗೂ ಬ್ಯಾಗ್ಗಳು ಇದ್ದವು.
ವಾಹನ ಮತ್ತು ಅದರಲ್ಲಿದ್ದ ಕುಕ್ಕರ್ ತುಂಬಿದ್ದ ಬ್ಯಾಗುಗಳನ್ನು ಪೊಲೀಸರು ವಶಕ್ಕೆ ಪಡೆದರು. ಕೆ.ಕೆಂಪರಾಜು ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮತಸೆಳೆಯುವ ಉದ್ದೇಶದಿಂದ ಜನರಿಗೆ ಕುಕ್ಕರ್ಗಳನ್ನು ಹಂಚುತ್ತಿದ್ದಾರೆ ಎನ್ನುವುದು ಪೊಲೀಸರಿಗೆ ಕಂಡು ಬಂದಿದೆ.
ಚುನಾವಣಾ ಆಯೋಗದ ನಿರ್ದೇಶನದ ಉಲ್ಲಂಘಿಸಿರುವ ಆರೋಪದ ಮೇಲೆ ಸರಕು ಸಾಗಾಣಿಕೆ ವಾಹನದ ಮಾಲೀಕ ಹಾಗೂ ಕೆ.ಕೆಂಪರಾಜು ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.