ADVERTISEMENT

ಪ್ರಾತ್ಯಕ್ಷಿಕೆ: ಟೊಮೆಟೊ ಬೆಳೆಗೆ ‘ತರಕಾರಿ ಸ್ಪೆಷಲ್’

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 5:09 IST
Last Updated 20 ಸೆಪ್ಟೆಂಬರ್ 2021, 5:09 IST
ಚಿಂತಾಮಣಿಯ ಕೃಷಿ ವಿಜ್ಞಾನಿಗಳ ತಂಡವು ಗಿಡ್ನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಟೊಮೆಟೊ ಬೆಳೆಯಲ್ಲಿ ತರಕಾರಿ ವಿಶೇಷ ಮಹತ್ವ-ಪದ್ಧತಿಯ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದ ವಿಜ್ಞಾನಿ ಹಾಗೂ ರೈತರು
ಚಿಂತಾಮಣಿಯ ಕೃಷಿ ವಿಜ್ಞಾನಿಗಳ ತಂಡವು ಗಿಡ್ನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಟೊಮೆಟೊ ಬೆಳೆಯಲ್ಲಿ ತರಕಾರಿ ವಿಶೇಷ ಮಹತ್ವ-ಪದ್ಧತಿಯ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದ ವಿಜ್ಞಾನಿ ಹಾಗೂ ರೈತರು   

ಚಿಂತಾಮಣಿ: ನಗರದ ಕೃಷಿ ವಿಜ್ಞಾನ ಕೇಂದ್ರವು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಿಡ್ನಹಳ್ಳಿಯಲ್ಲಿ ಟೊಮೆಟೊ ಬೆಳೆಯಲ್ಲಿ ತರಕಾರಿ ಸ್ಪೆಷಲ್‌– ಮಹತ್ವ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಕೆ.ಸಿಂಧು ಗ್ರಾಮದ ರೈತ ಮಂಜುನಾಥ್ ಟೊಮೆಟೊ ತಾಕಿನಲ್ಲಿ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿ ರೈತರಿಗೆ ತೋಟಗಾರಿಕೆಯ ತರಕಾರಿ ಬೆಳೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ರೈತರು ಟೊಮೆಟೊ ನಾಟಿ ಮಾಡಿದ 45 ದಿನಗಳ ನಂತರ ಪ್ರತಿ 15 ದಿನಗಳಿಗೊಮ್ಮೆ ಪೋಷಕಾಂಶಗಳ ಸಿಂಪರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ತಯಾರಿಸಿದ ‘ತರಕಾರಿ ಸ್ಪೆಷಲ್’ ಅನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂನಂತೆ ಬೆರೆಸಿ ಸಿಂಪಡಿಸುವುದರಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯುವುದರ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದು ಎಂದರು.

ADVERTISEMENT

ಜಿಲ್ಲೆಯಲ್ಲಿ ಟೊಮೆಟೊ ಹಾಗೂ ಇತರೆ ತರಕಾರಿ ಬೆಳೆಗಳನ್ನು ಅಧಿಕವಾಗಿ ಬೆಳೆಯಲಾಗುತ್ತಿದೆ. ರೈತರು ಉತ್ಪಾದನಾ ಖರ್ಚುಗಳನ್ನು ಕಡಿಮೆ ಮಾಡಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆದರೆ ಅಧಿಕ ಲಾಭವನ್ನು ಪಡೆಯಬಹುದು. ಒಂದೇ ಬೆಳೆಯನ್ನು ಬೆಳೆಯುವುದರ ಬದಲಾಗಿ ನಾಲ್ಕಾರು ಬೆಳೆಗಳನ್ನು ಬೆಳೆದರೆ ಒಂದು ಕೈಕೊಟ್ಟರೂ ಮತ್ತೊಂದು ಕೈಹಿಡಿಯುತ್ತದೆ. ಒಂದರ ಬೆಲೆ ಕುಸಿದರೂ ಮತ್ತೊಂದು ಲಾಭವಾಗಬಹುದು ಎಂಬ ನೀತಿಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ನೀರಾವರಿ ಸೌಲಭ್ಯವಿಲ್ಲ, ಅಂತರ್ಜಲ ತೀವ್ರವಾಗಿ ಕುಸಿದಿದೆ. ಆದರೂ ರೈತರು ಶ್ರಮ ಜೀವಿಗಳಾಗಿದ್ದು 1,800-2,000 ಅಡಿಗಳು ಕೊಳವೆ ಬಾವಿಗಳನ್ನು ಕೊರೆದು ಸಿಗುವ ಅಲ್ಪ-ಸ್ವಲ್ಪ ನೀರಿನಲ್ಲೇ ಸಮೃದ್ಧವಾಗಿ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಲಾಭದಾಯಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಾರೆ. ರೈತರು ಮಾರುಕಟ್ಟೆಯ ಕಾಲಾವಧಿಯನ್ನು ಗಮನಿಸಿ ಬೆಳೆಗಳನ್ನು ಇಡಬೇಕು ಎಂದು ಸೂಚಿಸಿದರು.

ತೋಟಗಾರಿಕೆ ಬೆಳೆಗಳನ್ನು ಸಹ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆಯಬೇಕು. ಕೃಷಿ ವಿಜ್ಞಾನಿಗಳ ಸಲಹೆ ಸೂಚನೆಗಳನ್ನು ಪಡೆದು ರಸ
ಗೊಬ್ಬರ ಮತ್ತು ಕೀಟನಾಶಕ ಉಪಯೋಗಿಸಬೇಕು. ಸಾಧ್ಯವಾದಷ್ಟು ರಸಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಸಬೇಕು. ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದರು.

ಹಲವಾರು ಪ್ರಗತಿಪರ ರೈತರು ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿ ಬೆಳೆಗಳ ಕುರಿತು ಸಮಸ್ಯೆಗಳು ಮತ್ತು ಸಂದೇಹಗಳನ್ನು ಪರಿಹರಿಸಿಕೊಂಡರು. ವಿಜ್ಞಾನಿಗಳಾದ ಡಾ.ಎಂ.ಪಾಪಿರೆಡ್ಡಿ, ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.