ಬಾಳೆಹೊನ್ನೂರು: 'ಅನ್ನದಾನ, ವಸ್ತ್ರದಾನ, ವಿದ್ಯಾದಾನ, ಭೂದಾನಕ್ಕಿಂತ ಗೋದಾನ ಅತ್ಯಂತ ಶ್ರೇಷ್ಠವೆಂದು ಹೇಳುತ್ತಾರೆ. ಗೋಹತ್ಯೆ ನಿಷೇಧ ಕಾನೂನು ಕೂಡಾ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ಸರ್ಕಾರ ಗೋ ರಕ್ಷಣೆಗೆ ಮುಂದಾಗಿರುವುದು ಸಂತೋಷದಾಯಕ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ಪೀಠದಲ್ಲಿ ಪೌರ್ಣಿಮಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ನೀಡಿದ ಅವರು, ‘ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪೂಜ್ಯ ಸ್ಥಾನ ಕಲ್ಪಿಸಲಾಗಿದೆ. ಪೂರ್ವ ಕಾಲದಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಗಂಡನ ಮನೆಗೆ ಹೋಗುವಾಗ ಹಸುವೊಂದನ್ನು ಕೊಡುವ ಸಂಪ್ರದಾಯ ಬಳಕೆಯಲ್ಲಿತ್ತು. ಗೋವಿನ ಹಾಲು, ಮೊಸರು, ತುಪ್ಪ ದೇವರ ಅಭಿಷೇಕಕ್ಕೆ ಬಳಸುವುದುಂಟು. ಗೋವಿನ ಸಗಣಿಯನ್ನು ಸುಟ್ಟು ಭಸ್ಮವನ್ನಾಗಿ ಮಾಡಿ ಧರಿಸುತ್ತಾರೆ. ಗೋಮೂತ್ರದಲ್ಲಿ ಔಷಧೀಯ ಗುಣಗಳನ್ನು ಕಾಣುತ್ತೇವೆ. ಗೋ ಸಂತತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋ ಸಂತತಿ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿವೆ. ದೇಸಿಯ ಗೋವುಗಳನ್ನು ಸಂರಕ್ಷಣೆ ಮಾಡುವ ಅವಶ್ಯಕತೆಯಿದೆ’ ಎಂದು ಹೇಳಿದರು.
ಬೆಂಗಳೂರು ಮೂಲದ ಶೈಲಜಾ ಶಿವಪ್ರಕಾಶ ಅವರು ರಂಭಾಪುರಿ ಪೀಠಕ್ಕೆ ಹಸುವೊಂದನ್ನು ತಮ್ಮ ತಾಯಿಯ ನೆನಪಿನಲ್ಲಿ ಸಮರ್ಪಿಸಿದರು.
ಧನಗೂರು, ಇಂಚಗೆರ, ನೂಲ, ಬಬಲಾದ ಸ್ವಾಮೀಜಿ, ಹಾಲ್ಜೇನು ವೀರಭದ್ರಯ್ಯ, ಹೊನ್ನಪ್ಪ ಶಾಸ್ತ್ರಿ, ಕೊಟ್ರೇಶಪ್ಪ, ಸುರೇಶ ರವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.