ADVERTISEMENT

ಚಿಂಚೋಳಿ: ಬಿತ್ತನೆಬೀಜ ಖರೀದಿಗೆ ಮುಗಿಬಿದ್ದ ರೈತರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 9:58 IST
Last Updated 4 ಜೂನ್ 2021, 9:58 IST
ಹಲವು ರೈತರು ರೈತ ಸಂಪರ್ಕ ಕೇಂದ್ರದ ಎದುರು ಜಮಾಯಿಸಿದ್ದರು.
ಹಲವು ರೈತರು ರೈತ ಸಂಪರ್ಕ ಕೇಂದ್ರದ ಎದುರು ಜಮಾಯಿಸಿದ್ದರು.   

ಚಿಂಚೋಳಿ: ಬಿತ್ತನೆಬೀಜ ಖರೀದಿಗಾಗಿ ಚಿಂಚೋಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ಸುತ್ತಲಿನ ಹಳ್ಳಿಗಳ ರೈತರು ಮುಗಿಬಿದ್ದರು.

ತಾಲ್ಲೂಕಿನಲ್ಲಿ‌ ಮುಂಗಾರು ಮಳೆ ಒಂದು ವಾರ ಮೊದಲೇ ಸುರಿದ ಕಾರಣ ಬಿತ್ತನೆ ಕಾರ್ಯ ಕೂಡ ಮುಂಚಿತವಾಗಿಯೇ ಆರಂಭವಾಗಿದೆ. ಬೆಳಿಗ್ಗೆಯಿಂದಲೇ ಹಲವು ರೈತರು ರೈತ ಸಂಪರ್ಕ ಕೇಂದ್ರದ ಎದುರು ಜಮಾಯಿಸಿದ್ದರು. ಇಲ್ಲಿ ಎರಡು ಕೌಂಟರ್ ತೆರೆಯಲಾಗಿದ್ದು, ರೈತರು ಮುಗಿ ಬಿದ್ದು ಬೀಜ ಖರೀದಿಸಿದರು.

ಸ್ಥಳಕ್ಕೆ ಬಂದು ಪೊಲೀಸರು ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಸೂಚಿಸಿ, ಎಲ್ಲರನ್ನೂ ಸಾಲಿನಲ್ಲಿ ನಿಲ್ಲಿಸಿದರು. ಆದರೆ, ಕೌಂಟರ್‌ ಬಳಿ ಹಾಗೂ ಆವರಣದಲ್ಲಿ ಕನಿಷ್ಠ ಅಂತರ ಇಲ್ಲದೇ ರೈತರ ಗುಂಪುಗೂಡಿದರು.

ADVERTISEMENT

ತಾಲ್ಲೂಕಿನ ಐನಾಪುರ, ಸುಲೇಪೇಟ, ಚಿಮ್ಮನಚೋಡ ರೈತ ಸಂಪರ್ಕ‌ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟ ನಡೆಯಿತು. ಗರೀಷ್ಠ ಐದು ಎಕರೆಗೆ ಮಾತ್ರ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ‌ ರೈತರಿಗೆ ರೈತ ಸಂಪರ್ಕ ಕೇಂದ್ರದ ಮೂಲಕ ನಡೆಸಲಾಗುತ್ತಿದೆ. ಸೋಯಾ ಬೀಜ ಪ್ರತಿಯೊಬ್ಬ ರೈತರಿಗೆ 3 ಪ್ಯಾಕೇಟ್‌ ಹಾಗೂ ತೊಗರಿ 2 ಪ್ಯಾಕೇಟ್‌ ಮತ್ತು ಉದ್ದು ಅಥವಾ ಹೆಸರು ತಲಾ ಒಂದೊಂದು ಪ್ಯಾಕೇಟ್‌ ನೀಡಲಾಗುತ್ತಿದೆ ಎಂದರು.

45 ಕೀ.ಮೀ ದೂರದಿಂದ ಬರುವ ರೈತರು: ಚಿಂಚೋಳಿ ತಾಲ್ಲೂಕಿನ ಕುಂಚಾವರಂ ಸುತ್ತಲಿನ ಗ್ರಾಮಗಳ ರೈತಾಪಿ ಜನರು ಈ ಬಾರಿ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಪಡೆಯಲು 45 ಕಿ.ಮೀ ದೂರದ ಚಿಂಚೋಳಿ ಪಟ್ಟಣಕ್ಕೆ ಬರುವುದು ಅನಿವಾರ್ಯವಾಗಿದೆ.

ಕುಂಚಾವರಂದಲ್ಲಿ ಗುರುವಾರ 75 ಮಿ.ಮೀ ಮಳೆಯಾಗಿದ್ದರಿಂದ ರೈತರು ಬೀಜ ಪಡೆಯಲು ಮುಂದಾಗಿದ್ದಾರೆ. ಅವರೆಲ್ಲರೂ ದೂರದ ಚಿಂಚೋಳಿಗೆ ಬರುತ್ತಿದ್ದಾರೆ. ಈ ಭಾಗದ ರೈತರಿಗಾಗಿಯೇ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಅನಿಲಕುಮಾರ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಂಚಾವರಂ ಗಡಿ ಗ್ರಾಮ ಚಿಂಚೋಳಿಯಿಂದ 30 ಕಿ.ಮೀ ದೂರದಲ್ಲಿದೆ. ಇದರ ಸುತ್ತಲಿನ ಸಂಗಾಪುರ, ಶೇರಿಭಿಕನಳ್ಳಿ, ಮೊಗದಂಪುರ, ಶಿವರಾಂಪುರ, ವೆಂಕಟಾಪುರ ಮೊದಲಾದ ಗ್ರಾಮದಲ್ಲಿ ಗ್ರಾಮಗಳ ರೈತರು ಚಿಂಚೋಳಿಗೆ ಬರುತ್ತಿದ್ದಾರೆ. ಕಳೆದ ವರ್ಷ ಹಾಗೂ ಅದಕ್ಕಿಂತ ಹಿಂದಿನ ವರ್ಷದಲ್ಲಿ ರೈತರಿಗೆ ಅನುಕೂಲವಾಗಲೆಂದು ಬಿತ್ತನೆ ಬೀಜ‌ ಮಾರಾಟಕ್ಕೆ ಹೆಚ್ಚುವರಿ ಕೇಂದ್ರ ತೆರೆಯಲಾಗಿತು. ಆದರೆ ಪ್ರಸಕ್ತ ವರ್ಷ ಸಿಬ್ಬಂದಿ ಕೊರತೆಯ ಕಾರಣ ಹೆಚ್ಚುವರಿ ಕೇಂದ್ರ ತೆರೆದಿಲ್ಲ ಎಂದು ಅನಿಲಕುಮಾರ ರಾಠೋಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.