ADVERTISEMENT

ರೈತನ ಮೇಲೆ ಅಧಿಕಾರಿ ಹಲ್ಲೆ

ಮಾರುಕಟ್ಟೆಗೆ ಸಾಗಿಸುತ್ತಿದ್ದ ರಾಗಿ ಜಪ್ತಿ, ಪಹಣಿ ಹಾಜರುಪಡಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 12:47 IST
Last Updated 21 ಸೆಪ್ಟೆಂಬರ್ 2021, 12:47 IST
ಚಿತ್ರದುರ್ಗದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿ ಎದುರು ಆಹಾರ ನಿರೀಕ್ಷ ಮೈಲಾರಪ್ಪ ಮತ್ತು ರೈತ ಸಂಘದ ಮುಖಂಡರ ನಡುವೆ ಮಂಗಳವಾರ ವಾಗ್ವಾದ ನಡೆಯಿತು.
ಚಿತ್ರದುರ್ಗದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಚೇರಿ ಎದುರು ಆಹಾರ ನಿರೀಕ್ಷ ಮೈಲಾರಪ್ಪ ಮತ್ತು ರೈತ ಸಂಘದ ಮುಖಂಡರ ನಡುವೆ ಮಂಗಳವಾರ ವಾಗ್ವಾದ ನಡೆಯಿತು.   

ಚಿತ್ರದುರ್ಗ: ಈರುಳ್ಳಿ ಕಿತ್ತು ನಷ್ಟ ಅನುಭವಿಸಿದ ರೈತರೊಬ್ಬರು ಕಾರ್ಮಿಕರಿಗೆ ಕೂಲಿ ನೀಡುವ ಉದ್ದೇಶದಿಂದ ರಾಗಿ ಮಾರಾಟ ಮಾಡಲು ಮುಂದಾದಾಗ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ. ಕ್ವಿಂಟಲ್‌ ರಾಗಿಯನ್ನು ಜಪ್ತಿ ಮಾಡಿ ರೈತನನ್ನು ಥಳಿಸಿ ದಾಖಲೆ ಕೇಳಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಕಸಬ ಹೋಬಳಿಯ ಜನ್ನೇನಹಳ್ಳಿಯ ಮೋಹನ ರೆಡ್ಡಿ ಸಂಕಷ್ಟಕ್ಕೆ ಸಿಲುಕಿದ ರೈತ. ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಆಹಾರ ನಿರೀಕ್ಷ ಮೈಲಾರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಬಣ) ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮೋಹನ ರೆಡ್ಡಿ ಒಂದೂವರೆ ಎಕರೆ ಜಮೀನು ಹೊಂದಿದ್ದಾರೆ. ಒಂದು ಎಕರೆಯಲ್ಲಿ ಸುಮಾರು ₹ 40 ಸಾವಿರ ವೆಚ್ಚ ಮಾಡಿ ಈರುಳ್ಳಿ ಬೆಳೆದಿದ್ದಾರೆ. ಕೊಳೆರೋಗದ ಕಾರಣಕ್ಕೆ ಈರುಳ್ಳಿ ಬಹುತೇಕ ಕೊಳೆತುಹೋಗಿದೆ. ಈರುಳ್ಳಿ ಕಿತ್ತು, ಉತ್ತಮ ಗೆಡ್ಡೆಗಳನ್ನು ಆಯ್ಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದರಿಂದ ಕಾರ್ಮಿಕರಿಗೆ ಕೂಲಿ ಹಣ ನೀಡಲು ಪರದಾಡಿದ್ದಾರೆ. ಗೃಹ ಬಳಕೆಗೆ ಇಟ್ಟುಕೊಂಡಿದ್ದ ಕ್ವಿಂಟಲ್‌ ರಾಗಿಯನ್ನು ಮಾರಾಟ ಮಾಡಲು ಟಿವಿಎಸ್‌ ಮೊಪೆಡ್‌ನಲ್ಲಿ ಸೋಮವಾರ ಚಿತ್ರದುರ್ಗಕ್ಕೆ ಬಂದಾಗ ಆಹಾರ ನಿರೀಕ್ಷಕ ತಡೆದು ಪ್ರಶ್ನಿಸಿದ್ದಾರೆ.

ADVERTISEMENT

‘ಚಳ್ಳಕೆರೆ ಗೇಟ್‌ ಸಮೀಪ ದ್ವಿಚಕ್ರ ವಾಹನ ತಡೆದ ಅಧಿಕಾರಿಗಳು ರಾಗಿ ಚೀಲ ಪರಿಶೀಲಿಸಿದರು. ರಾಗಿ ಬೆಳೆದಿರುವುದಕ್ಕೆ ದಾಖಲೆ ಕೇಳಿದರು. ಪಹಣಿ ಮನೆಯಿಂದ ತಂದಿಲ್ಲವೆಂಬ ಕಾರಣ ನೀಡಿದಾಗ ಕೆನ್ನೆಗೆ ಬಾರಿಸಿದರು. ಎರಡು ಮೂಟೆ ರಾಗಿಯನ್ನು ತಮ್ಮ ವಾಹನಕ್ಕೆ ಹಾಕಿಕೊಂಡು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಬರಲು ಸೂಚಿಸಿದರು’ ಎಂದು ರೈತ ಮೋಹನ ರೆಡ್ಡಿ ಅಳಲು ತೋಡಿಕೊಂಡರು.

ರೈತ ಅಲ್ಲಿಂದ ನೇರವಾಗಿ ಕಚೇರಿಗೆ ಧಾವಿಸಿ ರಾಗಿ ಮರಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಜಮೀನಿನ ದಾಖಲೆ ಹಾಜರುಪಡಿಸಿ ರಾಗಿ ಪಡೆಯುವಂತೆ ತಾಕೀತು ಮಾಡಲಾಗಿದೆ. ಗ್ರಾಮಕ್ಕೆ ಮರಳಿದ ರೈತ ಪಹಣಿಯೊಂದಿಗೆ ಮಂಗಳವಾರ ಮತ್ತೆ ಕಚೇರಿಗೆ ಬಂದಿದ್ದರು. ಇವರೊಂದಿಗೆ ರೈತ ಸಂಘದ ಮುಖಂಡರು ಹಾಗೂ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಜೊತೆಯಾಗಿದ್ದರು.

ರಾಗಿಯನ್ನು ಮರಳಿಸುವಂತೆ ಆಹಾರ ನಿರೀಕ್ಷಕರನ್ನು ಮತ್ತೆ ಕೋರಿದರು. ಇದಕ್ಕೆ ಸರಿಯಾಗಿ ಸ್ಪಂದಿಸದೇ ಇದ್ದಾಗ ಪ್ರತಿಭಟನೆ ಆರಂಭಿಸಿದರು. ಕಚೇರಿಯಿಂದ ಹೊರಗೆ ಬಂದ ಆಹಾರ ನಿರೀಕ್ಷಕ ಮೈಲಾರಪ್ಪ ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಮದ್ಯ ಸೇವಿಸಿದ ಅನುಮಾನದ ಮೇರೆಗೆ ಆಹಾರ ನಿರೀಕ್ಷಕರನ್ನು ರೈತರು ಜಿಲ್ಲಾಧಿಕಾರಿ ಎದುರು ಹಾಜರುಪಡಿಸಿದರು. ಮದ್ಯ ಸೇವಿಸಿದ್ದರ ಬಗ್ಗೆ ತಪಾಸಣೆ ನಡೆಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ, ಕಾರ್ಯದರ್ಶಿ ಪಾತಣ್ಣ, ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್‌.ರಂಗಸ್ವಾಮಿ ಇದ್ದರು.

ಅಕ್ರಮ ಸಾಗಣೆ ಆರೋಪ

‘ರಾಗಿ ಮತ್ತು ಗೋದಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರಿಯಾದ ದಾಖಲೆ ಹಾಜರುಪಡಿಸಿದ್ದರೆ ಅಂದೇ ಧಾನ್ಯವನ್ನು ಮರಳಿ ನೀಡುತ್ತಿದ್ದೆವು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ ತಿಳಿಸಿದ್ದಾರೆ.

‘ಧಾನ್ಯ ಸಾಗಣೆ ಮಾಡುವವರು ರೈತರು ಎಂಬುದು ಗೊತ್ತಾದರೆ ಅವಕಾಶ ನೀಡುತ್ತೇವೆ. ಅನುಮಾನ ಬಂದಾಗ ಮಾತ್ರ ಆರ್‌ಟಿಸಿ ಕೇಳುತ್ತೇವೆ. ರೈತ ಮಂಗಳವಾರ ಆರ್‌ಟಿಸಿ ಜೊತೆಗೆ ಇತರನ್ನು ಕರೆತಂದು ಗಲಾಟೆ ನಡೆಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಆಹಾರ ನಿರೀಕ್ಷಕರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಚೇರಿ ಸಮಯದಲ್ಲಿ ಮದ್ಯ ಸೇವನೆ ಮಾಡಿದ್ದರು ಎಂಬುದು ಖಚಿತವಾಗಿಲ್ಲ’ ಎಂದು ಮಾಹಿತಿ ನೀಡಿದರು.

***

ದ್ವಿಚಕ್ರ ವಾಹನ ತಡೆದು ಪ್ರಶ್ನಿಸಿದಾಗ ಅಚ್ಚರಿಯಾಯಿತು. ಏಕಾಏಕಿ ಹಲ್ಲೆ ನಡೆಸಿದಾಗ ಭಯವಾಯಿತು. ರಾಗಿ ಬೆಳೆದಿರುವುದಕ್ಕೆ ಪಹಣಿಯಲ್ಲಿ ದಾಖಲೆ ಇದೆ.

- ಮೋಹನ ರೆಡ್ಡಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.