ADVERTISEMENT

ಬಂಗ ಅರಸರ ಶಿಲಾ ಶಾಸನ ಪತ್ತೆ; ಅಡಿಕೆ ತೋಟದಲ್ಲಿ ಅಪರೂಪದ ಪುರುಷಾಮೃಗ ಶಿಲ್ಪ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:49 IST
Last Updated 6 ಸೆಪ್ಟೆಂಬರ್ 2021, 8:49 IST
ಅಪರೂಪದ ಪುರುಷಾಮೃಗ ಶಿಲ್ಪ ಹೊಂದಿರುವ ಬಂಗ ಅರಸರ ಕಾಲದ ಶಿಲಾ ಶಾಸನ ಪತ್ತೆಯಾಗಿರುವುದು
ಅಪರೂಪದ ಪುರುಷಾಮೃಗ ಶಿಲ್ಪ ಹೊಂದಿರುವ ಬಂಗ ಅರಸರ ಕಾಲದ ಶಿಲಾ ಶಾಸನ ಪತ್ತೆಯಾಗಿರುವುದು   

ಬಂಟ್ವಾಳ: ಸಜಿಪಮೂಡ ಗ್ರಾಮದ ಅನ್ನಪಾಡಿ ಬಾಲಗಣಪತಿ ದೇವಾಲಯ ಬಳಿ ದಿವಂಗತ ಮೋನಪ್ಪ ಪೂಜಾರಿ ಎಂಬುವರ ಅಡಿಕೆ ತೋಟದಲ್ಲಿ ಅಪರೂಪದ ಪುರುಷಾಮೃಗ ಶಿಲ್ಪ ಹೊಂದಿರುವ ಬಂಗ ಅರಸರ ಕಾಲದ ಶಿಲಾ ಶಾಸನ ಈಚೆಗೆ ಪತ್ತೆಯಾಗಿದೆ.

ಕೆಲವು ತಿಂಗಳ ಹಿಂದೆ ಇಲ್ಲಿನ ದೇವಳ ಜೀರ್ಣೋದ್ಧಾರ ವೇಳೆ ಪತ್ತೆಯಾಗಿದ್ದ ಶಿಲಾ ಶಾಸನವನ್ನು ಬಿ.ಸಿ.ರೋಡು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಇವರು ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಗಮನಕ್ಕೆ ತಂದಿದ್ದರು.

ಇದೀಗ ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಇವರ ಮಾರ್ಗದರ್ಶನದಲ್ಲಿ ಈ ಶಾಸನದ ಬಗ್ಗೆ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸಿದ್ದಾರೆ. ಇದು 15 ನೇ ಶತಮಾನದಲ್ಲಿ ಜೈನ ಮನೆತನದ ಬಂಗ ಅರಸರಿಗೆ ಸೇರಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆದ ಈ ಶಾಸನವು 138 ಸೆಂ.ಮೀ ಎತ್ತರ ಮತ್ತು 76 ಸೆಂ.ಮೀ ಅಗಲವಿದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 17 ಸಾಲುಗಳನ್ನು ಹೊಂದಿದೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರಿದ್ದು, ಮಧ್ಯ ಭಾಗದಲ್ಲಿ ಪ್ರಭಾವಳಿ ಸಹಿತ ಶಿವಲಿಂಗ ಹಾಗೂ ಇದರ ಬಲ ಭಾಗದಲ್ಲಿ ಶಿವಲಿಂಗವನ್ನು ಪೂಜಿಸುತ್ತಿರುವ ಪುರುಷಾಮೃಗ ಮತ್ತು ಎಡ ಭಾಗದಲ್ಲಿ ನಂದಿಯ ಉಬ್ಬು ಕೆತ್ತನೆ ಇದೆ. ‌ರಾಜ್ಯದಲ್ಲಿ ಈತನಕ ಲಭ್ಯವಾದ ಶಾಸನಗಳಲ್ಲಿ ಪುರುಷಾಮೃಗದ ಕೆತ್ತನೆ ಇದೇ ಮೊದಲು ಪತ್ತೆಯಾಗಿದೆ ಎಂದು ಶ್ರುತೇಶ್ ಅಭಿಪ್ರಾಯಪಟ್ಟಿದ್ದಾರೆ.

ಈ ಶಾಸನದಲ್ಲಿ ಜಯಾಭ್ಯುದಯ ಶಾಲಿವಾಹನ ಶಕವರುಷ 1405 ನೇ ಶೋಭಕೃತ ಸಂವತ್ಸರದ ಜೇಷ್ಠ ಶುದ್ಧ 1 ಬುಧವಾರ ಎಂದು ಉಲ್ಲೇಖವಿದ್ದು, ಇದು ಕ್ರಿ.ಶ. 1483 ಮೇ. 17 ಬುಧವಾರಕ್ಕೆ ಸರಿ ಹೊಂದುತ್ತದೆ. ಬಂಗ ದೊರೆ ಪಾಂಡ್ಯಪ್ಪರಸನ ಅಳಿಯ ಲಕ್ಷ್ಮಪ್ಪರಸ ಒಡೆಯನು ಇಚಿಲ ಮಠಕ್ಕೆ ಚಂದ್ರಗ್ರಹಣದ ಸಮಯದಲ್ಲಿ ಬರೆಸಿ ಕೊಟ್ಟಂತಹ ದಾನ ಶಾಸನ ಇದಾಗಿದೆ.

ಈ ಮಠಕ್ಕೆ ಅಕ್ಕಿಯ ನೈವೇದ್ಯಕ್ಕೆ 33 ಕಾಟಿ ಗದ್ಯಾಣಗಳನ್ನು ಧಾರಾ ಪೂರ್ವಕವಾಗಿ ಕೊಟ್ಟಂತಹ ದಾನವನ್ನು ಈ ಶಾಸನವು ಉಲ್ಲೇಖಿಸುತ್ತಿದೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯ ಕಾಣಬಹುದಾಗಿದೆ.

ಕ್ಷೇತ್ರ ಕಾರ್ಯ ಶೋಧನೆ ವೇಳೆ ಕಿಶನ್ ಕುಮಾರ್ ಮೂಡುಬೆಳ್ಳೆ ಮತ್ತು ಸ್ಥಳೀಯರಾದ ಎಸ್. ಲಿಂಗಪ್ಪ ದೋಟ, ಕುಶೇಷ್ ಮತ್ತು ರಮೇಶ್ ಅನ್ನಪಾಡಿ ಸಹಕಾರ ನೀಡಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.