ಮಂಗಳೂರು: ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನಗೊಂಡಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ದೇಶದಾದ್ಯಂತ ಇರುವ ಎಂಎಸ್ಎಂಇ ಸಾಲಗಾರರನ್ನು ವೆಬಿನರ್ ಮೂಲಕ ಸಂಪರ್ಕಿಸುವ ವಿಶಿಷ್ಟ ಕ್ರಮವನ್ನು ಬ್ಯಾಂಕ್ ಆಫ್ ಬರೋಡ್ ಗುರುವಾರ ಆಯೋಜಿಸಿತ್ತು.
ದೇಶದ ವಿವಿಧೆಡೆಗಳ 49 ಸಾವಿರಕ್ಕೂ ಹೆಚ್ಚು ಎಂಎಸ್ಎಂಇ ಸಾಲಗಾರರು ಭಾಗವಹಿಸಿ. ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್ ಖಿಚಿ ಅವರಿಂದ ಮಾರ್ಗದರ್ಶನ ಪಡೆದರು. ಸಂಕಷ್ಟಕ್ಕೀಡಾಗಿರುವ ಎಂಎಸ್ಎಂಇ ವಲಯಕ್ಕೆ ಬೆಂಬಲವಾಗಿ ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ಮಾಹಿತಿಯನ್ನೂ ನೀಡಲಾಯಿತು.
ವಿಶೇಷ ಕೋವಿಡ್ ತುರ್ತು ಸಾಲ ಯೋಜನೆ, ಸಾಲದ ಕಂತು ಮುಂದೂಡಿಕೆ, ಬಡ್ಡಿ ಪಾವತಿ ಮುಂದೂಡಿಕೆ, ಸಾಲ ಮಿತಿಗಳ ಮರು ಮೌಲ್ಯಮಾಪನ ಮತ್ತು ಸಾಲಗಳ ಮರು ಹೊಂದಾಣಿಕೆಯಂಥ ಕ್ರಮಗಳ ಮೂಲಕ ಎಂಎಸ್ಎಂಇಗಳಿಗೆ ನೆರವು ನೀಡಲಾಗುತ್ತದೆ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದರು.
ಈ ಸಂಕಷ್ಟದಿಂದ ಪಾರಾಗಲು ಈ ಸೌಲಭ್ಯಗಳನ್ನು ಎಂಎಸ್ಎಂಇಗಳು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಮಾರ್ಗಸೂಚಿ, ಮತ್ತು ಸಲಹೆ- ಮಾರ್ಗದರ್ಶನ ನೀಡಲಾಯಿತು. ಸುಮಾರು 22 ಸಾವಿರ ಪ್ರಶ್ನೆಗಳನ್ನು ಈ ಸಂವಾದದಲ್ಲಿ ಚಾಟ್ ಬಾಕ್ಸ್ ಮೂಲಕ ಬ್ಯಾಂಕ್ ಸ್ವೀಕರಿಸಿದೆ ಎಂದು ಪ್ರಕಟಣೆ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.