ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಗಳಲ್ಲಿ ಮೊಂತಿ ಹಬ್ಬ ಆಚರಣೆ

ಕೌಟುಂಬಿಕ ಏಕತೆಯ ಸಂದೇಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 11:46 IST
Last Updated 8 ಸೆಪ್ಟೆಂಬರ್ 2021, 11:46 IST
ವಿಟ್ಲ ಸಮೀಪದ ಸೂರಿಕುಮೇರು ಸೈಂಟ್ ಜೋಸೆಪ್ ಚರ್ಚ್ ನಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಬಹಳ ಸರಳ ರೀತಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು. 
ವಿಟ್ಲ ಸಮೀಪದ ಸೂರಿಕುಮೇರು ಸೈಂಟ್ ಜೋಸೆಪ್ ಚರ್ಚ್ ನಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಬಹಳ ಸರಳ ರೀತಿಯಲ್ಲಿ ತೆನೆ ಹಬ್ಬ ಆಚರಿಸಲಾಯಿತು.    

ವಿಟ್ಲ: ಸೂರಿಕುಮೇರು ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ಕೋವಿಡ್ ನಿಯಮದೊಂದಿಗೆ ಸರಳವಾಗಿ ತೆನೆ ಹಬ್ಬ ಆಚರಿಸಲಾಯಿತು.

ಫಾದರ್ ಗ್ರೆಗರಿ ಪಿರೇರಾ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ಸ್ಟೀವನ್ ಮಾರ್ಟಿಸ್ ಮಾರ್ಗದರ್ಶನದಲ್ಲಿ ಭಕ್ತರಿಗೆ ಕಬ್ಬು ಹಂಚಲಾಯಿತು. ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲೂ ಸರಳವಾಗಿ ಮೊಂತಿ ಹಬ್ಬ ಆಚರಿಸಲಾಯಿತು. ಫಾ. ವಿಶಾಲ್ ಮೋನಿಸ್ ನೇತೃತ್ವದಲ್ಲಿ ಬಲಿಪೂಜೆ ಹಾಗೂ ಧಾರ್ಮಿಕ ವಿಧಿಗಳು ಜರುಗಿದವು. ಮಕ್ಕಳು ಮಾತೆ ಮೇರಿಗೆ ಪುಷ್ಪ ಅರ್ಪಿಸಿದರು.

ವಿಟ್ಲ ಶೋಕ ಮಾತೆಯ ಇಗರ್ಜಿಯಲ್ಲಿ ನಡೆದ ತೆನೆ ಹಬ್ಬದಲ್ಲಿ ಧರ್ಮ ಗುರು ಫಾ. ಐವನ್ ಮೈಕೆಲ್ ರೋಡ್ರಿಗಸ್ ಮತ್ತು ಫಾ. ಸ್ಟಾನಿ ರೋಡ್ರಿಗಸ್ ಪೂಜಾವಿಧಿ ನೆರವೆರಿಸಿದರು. ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮನೋಹರ ಲ್ಯಾನ್ಸಿ, ಕಾರ್ಯದರ್ಶಿ ವಿಜಯ ಪಾಯಿಸ್, ಸಂಚಾಲಕ ಲೂವಿಸ್ ಮಸ್ಕರೇನಸ್ ಇದ್ದರು.

ADVERTISEMENT

ಕೊಸೆಸಾಂ: ಮೊಂತಿ ಹಬ್ಬ

ಮೂಲ್ಕಿ: ಇಲ್ಲಿನ ಕೊಸೆಸಾಂ ಅಮ್ಮನವರ ಚರ್ಚ್‌ನಲ್ಲಿ ಮೊಂತಿ ಹಬ್ಬದ ಪ್ರಯುಕ್ತ ಬುಧವಾರ ವಿಶೇಷ ಪೂಜೆ ನಡೆಯಿತು. ಧರ್ಮಗುರು ಸಿಲ್ವೆಸ್ಟರ್ ಡಿಕೋಸ್ಟಾ ಆಶೀರ್ವಚನ ನೀಡಿದರು. ಡಿವೈನ್ ಕಾಲ್ ಸೆಂಟರ್‌ನ ಅಬ್ರಹಾಂ ಡಿಸೋಜ, ಜಾರ್ಜ್ ಕ್ರಾಸ್ತಾ, ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಜೊವಿನ್ ಪ್ರಕಾಶ್ ಡಿಸೋಜ, ವಾರ್ಡ್ ಗುರಿಕಾರರು, ಧರ್ಮಸಭಾ ಸದಸ್ಯರು ಇದ್ದರು.

‘ಮನುಷ್ಯನ ಪೊರೆವ ಚೈತನ್ಯ ಮಾತೆ’


ಮೂಡುಬಿದಿರೆ: ‘ಮಾತೃ ಸ್ವರೂಪವು ಭೂಮಿಯ ಮೇಲೆ ಇರುವ ಉನ್ನತವಾದ ಭಾವನೆಯಾಗಿದೆ. ದೇವರ ಸೃಷ್ಟಿಯಲ್ಲಿ ಉತ್ಕೃಷ್ಟ ಸಂಬಂಧವಾಗಿ ಮತ್ತು ಗಟ್ಟಿ ಬಾಂಧವ್ಯವನ್ನು ಪ್ರತಿಪಾದಿಸುವ ಮಾತೃಶಕ್ತಿಯು ಮನುಷ್ಯನನ್ನು ಭೂಮಿಯ ಮೇಲೆ ಪೊರೆಯುವ ಮೂಲಕ ಚೈತನ್ಯವನ್ನು ತುಂಬುತ್ತದೆ. ಮೇರಿ ಮಾತೆಯ ಹುಟ್ಟು ಮಾನವ ಕುಲಕ್ಕೆ ಒಳಿತನ್ನು ಉಂಟುಮಾಡಿದೆ’ ಎಂದು ಶಿರ್ತಾಡಿ ಮೌಂಟ್ ಕಾರ್ಮೆಲ್‌ ಚರ್ಚ್‌ನ ಧರ್ಮಗುರು ಹೆರಾಲ್ಡ್ ಮಸ್ಕರೇನಸ್ ಹೇಳಿದರು.

ಬುಧವಾರ ನಡೆದ ಮೊಂತಿ ಹಬ್ಬದ ಬಲಿಪೂಜೆಯ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಯೇಸು ಕ್ರಿಸ್ತರ ಜೀವನ ಶ್ರೇಷ್ಠತೆಗೆ ಮೇರಿ ಮಾತೆಯ ಬದುಕು ಪ್ರೇರಣೆ. ಮಹಾನ್ ವ್ಯಕ್ತಿತ್ವಕ್ಕೆ ಜನ್ಮ ಕೊಟ್ಟ ಶ್ರೇಷ್ಠ ತಾಯಿ ಅವರು. ಈ ಬಾರಿಯ ಮೊಂತಿ ಹಬ್ಬವನ್ನು ಕೌಟುಂಬಿಕ ಏಕತೆ ಹಾಗೂ ಹೆಣ್ಣುಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಹೆರಾಲ್ಡ್ ಡಿಸಿಲ್ವ, ಕಾರ್ಯದರ್ಶಿ ಜೆಸಿಂತಾ, ಜೊಯೆಲ್ ಸಿಕ್ವೇರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.