ADVERTISEMENT

ಕ್ರೀಡಾ ಗಾಯಗಳ ಒಪಿಡಿ ಆರಂಭಿಸಿದ ಕೆಎಂಸಿ ಆಸ್ಪತ್ರೆ

ಸೋಮವಾರದಿಂದ ಗುರುವಾರ ಬೆಳಿಗ್ಗೆ 9.30 ರಿಂದ 11.30 ರವರೆಗೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 7:37 IST
Last Updated 2 ಸೆಪ್ಟೆಂಬರ್ 2021, 7:37 IST
ಪತ್ರಿಕಾಗೋಷ್ಠಿಯಲ್ಲಿ‌ ಡಾ.ಯೋಗೀಶ್ ಕಾಮತ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ‌ ಡಾ.ಯೋಗೀಶ್ ಕಾಮತ್ ಮಾಹಿತಿ ನೀಡಿದರು.   

ಮಂಗಳೂರು: ಕ್ರೀಡೆಗೆ ಸಂಬಂಧಿಸಿದ ಗಾಯಗಳಿಗೆ ಸಂಪೂರ್ಣ ಹಾಗೂ ಸಮಗ್ರ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ನಗರದ ಕೆಎಂಸಿ ಆಸ್ಪತ್ರೆಯು ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಆರಂಭಿಸಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕ್ರೀಡಾ ಗಾಯಗಳು, ಮೂಳೆ, ಸೊಂಟ ಮತ್ತು ಮಂಡಿ ವಿಶೇಷ‌ತಜ್ಞ ಡಾ. ಯೋಗೇಶ್ ಕಾಮತ್, ರಾಷ್ಟ್ರೀಯ ಕ್ರೀಡಾಪಟುಗಳಾದ ಚೆಲ್ಸಾ ಮೇದಪ್ಪ ನಿತೇಶ್ ಕುಮಾರ್, ಅನ್ವಿತಾ ಆಳ್ವಾ, ಅಂಕುಶ್ ಭಂಡಾರಿ ರಾಹುಲ್ ಬಿ.ಎಂ., ಕಾರ್ತಿಕ್ ಯು., ರೋಹನ್ ಡಿ ಕುಮಾರ್, ಶರವಣ, ಯಜನೀಶ್ ರಾವ್, ಅರುಣ್ ಕುಮಾರ್ ಮತ್ತು ಮೈಥಿಲಿ ಪೈ ಸೇರಿ ಹಲವು ಕ್ರೀಡಾ ಪಟುಗಳಿಗೆ ಆಸ್ಪತ್ರೆಯು ಚಿಕಿತ್ಸೆ ನೀಡಿದೆ ಎಂದರು.

ಆಸ್ಪತ್ರೆಯು ಪ್ರತಿ ವಾರ ಸೋಮವಾರದಿಂದ ಗುರುವಾರದವರೆಗೆ ಬೆಳಗ್ಗೆ 9.30ರಿಂದ 11.30 ಗಂಟೆಯವರೆಗೆ ಕ್ರೀಡಾ ಗಾಯಗಳಿಗೆ ವಿಶೇಷವಾಗಿ ಮೀಸಲಾಗಿರುವ ಒಪಿಡಿ ಸೇವೆಯನ್ನು ಒದಗಿಸಲಿದೆ. ಎಲ್ಲ ರೀತಿಯ ಗಾಯಗಳ ಸಮಗ್ರ ತಪಾಸಣೆ ಮತ್ತು ಅಗತ್ಯ ಸಲಹೆ ಜೊತೆಗೆ ಪುನರ್ವಸತಿ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

'ಹಲವಾರು ಕ್ರೀಡಾಪಟುಗಳಿಗೆ ನಾವು ಚಿಕಿತ್ಸೆ ನೀಡಿದ್ದೇವೆ ಮತ್ತು ಈಗಲೂ ನೀಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕ್ರೀಡಾ ಗಾಯಗಳಿಗೆಂದೇ ಮೀಸಲಾಗಿರುವ ಪ್ರತ್ಯೇಕ ಒಪಿಡಿಯನ್ನು ಆರಂಭಿಸುತ್ತಿರುವುದಕ್ಕೆ ನಮಗೆ ಅತೀವ ಸಂತೋಷವಾಗುತ್ತಿದೆ. ಕ್ರೀಡೆಗೆ ಸಂಬಂಧಿಸಿದ ಕೀಲು ನೋವುಗಳಲ್ಲಿ ಮಂಡಿ ನೋವು ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಾಯವಾಗಿದ್ದು, ಶೇ.15ರಷ್ಟು ಅಥವಾ ಎಲ್ಲಾ ಗಾಯಗಳ ಪೈಕಿ ಆರನೇ ಒಂದು ಭಾಗದಷ್ಟು ಗಾಯಗಳು ಮಂಡಿ ನೋವಿಗೆ ಸಂಬಂಧಿಸಿರುತ್ತವೆ ಎಂದು ತಿಳಿಸಿದರು.

ಇದರೊಂದಿಗೆ ಎಸಿಎಲ್ ಲಿಗಮೆಂಟ್ (ಅಸ್ತಿರಜ್ಜು) ಗಾಯ ಕೂಡ ಶಸ್ತಚಿಕಿತ್ಸೆ ಅಗತ್ಯವಿರುವ ಮೊಣಕಾಲಿನ ಮತ್ತೊಂದು ಸಾಮಾನ್ಯ ಬಾಧೆಯಾಗಿದೆ. ಶೇ 60ರಷ್ಟು ಮೊಣಕಾಲಿನ ಗಾಯಗಳಲ್ಲಿ ಕಾರ್ಟಿಲೇಜ್ (ಮೃದುವಾದ ಮೂಳೆ) ಗಾಯದ ಸಮಸ್ಯೆಯು ಜೊತೆಗೇ ಬರುತ್ತದೆ. ಈ ಪೈಕಿ ಶೇ 80ರಷ್ಟು ಗಾಯಗಳು ತೀರಾ ಕಳಪೆ ಗುಣಮಟ್ಟದ ಎಂಆರ್‍ಐ ಹಾಗೂ ವರದಿ ನೀಡುವಾಗ ಆಗುವ ಪರಿಣಾಮಕಾರಿ ದೋಷಗಳಿಂದಾಗಿ ಗಮನಕ್ಕೆ ಬರುವುದೇ ಇಲ್ಲ. ಈ ರೀತಿಯ ಪ್ರಕರಣಗಳಲ್ಲಿ ಗಾಯಗಳಿಗೆ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಸಲಹೆ ನೀಡುವುದು ಅತಿ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಒಂದೊಮ್ಮೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದಿದ್ದರೆ ಅಥ್ಲೀಟ್‍ಗಳು ಗಂಭೀರ ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಗಾಯಾಳು ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆ ನಂತರ ತೋರುವ ಕಾಳಜಿ ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಾಹಿತಿ ನೀಡಿದರು.

ಗುಣಮಟ್ಟದ ಶಸ್ತ್ರಚಿಕಿತ್ಸೆ ಮತ್ತು ಸಮರ್ಪಕವಾಗಿರುವ ತ್ವರಿತ ಪುನರ್ವಸತಿ ಸೌಲಭ್ಯ ಕಲ್ಪಿಸಿದಲ್ಲಿ ಕ್ರೀಡಾಪಟುಗಳು ವೃತ್ತಿಪರ ಕ್ರೀಡೆಗೆ ಮರಳಲು ಸಾಧ್ಯವಾಗುತ್ತದೆ. ಗಾಯಗೊಂಡಿರುವ ದೇಹದ ಭಾಗವನ್ನು ಸರಿಪಡಿಸಲು ಮತ್ತು ಪುನಸ್ಥಾಪನೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನಗಳು ಅವಕಾಶ ಕಲ್ಪಿಸುತ್ತವೆ. ಹೀಗಾಗಿ ಮೊಣಕಾಲಿನ ಸಂಪೂರ್ಣ ಸಹಜ ಸ್ಥಿತಿಯನ್ನು ಮರಳಿ ಪಡೆಯುವುದು ಸಾಧ್ಯವಾಗುತ್ತದೆ ಎಂದು ಹೇಳಿದರು.

ಆತ್ರ್ರೋಸ್ಕೊಪಿ ತಂತ್ರಗಳನ್ನು ಬಳಸಿಕೊಂಡು ರೋಗಿಯ ಕೈಗೆಟುಕುವಿಕೆಗೆ ಅನುಗುಣವಾಗಿ ಹೊಸ ಇಂಪ್ಲಾಂಟ್ (ಕಸಿ) ಗಳೊಂದಿಗೆ ಸ್ಟೇಟ್-ಆಫ್-ದ-ಆರ್ಟ್ ತಂತ್ರಗಳನ್ನು ಬಳಸಬಹುದಾಗಿದೆ. ಐಸಿಆರ್‌ಎಸ್ (ಇಂಟರ್‍ನ್ಯಾಷನಲ್ ಕಾರ್ಟಿಲೇಜ್ ರೀಜನರೇಷನ್ ಸೊಸೈಟಿ) ಯಿಂದ ಗುರುತಿಸಲಾಗಿರುವ ಮೊದಲ ಕೇಂದ್ರ ನಮ್ಮದಾಗಿದೆ ಎಂದರು.

ಕಾರ್ಟಿಲೆಜ್ ಕೆಲಸದಲ್ಲಿ ವಿವಿಧ ತಜ್ಞರ ನಡುವೆ ಪರಸ್ಪರ ಹೊಂದಾಣಿಕೆ ಉತ್ತಮವಾಗಿರಬೇಕು ಮತ್ತು ಎಂಆರ್‍ಐ ಹಾಗೂ ಸೆಲ್ ಥೆರಪಿ ತಂತ್ರಗಳಲ್ಲಿ ಕಾರ್ಟಿಲೆಜ್ ಅನುಕ್ರಮದಂತಹ ಇಮೇಜಿಂಗ್ ತಂತ್ರಗಳ ಅಭಿವೃದ್ಧಿಯ ಅಗತ್ಯವಿದೆ ಎಂದು ಹೇಳಿದರು.

ಮಂಗಳೂರಿನ ಕೆಎಂಸಿ ಹಾಸ್ಪಿಟಲ್‍ನ ಪ್ರಾಂತೀಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಘೀರ್ ಸಿದ್ದಿಕಿ ಮಾತನಾಡಿ, ಎಲ್ಲ ರೀತಿಯ ಗಾಯಗಳ ಪೈಕಿ ಶೇ 75 ಗಾಯಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಉತ್ತಮವಾಗಿರುವ ಆರಂಭಿಕ ಪುನರ್ವಸತಿ ಸೌಲಭ್ಯ ಕಲ್ಪಿಸಿದಲ್ಲಿ ಗಾಯಗಳು ಬೇಗ ಗುಣಮುಖವಾಗಬಲ್ಲವು ಎಂದರು.

ಈ ಭಾಗದಲ್ಲಿ ಇರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾರುವ ಏಕೈಕ ಕೇಂದ್ರ ಎಂಬ ಹೆಗ್ಗಳಿಕೆಯು ನಮ್ಮ ಕೇಂದ್ರಕ್ಕಿರುವುದು ನಮಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ಗಾಯದ ನಂತರದ ಶೀಘ್ರ ಪುನರ್ವಸತಿಗೆ ಸಂಬಂಧಿಸಿದ ವಿನೂತನ ತಂತ್ರಗಳ ಮೂಲಕ ಮಾತ್ರವಲ್ಲದೆ ಅತ್ಯಂತ ಸೂಕ್ಷ್ಮ ವಾಕಿಂಗ್ (ನಡಿಗೆ) ಅಸಹಜತೆಗಳನ್ನು ಪತ್ತೆಹಚ್ಚಲು ಸ್ವದೇಶಿ ಸಾಧನದ ಅಭಿವೃದ್ಧಿ ಮತ್ತು ಗಾಯಗಳ ಮರುಕಳಿಸುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖವಾದ ಸಮತೋಲನ ಸಾಮರ್ಥ್ಯಗಳ ಬಳಕೆ ಮೂಲಕ ನಮ್ಮ ಕೇಂದ್ರವು ವಿಶೇಷವಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.

ಹಾಕಿ ಮತ್ತು ಫುಟ್ಬಾಲ್ ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಮಾರ್ಷಲ್ ಆರ್ಟ್ಸ್ ಪಟುಗಳು, ರಾಷ್ಟ್ರೀಯ ಮಟ್ಟದ ಅಥ್ಲೀಟ್‍ಗಳು ಸೇರಿ ಹಲವು ವೃತ್ತಿಪರ ಕ್ರೀಡಾಪಟುಗಳ ವಿಶ್ವಾಸಕ್ಕೆ ನಾವು ಪಾತ್ರರಾಗಿದ್ದೇವೆ ಎಂದು ಹೇಳಿದರು.

ಡಾ. ಯೋಗೇಶ್ ಕಾಮತ್ ನೇತೃತ್ವದಲ್ಲಿ‌ಡಾ. ನಬೀಲ್ ಮೊಹಮ್ಮದ್ ಮತ್ತು ಡಾ. ಬಿಶ್ವರಂಜನ್ ದಾಸ್ ಅವರನ್ನು ಕ್ರೀಡಾ ಗಾಯಗಳ ಒಪಿಡಿ ತಂಡವು ಒಳಗೊಂಡಿದೆ. ವೈದ್ಯರ ಭೇಟಿಗಾಗಿ ಮೊ.ಸಂ. 9945434673 ಸಂಪರ್ಕಿಸಬಹುದು ಎಂದು ತಿಳಿಸಿದರು.
ಚಿಕಿತ್ಸೆಗೆ ಒಳಗಾದ ಕ್ರೀಡಾಪಟುಗಳಾದ ಕಾರ್ತಿಕ್, ಯಜ್ಞೇಶ್ ರಾವ್, ರೋಹನ್, ಅರುಣ್ ತಮ್ಮ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.