ಮಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮಡಿಕೇರಿಯಲ್ಲಿ ನಡೆದ ಪ್ರತಿಭಟನೆಯು ನೇರ ಮತ್ತು ಪರೋಕ್ಷವಾಗಿ ಬಿಜೆಪಿ ಸರ್ಕಾರದ ಪ್ರಾಯೋಜಿತ ಕೃತ್ಯವಾಗಿದೆ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆರೋಪಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಸಹಿಷ್ಣುತೆಯನ್ನು ಹಿಂದಿನಿಂದಲೂ ಕಾಂಗ್ರೆಸ್ ವಿರೋಧಿಸುತ್ತಿದೆ. ಇಂತಹ ಹಿಂಸಾಚಾರದ ಪ್ರತಿಭಟನೆಯ ಮೂಲಕಕಾಂಗ್ರೆಸ್ನ ಜನಪರ ಧ್ವನಿಯನ್ನು ಮುಚ್ಚಿಸಲು ಬಿಜೆಪಿ ಯತ್ನಿಸುತ್ತಿರುವು ಮೂರ್ಖತನವಾಗಿದೆ. ರಾಜ್ಯವನ್ನು ಕೋಮುವಾದಿ ಮತ್ತು ಗೂಂಡಾಗಳ ಕೈಗೆ ಕೊಟ್ಟು ರಾಜ್ಯ ಸರ್ಕಾರ ಮೌನ ವಹಿಸಿದೆ. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದರು.
‘ಅನುಮತಿ ಪಡೆದು ಬ್ಯಾನರ್, ಫ್ಲೆಕ್ಸ್ ಅಳವಡಿಸಿದರೆ, ತೆಗೆಯುವ ಅಧಿಕಾರ ಇರುವುದಿಲ್ಲ. ಆದರೆ, ಇದನ್ನು ಅಳವಡಿಸುವ ಉದ್ದೇಶ ಕೂಡ ಸರಿಯಾಗಿರಬೇಕು. ನನ್ನ ಕ್ಷೇತ್ರದಲ್ಲಿ ಹಾಕಿರುವ ಬ್ಯಾನರ್ ನೋಡಿ ಜನರು ನಕ್ಕಿದ್ದಾರೆಯೇ ಹೊರತು ತೆಗೆದಿಲ್ಲ. ಅನಧಿಕೃತ ಬ್ಯಾನರ್ ಅನ್ನು ಸಂಬಂಧಪಟ್ಟವರೇ ತೆಗೆಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಮುಖರಾದ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್ ಶೆಟ್ಟಿ, ದೀಪಕ್ ಪಿಲಾರ್, ಶೌಕತ್ ಅಲಿ, ದೇವಾನಂದ ಶೆಟ್ಟಿ, ಚಂದ್ರಿಕಾ ರೈ, ಫಾರೂಕ್, ಪುರುಷೋತ್ತಮ ಶೆಟ್ಟಿ, ರೆಹಮಾನ್, ಅಚ್ಚುತ ಗಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.