ಪುತ್ತೂರು: ಮಹಿಳೆಯೊಬ್ಬರು ನೀರು ಎತ್ತುತ್ತಿದ್ದ ವೇಳೆ ಎಡವಿ ಬಾವಿಗೆ ಬಿದ್ದ ಮತ್ತು ಆಕೆಯನ್ನು ರಕ್ಷಿಸಲು ಹೋದ ಪತಿಯೂ ಬಾವಿಯಲ್ಲೇ ಬಾಕಿಯಾದ ವಿದ್ಯಾಮಾನ ತಾಲ್ಲೂಕಿನ ಕೆಯ್ಯೂರಿನಲ್ಲಿ ಸೋಮವಾರ ನಡೆದಿದೆ. ಬಳಿಕ ಅವರಿಬ್ಬರನ್ನು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಕೆಯ್ಯೂರು ಗ್ರಾಮದ ಮಾಡಾವು ಸಮೀಪದ ಸಣಂಗಳ ನಿವಾಸಿ ಸದಾಶಿವ ರೈ ಮತ್ತು ಅವರ ಪತ್ನಿ ಸುನಂದಾ ಪ್ರಾಣಾಪಾಯದಿಂದ ಪಾರಾದವರು.
ಸುನಂದಾ ಅವರು ಸೋಮವಾರ ಬೆಳಿಗ್ಗೆ 60 ಅಡಿ ಆಳವಿರುವ ಮತ್ತು 20 ಅಡಿಯಷ್ಟು ನೀರು ತುಂಬಿಕೊಂಡಿದ್ದ ಬಾವಿಯಿಂದ ನೀರು ಮೇಲೆತ್ತುವ ವೇಳೆ ಎಡವಿ ಬಿದ್ದಿದ್ದಾರೆ. ರಕ್ಷಣೆಗಾಗಿ ಬಾವಿಗಿಳಿದ ಅವರ ಪತಿ ಸದಾಶಿವ ರೈ ಅವರು ಪತ್ನಿಯನ್ನು ಬಾವಿಯಿಂದ ಮೇಲೆತ್ತಲಾಗದೆ ಅವರೂ ಅಪಾಯದಲ್ಲಿ ಸಿಲುಕಿದ್ದರು. ಅವರಿಬ್ಬರು ಪಂಪ್ಗೆ ಹಾಕಿದ್ದ ಹಗ್ಗ ಹಿಡಿದುಕೊಂಡು ಬಾವಿಯಲ್ಲೇ ಬಾಕಿಯಾಗಿದ್ದರು.
ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರು ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್ ಅವರ ನೇತೃತ್ವದ ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ಬಾವಿಯಲ್ಲಿದ್ದ ದಂಪತಿಯನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸಿದರು. ಪ್ರಮುಖ ಅಗ್ನಿಶಾಮಕ ರುಕ್ಮಯ್ಯ ಗೌಡ, ಸಿಬ್ಬಂದಿ ಮುಂಜುನಾಥ್, ಚಾಲಕ ಮೋಹನ್ ಜಾದವ್, ಗೃಹರಕ್ಷಕ ದಳದ ಚಂದ್ರಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.