ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ.
ಭಾನುವಾರ ಮುಂಜಾನೆ ಸುರಿದ ಗಾಳಿಮಳೆಗೆ ಸುಳ್ಯ ತಾಲ್ಲೂಕಿನ ಗುತ್ತಿಗಾರು ಗ್ರಾಮದ ಚಿಕ್ಮುಳಿ ನಿವಾಸಿ ಕಾಯರ ಸೂರಪ್ಪ ಗೌಡರ ಮನೆಗೆ ಮರ ಬಿದ್ದು ಚಾವಣಿಗೆ ಹಾನಿಯಾಗಿದೆ. ಅಲ್ಲದೆ, ಚಾವಣಿಗೆ ಅಳವಡಿಸಿದ್ದ ಹೆಂಚುಗಳು ಸಂಪೂರ್ಣ ಧ್ವಂಸವಾಗಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರಾದ ಶಾರದಾ ಎಂ.ಕೆ, ಭರತ್ ಕೆ.ವಿ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಬ್ರಹ್ಮಣ್ಯ ಸೇರಿದಂತೆ ಬಾಳುಗೋಡು, ಹರಿಹರ– ಪಲ್ಲತ್ತಡ್ಕ, ಕಲ್ಮಕಾರು, ಗುತ್ತಿಗಾರು, ಪಂಜ, ಬಳ್ಪ, ಏನೆಕಲ್, ನಿಂತಿಕಲ್, ಬಿಳಿನೆಲೆ, ನೆಟ್ಟಣ ನಿರಂತರ ಮಳೆಯಾಗಿದೆ.
ತಡೆಗೋಡೆ ಕುಸಿದು ಮನೆಗೆ ಹಾನಿ
ಪುತ್ತೂರು: ತಾಲ್ಲೂಕಿನ ಇರ್ದೆ ಜನತಾ ಕಾಲೊನಿಯಲ್ಲಿ ಮನೆಯ ಸಮೀಪದ ತಡೆಗೋಡೆ ಕುಸಿದು ಬಿದ್ದು ಮನೆ ಮತ್ತು ಶೌಚಾಲಯಕ್ಕೆ ಹಾನಿಯಾಗಿದೆ.
ಮರಿಯಮ್ಮ ಅವರ ಮನೆಯ ಪಕ್ಕದಲ್ಲಿರುವ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿದ್ದ ತಡೆಗೋಡೆ ಮಳೆಯಿಂದಾಗಿ ಕುಸಿದು ಬಿದ್ದಿದೆ. ಸುಮಾರು ₹ 60 ಸಾವಿರ ನಷ್ಟ ಸಂಭವಿಸಿ ರಬಹುದೆಂದು ಅಂದಾಜಿಸಲಾಗಿದೆ.
ಬೆಟ್ಟಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಮ್ಯಾ, ಗ್ರಾಮಕರಣಿಕ ಕನಕ ರಾಜ್, ಪಂಚಾಯಿತಿ ಸದಸ್ಯರಾದ ಮೊಯ್ದು ಕುಂಞ ಕೋನಡ್ಕ, ಮಹಾಲಿಂಗ ನಾಯ್ಕ, ಗ್ರಾಮ ಸಹಾಯಕ ವಿಜಯ ಪಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.