ಮಂಗಳೂರು: ವಾರಾಂತ್ಯದ ಲಾಕ್ಡೌನ್ ಹಿಂಪಡೆಯಬೇಕು. ಇಲ್ಲವಾದಲ್ಲಿ ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಪಾದರಕ್ಷೆ, ಜವಳಿಯನ್ನು ಸೇರಿಸಿ, ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕರಾವಳಿ ಟೆಕ್ಸ್ಟೈಲ್ಸ್ ಮತ್ತು ಫುಟ್ವೇರ್ ಡೀಲರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ಸಂತೋಷ ಕಾಮತ್, ‘ಈ ಸಂಬಂಧ ಗುರುವಾರ ನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಟಾಸ್ಕ್ಫೋರ್ಸ್ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ’ ಎಂದರು.
ವಾರಾಂತ್ಯದ ಲಾಕ್ಡೌನ್ ನಿಷ್ಪ್ರಯೋಜಕವಾಗಿದೆ. ಕೋವಿಡ್ ನಿಯಂತ್ರಿಸಲು ಬಿಗು ಕ್ರಮ ವಹಿಸುವುದಾದಲ್ಲಿ ಆಸ್ಪತ್ರೆ, ಔಷಧಾಲಯ, ಪತ್ರಿಕೆಗಳನ್ನು ಹೊರತುಪಡಿಸಿ, ಉಳಿದ ಎಲ್ಲ ವ್ಯವಹಾರಗಳನ್ನು ಬಂದ್ ಮಾಡಬೇಕು. ಒಂದನೇ ಮತ್ತು ಎರಡನೇ ಲಾಕ್ಡೌನ್ನಲ್ಲಿ ಬಟ್ಟೆ, ಪಾದರಕ್ಷೆ, ಫ್ಯಾನ್ಸಿ ಮತ್ತು ಮೊಬೈಲ್ ಅಂಗಡಿ ತೆರೆಯಲು ಅವಕಾಶ ನಿರಾಕರಿಸಿದ್ದರಿಂದ ಜನರು ತೊಂದರೆ ಅನುಭವಿಸಿದ್ದಾರೆ. ವ್ಯಾಪಾರಸ್ಥರ ಬದುಕು ಸಹ ಕಷ್ಟಕ್ಕೆ ಸಿಲುಕಿದೆ. ಲಾಕ್ಡೌನ್ ಸಂದರ್ಭದಲ್ಲಿ ತರಕಾರಿ, ಹಣ್ಣು, ದಿನಸಿಗೆ ಅವಕಾಶ ನೀಡಿದಂತೆ, ಬಟ್ಟೆ, ಪಾದರಕ್ಷೆ ವ್ಯಾಪಾರಕ್ಕೂ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ಎಂ.ಪಿ. ದಿನೇಶ್, ಸುಲೋಚನಾ ಭಟ್, ಸಯೀದ್ ಇಸ್ಮಾಯಿಲ್, ಸಂತೋಷ್ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.