ADVERTISEMENT

ಜಗಳೂರು | ಕೊಂಡುಕುರಿ ವನ್ಯಧಾಮದಲ್ಲಿ ದೈತ್ಯ ಉಡ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 3:45 IST
Last Updated 4 ಜೂನ್ 2020, 3:45 IST
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮ ಪ್ರದೇಶದಲ್ಲಿ ಕಾಣಿಸಿಕೊಂಡ ದೈತ್ಯ ಉಡ
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮ ಪ್ರದೇಶದಲ್ಲಿ ಕಾಣಿಸಿಕೊಂಡ ದೈತ್ಯ ಉಡ   

ಜಗಳೂರು:ನಿರಂತರ ಬೇಟೆಯ ಪರಿಣಾಮ ವಿನಾಶದ ಅಂಚಿಗೆ ತಲುಪಿರುವ ದೈತ್ಯ ಗಾತ್ರದ ಉಡ (ಇಂಡಿಯನ್ ಮಾನಿಟರ್ ಲಿಜಾರ್ಡ್) ತಾಲ್ಲೂಕಿನ ಕೊಂಡುಕುರಿ ಸಂರಕ್ಷಣಾಧಾಮದಲ್ಲಿ ಕಂಡುಬಂದಿದೆ.

ಆರು ಅಡಿಗೂ ಉದ್ದವಿರುವ ಬೃಹತ್ ಗಾತ್ರದ ಉಡ ಅರಣ್ಯದ ಮಧ್ಯಭಾಗದಲ್ಲಿ ಕಂಡು ಬಂದಿದೆ. ಬೆಂಗಾಲಿ ಮಾನಿಟರ್ ಅಥವಾ ಇಂಡಿಯನ್ ಮಾನಿಟರ್ ಲಿಜಾರ್ಡ್ ಎಂದು ಕರೆಯಲಾಗುವ ಸರಿಸೃಪ ಪ್ರಭೇಧದ ಈ ಉಡದ ವೈಜ್ಞಾನಿಕ ಹೆಸರು ‘ವೆರಾನಸ್ ಬೆಂಗಾಲೆನ್ಸಿಸ್’.

ಉಡದ ಎಣ್ಣೆಯ ತೈಲ ಹಲವು ರೋಗಗಳಿಗೆ ರಾಮಬಾಣ ಎಂಬ ಮೂಢನಂಬಿಕೆ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಕಳ್ಳಬೇಟೆಯಿಂದ ಭಾರತೀಯ ಉಡದ ಸಂತತಿ ಕ್ಷೀಣಿಸುತ್ತಿದೆ.

ADVERTISEMENT

‘ಒಂದೂ ಮುಕ್ಕಾಲು ಮೀಟರ್ ಉದ್ದದವರೆಗೆ ಇರುವ ಉಡ ಸಾಮಾನ್ಯವಾಗಿ ಎಲ್ಲಾ ಕಾಡುಗಳಲ್ಲೂ ಕಾಣಬಹುದಾಗಿದೆ. ಕೊಂಡುಕುರಿ ಧಾಮದಲ್ಲಿ ಕಂಡುಬಂದಿರುವ ಮರಿ ಉಡ ಇದಾಗಿದ್ದು, ಉತ್ತಮ ಗಾತ್ರದ್ದಾಗಿದೆ’ ಎಂದು ರಾಜ್ಯ ವನ್ಯಜೀವಿ ಸಲಹಾ ಮಂಡಳಿ ಸದಸ್ಯ ಸಂಜಯ್ ಗುಬ್ಬಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಸೇವಾವಧಿಯಲ್ಲಿ ಇಷ್ಟು ದೊಡ್ಡ ಗಾತ್ರದ ಉಡವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಕೊಂಡುಕುರಿ ಧಾಮ ಘೋಷಣೆಯ ನಂತರ ವನ್ಯ ಪ್ರಾಣಿಗಳ ಬೇಟೆಯ ನಿಯಂತ್ರಣ ಮತ್ತು ಉತ್ತಮ ಸಂರಕ್ಷಣೆಯಿಂದ ಸರಿಸೃಪಗಳು ಸೇರಿ ಎಲ್ಲಾ ಪ್ರಾಣಿ, ಪಕ್ಷಿ ಸಂಕುಲದ ಸಂತತಿಯ ಅತ್ಯುತ್ತಮ ಆವಾಸ ಸ್ಥಾನವಾಗಿ ಈ ಅರಣ್ಯ ಮಹತ್ವ ಪಡೆದಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.